Published
10 months agoon
By
Akkare News
ಪುತ್ತೂರು:ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯ ವೇಳೆ ಕಾಂಕ್ರೀಟ್ ಮಿಕ್ಸಿಂಗ್ ವಾಹನದಡಿಗೆ ಬಿದ್ದು ರಾಯಚೂರು ಮೂಲದ ಕಾರ್ಮಿಕ ಮಹಿಳೆಯೋರ್ವರು ಮೃತಪಟ್ಟ ಘಟನೆ ಬೆಟ್ಟಂಪಾಡಿ ಗ್ರಾಮದ ಬಿಲ್ವಗಿರಿ ಸಮೀಪ ನಡೆದಿದೆ.


ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೊಮ್ನಾಳ ಗ್ರಾಮದ ಬಸವರಾಜರವರ ಪತ್ನಿ ಗೌರಮ್ಮ(28ವ.)ಮೃತಪಟ್ಟವರು.ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜದಿಂದ ಬಿಲ್ವಗಿರಿ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕರ ರೂ.1 ಕೋಟಿ ಅನುದಾನದಲ್ಲಿ ಕಾಂಕ್ರಿಟೀಕರಣ ಕಾಮಗಾರಿಯು ಕೆಲ ದಿನಗಳಿಂದ ನಡೆಯುತ್ತಿದ್ದು ರಾಯಚೂರು ಮೂಲದ ಒಂದೇ ಕುಟುಂಬದ ಹಲವು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.

ಮೇ 23ರಂದು ಸಂಜೆ ಕೆಲಸ ಮಾಡುತ್ತಿರುವ ವೇಳೆ ಕಾಂಕ್ರೀಟ್ ಮಿಕ್ಸಿಂಗ್ ಮಿಲ್ಲರ್ ವಾಹನ ಹಿಂದಕ್ಕೆ ಚಲಿಸುತ್ತಿದ್ದ ಸಂದರ್ಭದಲ್ಲಿ ಗೌರಮ್ಮ ಅವರು ಆಕಸ್ಮಿಕವಾಗಿ ವಾಹನದ ಚಕ್ರದಡಿಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತಿ ಬಸವರಾಜ, ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.




ಕಾಮಗಾರಿ ಮುಕ್ತಾಯದ ಹಂತದಲ್ಲಿತ್ತು:
ಸುಮಾರು ಮೂರು ವಾರಗಳಿಂದ ಇಲ್ಲಿ ಕಾಮಗಾರಿ ನಡೆಯುತ್ತಿದ್ದು ಮೇ 23ರ ಸಂಜೆಯ ವೇಳೆಗೆ ಬಹುತೇಕ ಮುಕ್ತಾಯದ ಹಂತದಲ್ಲಿತ್ತು.ಆದರೆ ಸಂಜೆ ಐದು ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದ್ದು ಕಾರ್ಮಿಕ ಮಹಿಳೆಯು ಸ್ಥಳದಲ್ಲಿ ಉಸಿರು ಚೆಲ್ಲಿರುದ್ದಾರೆ.
ಸಂಪ್ಯ ಠಾಣಾ ಎಸ್.ಐ.ಜಂಬೂರಾಜ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪತಿ ಬಸವರಾಜ ಅವರು ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







