Published
17 hours agoon
By
Akkare Newsಬೆಂಗಳೂರು : : ಕಾಲ್ತುಳಿತದ ಘಟನೆಯಿಂದ ರಾಜ್ಯ ಕಾಂಗ್ರೆಸ್ಗೆ ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಭಾರೀ ಡ್ಯಾಮೇಜ್ ಆಗಿದೆ. ಈ ದುರಂತದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ತುರ್ತಾಗಿ ದೆಹಲಿಗೆ ಬರಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ದಿಲ್ಲಿ ಪ್ರಯಾಣ ಬೆಳಸಲಿದ್ದು, ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ.
ಈ ಇಬ್ಬರೂ ನಾಯಕರಿಂದ ವರಿಷ್ಠರು ಕಾಲ್ತುಳಿತದ ವರದಿಯನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರಮುಖ ಬೆಳವಣಿಗೆ ಎಂದರೆ ಅತ್ತ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಹೈಕಮಾಂಡ್ ನಿಂದ ಬುಲಾವ್ ಬಂದಿದೆ ಎಂದು ತಿಳಿದುಬಂದಿದೆ.
ಈ ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ ಅವರು ಫೆಬ್ರವರಿಯಲ್ಲೇ ಅಧ್ಯಕ್ಷರ ಬದಲಾವಣೆಯ ಸುಳಿವು ನೀಡಿದ್ದರು. ಬದಾವಣೆ ಆಗಲಿದೆ, ಯಾವಾಗ ಮಾಡ್ತಾರೆ ಎನ್ನುವುದು ಕಾದು ನೋಡೋಣ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆಂದು ಸತೀಶ್ ಜಾರಕಿಹೊಳಿ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಿಎಂ ಹಾಗೂ ಡಿಸಿಎಂ ಅವರ ನಡುವೆ ತೀವ್ರ ಪ್ರಮಾಣದ ಆಂತರಿಕ ಜಿದ್ದಾಜಿದ್ದಿ ಗುದ್ದಾಟ ನಡೆಯುತ್ತಿದೆ. ಈ ಸಂಗತಿ ಸೇರಿದಂತೆ ಜೊತೆಗೆ ವಿಧಾನಪರಿಷತ್ ಸದಸ್ಯರ ನೇಮಕಾತಿ ಕುರಿತಂತೆಯೂ ಹೈಕಮಾಂಡ್ ಜೊತೆಗೆ ಚರ್ಚಿಸಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ.
ಸಚಿವ ಸಂಪುಟ ಪುನಾರಚನೆ, ನಾಲ್ವರು ವಿಧಾನ ಪರಿಷತ್ ಸದಸ್ಯರ ನೇಮಕಾತಿ ಕುರಿತು ಚರ್ಚಿಸಲು ಸಿದ್ದರಾಮಯ್ಯ, ಡಿಕೆಶಿ ಕಳೆದ ಜೂ.6ರಂದೇ ದೆಹಲಿಗೆ ಭೇಟಿ ನೀಡಬೇಕಿತ್ತು. ಆದರೆ ಕಾಲ್ತುಳಿತದ ಘಟನೆಯಿಂದ ಪ್ರವಾಸ ಮುಂದೂಡಲಾಗಿತ್ತು. ಕಾಲ್ತುಳಿತದ ಘಟನೆಯಿಂದ ಡಿಸಿಎಂ ಮೇಲೆ ಹೈಕಮಾಂಡ್ ಸಿಟ್ಟಾಗಿದೆ ಎಂತಲೂ ಹೇಳಲಾಗುತ್ತಿದ್ದು, ಇದೇ ಹೊತ್ತಲ್ಲೇ ಸತೀಶ್ ಜಾರಕಿಹೊಳಿ ಅವರನ್ನು ದಿಲ್ಲಿಗೆ ಬರುವಂತೆ ವರಿಷ್ಠರು ಕರೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.