Published
1 day agoon
By
Akkare Newsಬಂಟ್ವಾಳ: ನಿನ್ನೆ ಸಂಜೆ ಕೊಲೆಯಾದ ಅಬ್ದುಲ್ ರಹೀಂ ಮೃತದೇಹ ಈಗ ಮಂಗಳೂರಿನ ಕುತ್ತಾರಿನಿಂದ ಬಂಟ್ವಾಳದ ಬಿ.ಸಿ. ರೋಡ್ ಸಮೀಪದ ಕೈಕಂಬ ಮಸೀದಿಗೆ ಆಗಮಿಸಲಿದೆ.
ಕೈಕಂಬದಲ್ಲಿ ಜನ ಜಮಾಯಿಸಿದ್ದು, ಮಳೆಯನ್ನೂ ಲೆಕ್ಕಿಸದೆ ಕಾಯುತ್ತಿದ್ದಾರೆ. ಕೈಕಂಬ ಮಸೀದಿಯಲ್ಲಿ ಅಂತಿಮ ದರ್ಶನ ನಡೆದ ಬಳಿಕ ಕೈಕಂಬ- ಕಲ್ಪನೆ- ಬೆಳ್ಳೂರು ಮೂಲಕ ಕೊಳತ್ತಮಜಲು ಮಸೀದಿಗೆ ಮೆರವಣಿಗೆ ಸಾಗಲಿದೆ. ಕೊಳತ್ತಮಜಲು ಮಸೀದಿಯ ದಫನ ಭೂಮಿಯಲ್ಲಿ ಪಾರ್ಥೀವ ಶರೀರದ ದಫನ ಕಾರ್ಯ ನಡೆಯಲಿದೆ. ಈ ಮಧ್ಯೆ ಫರಂಗಿಪೇಟೆ, ಕೈಕಂಬ ಪೇಟೆಗಳಲ್ಲಿ ಬುಧವಾರ ಬೆಳಗ್ಗಿನಿಂದಲೇ ಮುಸ್ಲಿಂ ಅಂಗಡಿಗಳು ಮುಚ್ಚಿದ್ದವು.
ಕೈಕಂಬದಲ್ಲಿ ಬೈಕ್ ಶೋ ರೂಂ ಮೇಲೆ ಕಲ್ಲು ತೂರಾಟ
ಶವಯಾತ್ರೆಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ , ಕೈಕಂಬದಲ್ಲಿ ಬೈಕ್ ಶೋ ರೂಂ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಶವಯಾತ್ರೆ ಇದ್ದರೂ ಬಂದ್ ಮಾಡಿಲ್ಲ ಎಂದು ಆಕ್ರೋಶಗೊಂಡ ಗುಂಪು ಕಲ್ಲು ತೂರಾಟ ನಡೆಸಿದೆ. ರಹೀಂ ಪಾರ್ಥೀವ ಶರೀರ ಆಗಮಿಸುವ ಕೆಲವೇ ಹೊತ್ತಿನ ಮೊದಲು ಘಟನೆ ನಡೆದಿದೆ. ತಕ್ಷಣವೇ ಪೊಲೀಸರು ಮಧ್ಯಪ್ರವೇಶ ಮಾಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಶೋ ರೂಂ ಬಂದ್ ಮಾಡಲು ಕಂಪನಿಯ ಅನುಮತಿ ಇಲ್ಲ ಎಂದು ಸಿಬ್ಬಂದಿ ವಾದಿಸಿದಾಗ, ಅದೇ ಪರಿಸರದ ಇತರ ಶೋ ರೂಂ ಮುಚ್ಚಿರುವುದನ್ನು ಗುಂಪು ತೋರಿಸಿದೆ. ಕೊನೆಗೂ ಸಿಬ್ಬಂದಿ ಅಂಗಡಿ ಶಟರ್ ಎಳೆದರು. ಈಗಾಗಲೇ ಕಲ್ಲು ತೂರಾಟ ನಡೆಸಿರುವ ಹಿನ್ನಲೆ ಶೋ ರೂಂ ಗಾಜಿನ ಬಾಗಿಲುಗಳಿಗೆ ಹಾನಿಯಾಗಿದೆ.