ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಗ್ಯಾರಂಟಿಯಿಂದ ಮಹಿಳೆಯರಿಗೆ ಸ್ವಾಭಿಮಾನದ ಬದುಕು: ಮಮತಾ ಗಟ್ಟಿ

Published

on

ಮಂಗಳೂರು, ಏ.17, 2024 ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಬಹು ಮುಖ್ಯವಾಗಿ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು, ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ವಾರ್ಷಿಕ ತಲಾ ಒಂದು ಲಕ್ಷ ರೂ. ಗ್ಯಾರಂಟಿಯೊಂದಿಗೆ ಹಲವು ಇತರ ಗ್ಯಾರಂಟಿಗಳು ಜಾರಿಯಾಗಲಿವೆ. ಕಾಂಗ್ರೆಸ್ ನುಡಿದಂತೆ ನಡೆಯಲಿದೆ ಎಂದು ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಬಗ್ಗೆ ಮಾತನಾಡುವ ಬಿಜೆಪಿ ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕೇವಲ ಎರಡು ಸ್ಥಾನ ಮಾತ್ರ ಮಹಿಳೆಯರಿಗೆ ನೀಡಿದೆ ಕಾಂಗ್ರೆಸ್ ರಾಜ್ಯದಲ್ಲಿ ಮಹಿಳೆಯರಿಗೆ ಐದು ಸ್ಥಾನಗಳನ್ನು ನೀಡಿದೆ. ಪ್ರಧಾನಿ ಮೋದಿಯವರು ಶೇ.33 ಮೀಸಲಾತಿಯನ್ನು ಘೋಷಣೆ ಮಾತ್ರ ಮಾಡಿದ್ದಾರೆ. ಆದರೆ ಅನುಷ್ಠಾನ ಮಾಡಿಲ್ಲ. ಈ ರೀತಿಯ ಮೋಸವನ್ನು ಕಾಂಗ್ರೆಸ್ ಮಾಡುವುದಿಲ್ಲ ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ನೇತೃತ್ವದ ಸರಕಾರ ದೇಶದಲ್ಲಿ ಆಡಳಿತಕ್ಕೆ ಬಂದಾಗ ದೇಶದಲ್ಲಿ ಒಂದು ಸೂಜಿ ಫ್ಯಾಕ್ಟರಿಯೂ ಇರಲಿಲ್ಲ. ಬಳಿಕ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಎಂದು ಹೇಳಿದ ಅವರು, ದ.ಕ. ಜಿಲ್ಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತ ಪಾಲನೆ ಹಾಗೂ ಅನುಸರಣೆ ಮಾಡಿಕೊಂಡು ಬಂದಿರುವ ಅಭ್ಯರ್ಥಿಯನ್ನು ಈ ಬಾರಿ ಕಣಕ್ಕಿಳಿಸಲಾಗಿದೆ. ಜಾತ್ಯತೀತ ತತ್ವದ ಆದರ್ಶ ನಾಯಕ ಅವರಾಗಿದ್ದು, ಜನಾರ್ದನ ಪೂಜಾರಿ ಕಾಲದವರೆಗೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಬಳಿಕ ಕಳೆದ 33 ವರ್ಷಗಳಲ್ಲಿ ಬಿಜೆಪಿ ಧರ್ಮ- ಕೋಮು ಎತ್ತಿಕಟ್ಟಿ ದ್ವೇಷ ಬಿತ್ತಿ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದರು.







ಕೇಂದ್ರದಲ್ಲಿ ಹತ್ತು ವರ್ಷ ಆಳ್ವಿಕೆ ಮಾಡಿದ ಮೋದಿ ನೀಡಿದ್ದು ಬರೀ ಮೋಸ. ಲೀಟರ್‌ಗೆ 57 ರೂ.ಗಳಿದ್ದ ಪೆಟ್ರೋಲ್ ಬೆಲೆ 98 ರೂ.ಗಳಿಗೆ ಏರಿಕೆಯಾಗಿದೆ. ಜಿಎಸ್‌ಟಿಯನ್ನು ಪ್ರತಿಯೊಂದು ವಸ್ತುವಿನ ಮೇಲೆ ಹಾಕಲಾಗಿದೆ. ಕಪ್ಪು ಹಣ ತರುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಆ ಕಾರ್ಯ ಮಾಡೇ ಇಲ್ಲ. ಜನಧನ್ ನಿಂದ ಸಂಗ್ರಹಿಸಿದ 35 ಸಾವಿರ ಲಕ್ಷ ಕೋಟಿ ಹಣ ಎಲ್ಲಿ ಹೋಗಿದೆ ಕೇಳುವವರಿಲ್ಲ. ನೋಟ್ ಬ್ಯಾನ್ ಮಾಡಿ 17 ಲಕ್ಷ ಕೋಟಿ ದೇಶದ ಹಣ ಪೋಲಾಗಿದೆ. 3 ಸಾವಿರ ನೋಟು ಮಾಡಿ ಮೂರೇ ವರ್ಷದಲ್ಲಿ ವಾಪಸ್ ಪಡೆಯಲಾಯಿತು. ಯುವಕರಿಗೆ ಹೇಳಿದಷ್ಟು ಉದ್ಯೋಗ ನೀಡಲಿಲ್ಲ. ಇವರು ಜನರಿಗೆ ನೀಡಿದ ಸಹಕಾರ ಏನು? ಎಲೆಕ್ಟೋರಲ್ ಬಾಂಡ್‌ನಲ್ಲೂ ಲೂಟಿ ಮಾಡಿದ್ದಾರೆ. ಇದನ್ನೆಲ್ಲಾ ನೋಡಿ ಜನ ಎಚ್ಚೆತ್ತುಕೊಂಡಿದ್ದಾರೆ. ಮೋಸಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

ಪದ್ಮರಾಜ್ ಎಲ್ಲ ಧರ್ಮ ಹಾಗೂ ಜಾತಿಗಳ ನಾಯಕ ಜಿಲ್ಲೆಯಿಂದ ಅತ್ಯುತ್ತಮ ಸಂದೇಶ ಹೋಗಬೇಕು. ದ.ಕ. ಮತ್ತೆ ಅಭಿವೃದ್ಧಿಯ ಪಥದಲ್ಲಿ ಸಾಗಲು ಜನರೂ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಮತಾ ಗಟ್ಟಿ ಇಷ್ಟು ಬಾರಿ ಮಂಗಳೂರಿಗೆ ಬಂದ ಪ್ರಧಾನಿ ಮೋದಿಯವರಿಗೆ ಈ ಬಾರಿ ಮಾತ್ರ ಯಾಕೆ ನಾರಾಯಣ ಗುರುಗಳ ನೆನಪಾಗಿದ್ದು, ಇದೆಲ್ಲಾ ಚುನಾವಣಾ ರಾಜಕೀಯ. ಕಾಂಗ್ರೆಸ್ ಅಭಿವೃದ್ಧಿ ರಾಜಕೀಯ ಮಾತ್ರ ಮಾಡಿದೆ ಎಂದರು.ಸಬಿತಾ ಮಿಸ್ಮಿತ್, ಗೀತಾ, ಚಂದ್ರಕಲಾ, ಶಶಿಕಲಾ, ಮಂಜುಳಾ ನಾಯಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement