Published
9 months agoon
By
Akkare News
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ದ ಕಾರಿಂಜ ದೇವಸ್ಥಾನದ ಗದಾ ತೀರ್ಥ ಕೆರೆಯಲ್ಲಿ ಕಾಲು ತೊಳೆಯಲೆಂದು ಹೋದ ಕಾಲೇಜು ವಿದ್ಯಾರ್ಥಿಯೋರ್ವ ಜಾರಿ ಬಿದ್ದು ಮೃತಪಟ್ಟ ಘಟನೆ ಜೂ.7ರ ಶನಿವಾರ ಬೆಳಗ್ಗೆ ಸಂಭವಿಸಿದೆ.

ವಗ್ಗ ಕಾರಿಂಜ ಕ್ರಾಸ್ ಬಳಿಯ ಕಂಗಿತ್ತಿಲು ನಿವಾಸಿ ಶ್ರೀಧರ ಮೂಲ್ಯ ಅವರ ಪುತ್ರ, ಬಂಟ್ವಾಳ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಚೇತನ್ (19) ಮೃತಪಟ್ಟವರು.

ಚೇತನ್ ಪ್ರತಿ ಶನಿವಾರ ಕಾರಿಂಜ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ. ಅದೇ ರೀತಿ ಇಂದು (ಜೂ.7ರ ಶನಿವಾರ) ಸ್ನೇಹಿತ ಪ್ರಶ್ವಿತ್ ಜೊತೆಗೆ ದೇವಸ್ಥಾನಕ್ಕೆ ತೆರಳಿದ್ದ. ಈ ವೇಳೆ ದೇವಾಲಯದ ಕೆರೆಯಲ್ಲಿ ಕಾಲು ತೊಳೆಯಲು ಮೆಟ್ಟಿಲು ಇಳಿಯುತ್ತಿದ್ದಂತೆ ಚೇತನ್ ಕಾಲು ಜಾರಿ ಕೆರೆಯೊಳಗೆ ಬಿದ್ದಿದ್ದಾನೆ.



ಜೊತೆಯಲ್ಲಿದ್ದ ಗೆಳೆಯ ಪ್ರಶ್ವಿತ್ ಗೆ ಈಜು ಬರದ ಕಾರಣ ಆತ ಬೊಬ್ಬೆ ಹೊಡೆದು ಸ್ಥಳೀಯರನ್ನು ಕರೆದಿದ್ದಾನೆ. ಕೂಡಲೇ ಸ್ಥಳೀಯರು ಸೇರಿದ್ದು, ಶ್ರವಣ್ ಜೈನ್ ಹಾಗೂ ಉದಯ ಮಾಂಗಾಜೆ ಅವರು ಕೆರೆಗೆ ಹಾರಿ ಹುಡುಕಲು ಆರಂಭಿಸಿ, ಚೇತನ್ ನನ್ನು ಕೆರೆಯಿಂದ ಮೇಲಕ್ಕೆತ್ತಿ ಹಾಕಿದ್ದಾರೆ. ಆದರೆ ಅದಾಗಲೇ ಚೇತನ್ ಮೃತಪಟ್ಟಿದ್ದರು.
ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.









