ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಅಂಬಿಕಾ ಕ್ಯಾಂಪಸ್ ತೆರಳುವ ಅಗಲೀಕರಣಗೊಂಡ ರಸ್ತೆ ಉದ್ಘಾಟನೆ ನಗರ ಬೆಳೆಯಬೇಕಾದರೆ ರಸ್ತೆಗಳು ಸಮರ್ಪಕವಾಗಿರಬೇಕು:ಅಶೋಕ್ ಕುಮಾ‌ರ್ ರೈ

Published

on

ಪುತ್ತೂರು:ಕಳೆದ 11 ವರ್ಷಗಳಿಂದ ಬಪ್ಪಳಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗೆ ತೆರಳುವ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಸಮಸ್ಯೆಯನ್ನು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಇತ್ಯರ್ಥಗೊಂಡು, ನಿರ್ಮಾಣಗೊಂಡ ರಸ್ತೆಯು ಮೇ.11ರಂದು ಉದ್ಘಾಟನೆಗೊಂಡಿತು.

ದೀಪ ಬೆಳಗಿಸಿ ರಸ್ತೆ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾ‌ರ್ ರೈ ಮಾತನಾಡಿ, ಶಾಸಕನಾಗಿ ಆಯ್ಕೆಯಾದ ಪ್ರಾರಂಭದಲ್ಲಿಯೇ ರಸ್ತೆ ಸಮಸ್ಯೆಯ ಬಗ್ಗೆ ಅಂಬಿಕಾ ಸಂಸ್ಥೆಯವರು ಮನವಿ ಮಾಡಿದ್ದರು. ನಾನು ಭರವಸೆ ನೀಡಿರಲಿಲ್ಲ.


ಪ್ರಯತ್ನ ಮಾಡುವುದಾಗಿ ತಿಳಿಸಿದ್ದೆ. ಇದಕ್ಕಾಗಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿತ್ತಾದರೂ ಈ ಸಮಸ್ಯೆಯನ್ನು ಮಾತುಕತೆ ಮೂಲಕ ಮಾತ್ರ ಪರಿಹಾರ ಸಾಧ್ಯ ಎನ್ನುವುದು ಗಮನಕ್ಕೆ ಬಂದಿದೆ. ಇರದಲ್ಲಿ ಕೈವಾಡಗಳಿದ್ದವು. ಅನಗತ್ಯ ಒತ್ತಡಗಳಿತ್ತು. ರಸ್ತೆ ಮಾಡುವ
ಸಂದರ್ಭದಲ್ಲೂ ಕಾಮಗಾರಿ ನಿಲ್ಲುಸುವಂತೆ ನನಗೆ ಒತ್ತಡಗಳು ಬಂದಿದ್ದವು.

ಆದರೂ ಎರಡೂ ಪಾರ್ಟಿಯನ್ನು ಒಪ್ಪಿಸಲಾಗಿದೆ. ಹೀಗಾಗಿ ರಸ್ತೆ ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಅವರಿಗೆ ತಿಳಿಸಿದ್ದೇನೆ ಎಂದರು. ವಿದ್ಯಾ ಸಂಸ್ಥೆಗಳು ಬೆಳೆಯಲು ರಸ್ತೆ ಸೌಲಭ್ಯ ಬಹುಮುಖ್ಯ. ಶಿಕ್ಷಣ ಸಂಸ್ಥೆಗಳಿಗೆ ಸರಿಯಾದ ರಸ್ತೆ ಮಾಡಲು ಸಾಧ್ಯವಿಲ್ಲವಾದರೆ ಜನಪ್ರತಿನಿಧಿಗಳು ಯಾಕೆ ಎಂದರು ಪ್ರಶ್ನಿಸಿದರು. ಇದೇ ರೀತಿ ಇತರ ಮೂರು ಸಮಸ್ಯೆಗಳನ್ನು ಪರಿಹರಿಸಲಾಗಿದೆ.

ಎಲ್ಲಿಯೂ ಒತ್ತಡ ಮಾಡಿಲ್ಲ. ಎರಡು ಕಡೆಯವರನ್ನು ಮನವೊಲಿಸಲಾಗಿದೆ. ಇಲ್ಲಿಯೂ ಕಾನೂನು ಹೋರಾಟ ಮಾಡುತ್ತಿದ್ದ ದಿನೇಶ್ ಮನವೊಳಿಸಲಾಗಿದ್ದು ಅವರು ಸಹಕಾರ ನೀಡಿದ್ದಾರೆ. ದಿನೇಶ್ ರವರು ಪರಿಹಾರ ಕೇಳಿದ್ದು ಅದಕ್ಕೆ ನೀಡಲು ಅಂಬಿಕಾ ಸಂಸ್ಥೆಯವರು ಒಪ್ಪಿದ್ದಾರೆ. ಅಂಬಿಕಾ ಸಂಸ್ಥೆಯು ಇನ್ನಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆದು ಪುತ್ತೂರಿನ ಹಿರಿಮೆಗೆ ದೊಡ್ಡ ಕೊಡುಗೆ ನೀಡಲಿ.

ವಿಸ್ತರಣೆಯಾಗಿರುವ ರಸ್ತೆ ಮುಂದಿನ ದಿನಗಳಲ್ಲಿ ನಗರ ಸಭೆಯಿಂದ ಕಾಂಕ್ರಿಟೀಕರಣ ಹಾಗೂ ಚರಂಡಿಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬಿಕ ಸಂಸ್ಥೆಯ ಇತಿಹಾಸದಲ್ಲಿ ಇದೊಂದು ಸ್ವರ್ಣಯುಗ. ಅಂಬಿಕಾ ಸಂಸ್ಥೆಯ ಅಭಿವೃದ್ಧಿಯಲ್ಲಿ ಕಳೆದ 11 ವರ್ಷಗಳಿಂದ ಅಡೆತಡೆಗಳು ನಿವಾರಣೆಯಾಗಿದೆ. ನಮಗೆ ಸತ್ವ ಪರೀಕ್ಷೆ ಇದ್ದು ಅದರಲ್ಲಿ ಪಾಸ್ ಆಗಿದ್ದೇವೆ.

ನಮ್ಮ ಸಮಸ್ಯೆ ಪರಿಹರಿಸಲು ನಾವು ಹಲವು ಬಾರಿ ರಾಜಕೀಯ ಮುಖಂಡರ ಮನೆಗೆ ಹೋಗಿ ಬೇಡಿಕೊಂಡಿದ್ದೇವೆ. ಪರಿಹರಿಸಲು ಅವರಿಂದ ಆಗಿಲ್ಲ. ಈಗ ಕಾಲ ಕೂಡಿ ಬಂದಿದ್ದು ಅದಕ್ಕೆ ಇಚ್ಚೆ ಹಾಗೂ ಮನಸ್ಸಿರುವ ನೇತಾರ ಅಶೋಕ್‌ ದೊರಕಿದ್ದಾರೆ. ಅವರ ಯೋಗ. ಅವರ ಮೂಲಕ ರಸ್ತೆ ಉದ್ಘಾಟನೆಗೊಂಡಿದೆ. ಇದಕ್ಕಾಗಿ ಅಂಬಿಕಾ ಇಷ್ಟು ವರ್ಷ ಕಾಯಬೇಕಾಯಿತು. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ದೇಶ ಭಕ್ತರ ಪಡೆ ನಿರ್ಮಾಣದ ಉದ್ದೇಶದಿಂದ ಶಾಲೆ ಪ್ರಾರಂಭಿಸಲಾಗಿದೆ. ನಮ್ಮ ಸಮಸ್ಯೆ ಪರಿಹರಿಸಿಕೊಟ್ಟ ಶಾಸಕರಿಗೆ ಅಂಬಿಕಾ ಸಂಸ್ಥೆ ಚಿರ ಋಣಿಯಾಗಿದೆ.

ನಿಮ್ಮ ಮೂಲಕ ಸಂಸ್ಥೆಯ ಒಂದೂವರೆ ಸಾವಿರ ಮಕ್ಕಳು ಹಾಗೂ ಪೋಷಕರಿಗೆ ವರದಾನವಾಗಿದೆ. ಈಗ ದ್ವಿಪಥ ರಸ್ತೆಯಲ್ಲಿ ಓಡಾಡುವಂತಾಗಿದೆ ಎಂದ ಅವರು ಇದಕ್ಕಾಗಿ ಸಹಕರಿಸಿದ ನ್ಯಾಯವಾದಿ ಎನ್.ಕೆ ಜಗನ್ನೀವಾಸ ರಾವ್, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು ಹಾಗೂ ಜಯಪ್ರಕಾಶ್‌ ಬದಿನಾರುರವರಿಗೂ ಕೃತಜ್ಞತೆ ಸಲ್ಲಿಸಿದರು.







ನ್ಯಾಯವಾದಿ ಎನ್.ಕೆ ಜಗನ್ನಿವಾಸ ರಾವ್, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರಸನ್ನ ಎನ್ ಭಟ್, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಅಂಬಿಕಾ ಸಂಸ್ಥೆಯ ಉಪನ್ಯಾಸಕರು, ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಮಾಲತಿ ಡಿ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕಮ್ಮಾಜೆ ವಂದಿಸಿದರು.

ಶಾಸಕ ಅಶೋಕ್‌ ಕುಮಾರ್ ರೈಯವರಂತಹ ರಾಜಕೀಯ ನಾಯಕರು ಬೇಕು. ಸಮಾಜದ ಎಲ್ಲಾ ವರ್ಗದ ಕಣ್ಣೀರು ಒರೆಸುವ ನಾಯಕರು ಬೇಕು. ಶಾಸಕರು ಮನೆಯಲ್ಲೋ, ಕಚೇರಿಯಲ್ಲೋ ಕುಳಿತುಕೊಂಡು ಮಾರ್ಗದರ್ಶನ ಮಾಡುವುದಲ್ಲ. ರಸ್ತೆಗೆ ಇಳಿದು ಜನರ ನೋವಿಗೆ ಸ್ಪಂದಿಸಿ, ಕಣ್ಣಿರು ಒರೆಸುವವರು ಬೇಕಾಗಿದ್ದು ಅಶೋಕ್ ರೈಯವರು ಅದಕ್ಕೆ ಪೂರಕವಾಗಿದ್ದಾರೆ.

ಯಾವುದೇ ಪಕ್ಷದವರಾಗಲಿ. ಅಶೋಕ್ ರೈಯವರಂತಹ ನಾಯಕರು ದೇಶದಾದ್ಯಂತ ಆರಿಸಿ ಬರಬೇಕು. ಎಲ್ಲಾ ಪಕ್ಷದಲ್ಲಿ ಇಂತಹ ನಾಯಕರು ಬೇಕು. ಕರ್ನಾಟಕದ 224 ಕ್ಷೇತ್ರಗಳಲ್ಲಿಯೂ ಅಶೋಕ್ ಕುಮಾರ್ ರೈಯವರಂತಹ ಶಾಸಕರು ಆರಿಸಿ ಬಂದಾಗ ಸಮಾಜ, ದೇಶ ಅಭಿವೃದ್ಧಿ ಸಾಧ್ಯ.-ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು

Continue Reading
Click to comment

Leave a Reply

Your email address will not be published. Required fields are marked *

Advertisement