Published
9 hours agoon
By
Akkare Newsಪುತ್ತೂರು: ಸಹಕಾರ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿರುವ ಯಶಸ್ವಿನಿ ಆರೋಗ್ಯ ವಿಮಾ ಸೌಲಭ್ಯವನ್ನು ಪುತ್ತೂರಿನ ಒಂದೆರಡು ಆಸ್ಪತ್ರೆಯಲ್ಲಾದರೂ ಚಾಲ್ತಿಯಲ್ಲಿರುವಂತೆ ಮಾಡಿಕೊಡುವಂತೆ ಪುತ್ತೂರಿನ ದಿನೇಶ್ ಹೆಗ್ಡೆಯವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಸಹಕಾರಿ ಸಂಘದ ಸದಸ್ಯರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದ ಯಶಸ್ವಿನಿ ಯೋಜನೆಯ ನೆಟ್ವರ್ಕ್ ಆಸ್ಪತ್ರೆ ಪುತ್ತೂರಿನಲ್ಲಿಲ್ಲ. ಕಾಯಿಲೆಗಳಿಗೆ ಚಿಕಿತ್ಸೆ ಸರ್ಕಾರ ವಿಧಿಸಿದ ದರಪಟ್ಟಿ ತೀರಾ ಕಡಿಮೆ ಎಂಬ ಕಾರಣಕ್ಕೆ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುತ್ತಿವೆ. ಇದರಿಂದ ಬಡವರು ಇದರ ಪ್ರಯೋಜನ ಪಡೆಯುವುದಕ್ಕೆ ದೂರದ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾಗಿದೆ. ನಿತ್ಯ ಓಡಾಟಕ್ಕೆ ಇದು ಸಮಸ್ಯೆಯಾಗಿ ಪರಿಣಮಿಸುತ್ತಿರುವುದರಿಂದ ಸರ್ಕಾರ ಪುತ್ತೂರಿನಲ್ಲೇ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಜನರಿಂದ ಕೇಳಿ ಬರುತ್ತಿದೆ.
ರಾಜ್ಯದ ರೈತರು ಹಾಗೂ ಗ್ರಾಮೀಣ ಪ್ರದೇಶದ ಬಡವರು ದೊಡ್ಡ ಕಾಯಿಲೆಗಳಿಗೆ ಹಾಗೂ ಶಸ್ತ್ರಚಿಕಿತ್ಸೆ ವೆಚ್ಚ ಭರಿಸಲು ಪರದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ 2003ರಲ್ಲಿ ಪ್ರಥಮವಾಗಿ ಜಾರಿಗೆ ತಂದು 2014ರಲ್ಲಿ ಎಲ್ಲ ಕಡೆಗೆ ವಿಸ್ತರಿಸುವ ಕಾರ್ಯ ಮಾಡಿದೆ. 2018ರಲ್ಲಿ ಸ್ಥಗಿತವಾಗಿದ್ದರೂ, ರೈತರ ಹಾಗೂ ಸಹಕಾರಿ ಸಂಘದ ಬೇಡಿಕೆಯಂತೆ 2022-23ನೇ ಸಾಲಿನಿಂದ ಮತ್ತೆ ಪ್ರಾರಂಭಿಸಲಾಗಿದೆ. ಇದರಂತೆ ಸಹಕಾರಿ ಸಂಘದ ಸದಸ್ಯರಿಗೆ ಹಾಗೂ ಕುಟುಂಬಸ್ಥರಿಗೆ ವಾರ್ಷಿಕವಾಗಿ 5 ಲಕ್ಷ ರೂ.ವರೆಗಿನ ಚಿಕಿತ್ಸೆ ನಗದುರಹಿತವಾಗಿ ನೆಟ್ವರ್ಕ್ ಆಸ್ಪತ್ರೆಗಳ ಮೂಲಕ ಒದಗಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ಯಶಸ್ವಿನಿ ಯೋಜನೆ 2017-18ರಲ್ಲಿ ಸ್ಥಗಿತಗೊಂಡಾಗ ಪುತ್ತೂರಿನ ಖಾಸಗಿ ಆಸ್ಪತ್ರೆಗಳಿಗೆ ಸುಮಾರು 20 ಲಕ್ಷ ರೂ.ಗಳನ್ನು ಸರ್ಕಾರ ಪಾವತಿಸಲು ಬಾಕಿ ಇತ್ತು. ಈ ಮೊತ್ತ ನೀಡುವಂತೆ ಬೇಡಿಕೆ ಸಲ್ಲಿಸಿದರೂ, ಸರ್ಕಾರ ಸ್ಪಂದಿಸದ ಕಾರಣ ಆಸ್ಪತ್ರೆಗಳು ಯೋಜನೆಯ ಒಪ್ಪಂದದಿಂದ ಹಿಂದೆ ಸರಿದಿವೆ ಎಂಬ ಮಾತಿದೆ. ಹಳೆಯ ಯಶಸ್ವಿನಿ ಯೋಜನೆಯಲ್ಲಿ ವಿಶೇಷ ವಾರ್ಡ್ ಮೂಲಕ ಚಿಕಿತ್ಸೆಗೆ ಅವಕಾಶವಿತ್ತು. ಆದರೆ ಸದ್ಯ ಜನರಲ್ ವಾರ್ಡ್ ನಲ್ಲಿ ಮಾತ್ರ ಚಿಕಿತ್ಸೆಗೆ ಅವಕಾಶ ನೀಡಿ ಷರತ್ತು ವಿಧಿಸಿದೆ. ಈ ಎಲ್ಲ ಕಾರಣದಿಂದ ಪುತ್ತೂರಿನಲ್ಲಿ ಯಶಸ್ವಿನಿ ಯೋಜನೆಯ ಮೂಲಕ ಫಲಾನುಭವಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಎನ್ನಲಾಗಿದೆ.
ಪುತ್ತೂರಿನ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಮೂಲಕ ಬಡವರಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಹೆಗ್ಡೆ, ಜಿಲ್ಲಾಧಿಕಾರಿಗೆ 2024ರ ಡಿ.26ರಂದು ಪತ್ರ ಬರೆದಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಆರೋಗ್ಯ ಇಲಾಖೆಗೆ ಅಗತ್ಯ ಕ್ರಮಕ್ಕೆ ಸೂಚಿಸಿದ್ದರು. ಸಹಕಾರ ಸಂಘಗಳ ಇಲಾಖೆ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು, ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸಹಕಾರ ಸಂಘದ ಸಹಾಯಕ ನಿಬಂಧಕರಿಗೆ 2025 ಜ.6ರಂದು ಪತ್ರ ಬರೆದಿದ್ದರು. ಫೆ.4ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಸಹಕಾರಿ ಸಂಘಗಳ ಉಪನಿಬಂಧಕರಿಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಇದ್ಯಾವುದೂ ಕಾರ್ಯರೂಪಕ್ಕೆ ಬಾರದ ಹಿನ್ನೆಲೆಯಲ್ಲಿ ದಿನೇಶ್ ಹೆಗ್ಡೆ ಸ್ಥಳೀಯ ಶಾಸಕ, ಆರೋಗ್ಯ ಸಚಿವ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ರೈತ ಸಂಘವೂ ಪುತ್ತೂರಿನಲ್ಲಿ ಚಿಕಿತ್ಸೆ ಸಿಗುವಂತೆ ಆಗ್ರಹಿಸಿ ವಿವಿಧ ಕಡೆಗೆ ಪತ್ರ ಬರೆದಿದೆ.
ಯಶಸ್ವಿನಿ ವಿಮಾ ಸೌಲಭ್ಯವು ದ.ಕ.ಜಿಲ್ಲಾ ಪುತ್ತೂರು ತಾಲೂಕಿನ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದೆ ಯಶಸ್ವಿನಿ ಆರೋಗ್ಯ ವಿಮೆ ಹೊಂದಿರುವ ನಮಗೆ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಒಂದೆರಡು ಖಾಸಗಿ ಆಸ್ಪತ್ರೆಗಳಲ್ಲಿ ಆದರೂ ಯಶಸ್ವಿನಿ ಆರೋಗ್ಯ ವಿಮೆಯಾಗಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಿಕೊಡುವಂತೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಎಲ್ಲಾ ಸಚಿವರಿಗೆ, ಮುಖ್ಯಮಂತ್ರಿಯವರಿಗೆ ದಿನೇಶ್ ಹೆಗ್ಡೆಯವರು ಮನವಿ ಮಾಡಿದ್ದಾರೆ.