Published
10 months agoon
By
Akkare Newsಮಂಗಳೂರು: ಲಾರಿ ಚಾಲಕನೋರ್ವ ನಿರ್ಲಕ್ಷ್ಯದ ಚಾಲನೆ ಮಾಡಿ ರಸ್ತೆ ಬದಿಯಲ್ಲಿದ್ದ ವಾಹನ ಹಾಗೂ ಜನರಿಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಮುಲ್ಕಿಯಲ್ಲಿ ನಡೆದಿದೆ.
ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಜಂಕ್ಷನ್ ನಲ್ಲಿ ಉಡುಪಿ ಕಡೆಯಿಂದ ಬಂದ ಮೈನ್ಸ್ ಸಾಗಾಟದ ಖಾಲಿ ಲಾರಿ ಅತೀ ವೇಗದಿಂದ ಏಕಾಏಕಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬಂದಿದೆ. ಈ ವೇಳೆ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಒಂದು ಸ್ಕೂಟರ್, ಒಂದು ಆಟೋಗೆ ಡಿಕ್ಕಿ ಹೊಡೆದಿದ್ದು ಎರಡು ವಾಹನವೂ ಪಲ್ಟಿಯಾಗಿ ರಸ್ತೆಯಿಂದ ಎಸೆಯಲ್ಪಟ್ಟಿದೆ. ಜೊತೆಗೆ ಅಲ್ಲೇ ಇದ್ದ ಟ್ರಾಫಿಕ್ ಹೆಡ್ ಕಾಸ್ಟೇಬಲ್ ಗೀತಾ ಎಂಬವರಿಗೂ ಗಾಯವಾಗಿದೆ.
ಸ್ಕೂಟರ್ ನಲ್ಲಿ ಸ್ಥಳೀಯ ಅಪಾರ್ಟ್ ಮೆಂಟ್ ನ ವಾಚ್ ಮ್ಯಾನ್ ಸಂಗಪ್ಪ ಎಂಬವರು ತನ್ನ ಮಗಳನ್ನು ಕೂರಿಸಿಕೊಂಡು ಹೋಗುತ್ತಿದ್ದು, ಸಂಗಪ್ಪ ಅವರಿಗೆ ಗಂಭೀರ ಗಾಯವಾಗಿವೆ. ಮಗಳು ಸವಿತಾಗೆ ಸಣ್ಣಪುಟ್ಟ ಗಾಯವಾಗಿದೆ. ಆಟೋದಲ್ಲಿದ್ದ ಚಾಲಕ ಸ್ಥಳೀಯ ನಿವಾಸಿ ಧರ್ಮೆಂದ್ರರವರಿಗೂ ಸಣ್ಣಪುಟ್ಟ ಗಾಯವಾಗಿದೆ. ರಸ್ತೆ ಬದಿಯಲ್ಲಿ ಸುಮಾರೂ ಹತ್ತಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರಿದ್ದು ಯಾರಿಗೂ ಯಾವುದೇ ತೊಂದರೆಯಾಗದೆ ಪಾರಾಗಿದ್ದಾರೆ.
ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಿಕೊಂಡ ಮುಲ್ಕಿ ಪೊಲೀಸರು ಚಾಲಕ ಧಾರವಾಡ ಮೂಲದ ಮಂಜುನಾಥನನ್ನು ಬಂಧಿಸಿದ್ದಾರೆ.