Published
3 days agoon
By
Akkare Newsಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ ಮೂವರಿಗೆ ನ್ಯಾಯಾಲಯ 1.25 ಕೋಟಿ ರೂಪಾಯಿ ದಂಡ ವಿಧಿಸಿದೆ. ತಪ್ಪಿದ್ದಲ್ಲಿ ಒಂದು ವರ್ಷ ಸಾಮಾನ್ಯ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ವಿಎಸ್ಎಲ್ ಸ್ಟೀಲ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಘೋಡ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೆ.ಎನ್ ಶಿವಕುಮಾರ್ ಅವರು ಬುಧವಾರ (ಏ.9) ಪ್ರಕಟಿಸಿದ್ದಾರೆ.
ಎನ್ಐ ಕಾಯ್ದೆ ಸೆಕ್ಷನ್ 138ರ ಅಡಿ ಮೆಸರ್ಸ್ ಬಿ ಸಿ ಇನ್ಫ್ರಾಸ್ಟ್ರಕ್ಚರ್ ಅಂಡ್ ರಿಸೋರ್ಸ್ ಕಂಪೆನಿ ಮತ್ತು ಅದರ ಪಾಲುದಾರರಾದ ಅನಿಲ್ ರಾಜಶೇಖರ್, ಚಂಡೂರು ಭಾಸ್ಕರ್ ಮತ್ತು ಬಿ. ನಾಗೇಂದ್ರ ಅವರನ್ನು ದೋಷಿಗಳು ಎಂದು ಘೋಷಿಸಲಾಗಿದ್ದು, 1.25 ಕೋಟಿ ರೂಪಾಯಿ ದಂಡ ಪಾವತಿಸಲು ಆದೇಶಿಸಲಾಗಿದೆ. ಹಣ ಪಾವತಿಸಲು ದೋಷಿಗಳು ವಿಫಲರಾದರೆ ಒಂದು ವರ್ಷ ಸಾಮಾನ್ಯ ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತದ ಪೈಕಿ 1,24,90,000 ರೂಪಾಯಿ ದೂರುದಾರರಿಗೆ ಪರಿಹಾರದ ರೂಪದಲ್ಲಿ, ಬಾಕಿ 10 ಸಾವಿರ ರೂಪಾಯಿ ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಿಲಾಗಿದೆ.
.
2013ರಲ್ಲಿ ವಿಎಸ್ಎಲ್ ಸ್ಟೀಲ್ಸ್ ಮತ್ತು ಬಿ ಸಿ ಇನ್ಫ್ರಾಸ್ಟ್ರಕ್ಚರ್ ಅಂಡ್ ರಿಸೋರ್ಸ್ ಕಂಪೆನಿ ನಡುವೆ ಹಣಕಾಸಿನ ವಿವಾದ ಸೃಷ್ಟಿಯಾಗಿದ್ದು, ಸಂಧಾನದ ಭಾಗವಾಗಿ ವಿಎಸ್ಎಲ್ ಸ್ಟೀಲ್ಸ್ಗೆ ಬಿ ಸಿ ಇನ್ಫ್ರಾಸ್ಟ್ರಕ್ಚರ್ 2.53 ಕೋಟಿ ರೂಪಾಯಿ ಪಾವತಿಸಬೇಕಿತ್ತು. ಇದರ ಭಾಗವಾಗಿ ಬಿ ಸಿ ಇನ್ಫ್ರಾಸ್ಟ್ರಕ್ಚರ್ 1 ಕೋಟಿ ಮೌಲ್ಯದ ಚೆಕ್ ನೀಡಿತ್ತು. ಅದು 2022ರಲ್ಲಿ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಎಸ್ಎಲ್ ಸ್ಟೀಲ್ಸ್ ಚೆಕ್ ಬೌನ್ಸ್ ದಾವೆ ಹೂಡಿತ್ತು.