ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಕಟೀಲು ಮೇಳಕ್ಕೆ ರಾತ್ರಿ ಯಕ್ಷಗಾನ ನಡೆಸಲು ಅನುಮತಿ ನೀಡಿದ ಹೈಕೋರ್ಟ್‌

Published

on

ಯಕ್ಷಗಾನವು ರಾತ್ರಿ 12.30ರ ವರೆಗೆ ಮಾತ್ರ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದರು. ನಿಗದಿತ ಶಬ್ದ ಪ್ರಮಾಣ (ಡೆಸಿಬಲ್‌) ಮೀರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಟೀಲು ದೇವಸ್ಥಾನದ ಭಕ್ತ ಕೃಷ್ಣಕುಮಾರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕೋವಿಡ್‌ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳಂತೆ ನಿರ್ಬಂಧ ವಿಧಿಸಲಾಗಿದೆ. ಯಕ್ಷಗಾನ ಮೇಳಗಳು ಸಂಜೆಯಿಂದ ಬೆಳಿಗ್ಗಿನವರೆಗೆ ಪ್ರದರ್ಶನಗಳನ್ನು ನೀಡುತ್ತವೆ. ಚೌಕಿ ಪೂಜೆ, ಪ್ರಾರ್ಥನೆ, ಆರತಿಯನ್ನು ಸಲ್ಲಿಸಿದ ನಂತರ ಯಕ್ಷಗಾನ ಆರಂಭವಾಗುವ ಹೊತ್ತಿಗೆ ರಾತ್ರಿ 9 ಆಗಿರುತ್ತದೆ. ರಾತ್ರಿ 12.30ರ ಒಳಗೆ ಯಕ್ಷಗಾನದ ಪೂರ್ಣ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಯಕ್ಷಗಾನ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು ಎಂದು ಇದೇ ಸಮಯದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಿಳಿಸಿದರು. ಯಕ್ಷಗಾನ ಪ್ರದರ್ಶನದ ವೇಳೆ ಶಬ್ದ ಮಾಲಿನ್ಯ ನಿಯಮ–2000 ಸೇರಿದಂತೆ ಯಾವುದೇ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅರ್ಜಿ ಪುರಸ್ಕರಿಸಿದರು. ಕೋವಿಡ್‌–19 ಪೂರ್ವದಲ್ಲಿ ಚಾಲ್ತಿಯಲ್ಲಿ ಇದ್ದಂತೆ ಯಕ್ಷಗಾನ ಪ್ರದರ್ಶನ ನೀಡಲು ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರವು ಅನುಮತಿ ನೀಡಬೇಕು. ಅರ್ಜಿದಾರರು ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಕ್ತವಾಗಿರುತ್ತಾರೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಆದೇಶದಲ್ಲಿ ತಿಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement