Connect with us

ಇತರ

ಪುತ್ತೂರು | ನೊಣಗಳ ಕಾಟ: ಸಾಂಕ್ರಾಮಿಕ ರೋಗಭೀತಿಯಲ್ಲಿ ಗ್ರಾಮಸ್ಥರು

Published

on

ಪುತ್ತೂರು ತಾಲ್ಲೂಕಿನ ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಡಸಾಗು ಜನತಾ ಕಾಲೊನಿ, ಮಜ್ಜಾರಡ್ಕ, ಗೋಳ್ತಿಲ ವ್ಯಾಪ್ತಿಯಲ್ಲಿ ನೊಣಗಳ ಕಾಟ ಅತಿಯಾಗಿದೆ. ಆಹಾರ ತಯಾರಿಸಲು, ಸೇವಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ಕೆಲವು ದಿನಗಳಿಂದ ನೊಣಗಳ ಹಾವಳಿ ಕಾಣಿಸಿಕೊಂಡಿದ್ದು, ಅಡುಗೆ ಪಾತ್ರೆ, ತಿಂಡಿ-ತಿನಸುಗಳ ಮೇಲೆ ಭಾರಿ ಪ್ರಮಾಣದಲ್ಲಿ ನೋಣಗಳು ಬಂದು ಕುಳಿತುಕೊಳ್ಳುತ್ತಿವೆ. ಇದರಿಂದಾಗಿ ನೆಮ್ಮದಿ ಇಲ್ಲದಂತಾಗಿದೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.



ಈ ಭಾಗದಲ್ಲಿರುವ ಸುಮಾರು 10 ಕೋಳಿ ಫಾರಮ್‌ಗಳಿದ್ದು, ಈ ಪೈಕಿ ಎಂಡಸಾಗು ವ್ಯಾಪ್ತಿಯಲ್ಲಿರುವ ದೊಡ್ಡ ಕೋಳಿ ಫಾರ್ಮ್‌ನಲ್ಲಿ ನಿರ್ವಹಣೆ ಕೊರತೆಯಿಂದಾಗಿ ನೊಣಗಳು ಉತ್ಪತ್ತಿಯಾಗುತ್ತಿವೆ ಎಂಬ ಆರೋಪ ವ್ಯಕ್ತವಾಗಿದೆ. ಈ ಸಂಬಂಧ ಎಂಡಸಾಗು ಜನತಾ ಕಾಲೊನಿ ನಿವಾಸಿಗಳು ಆರೋಗ್ಯ ಇಲಾಖೆಗೆ ಹಾಗೂ ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.

ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ., ಅರಿಯಡ್ಕ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುನೀಲ್ ಎಚ್.ಟಿ., ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಿಎಚ್‌ಸಿಒ ವಿದ್ಯಾ, ಆಶಾ ಕಾರ್ಯಕರ್ತೆ ರೇಖಾ, ಅರಿಯಡ್ಕ ಗ್ರಾಮದ ಪಿಎಚ್‌ಸಿಒ ನವ್ಯಾ, ಆಶಾ ಕಾರ್ಯಕರ್ತೆ ಲೀಲಾವತಿ, ತಾಲೂಕು ಎಚ್.ಐ.ಒ ಯಚ್ಚರೇಶ ಹದ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೊಣ ಬಾಧಿತ ಮನೆಗಳಿಗೆ, ಕೋಳಿ ಫಾರಂಗಳಿಗೆ ಸೋಮವಾರ ಭೇಟಿ ನೀಡಿದ ತಂಡವು ಪರಿಶೀಲನೆ ನಡೆಸಿದೆ. ಫಾರ್ಮ್‌ಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವಂತೆ ಸೂಚಿಸಿದ್ದಾರೆ.

ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ನೊಣಗಳ ಹಾವಳಿ ಇದೆ ಎಂದು ಸ್ಥಳೀಯ ನಿವಾಸಿಗಳು ಪಂಚಾಯಿತಿಗೆ ದೂರು ಕೊಟ್ಟರು ಯಾವುದೇ ರೀತಿಯ ಸ್ಪಂದನೆ ಸಿಗುವುದಿಲ್ಲ ಎಂದು ಸ್ಥಳೀಯರು ಆರೋಪಿಸಿರುತ್ತಾರೆ.
ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಪರ್ಪುಂಝ, ಉರ್ವ, ಉಜಿರೋಡಿ, ಆಲಂಬಾಡಿ ಪರಿಸರದಲ್ಲಿಯೂ ನೊಣಗಳ ಹಾವಳಿ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

 


ನೊಣಗಳ ಕಾಟ ಅತಿಯಾಗಿರುವ ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಡೆಸಾಗು ಜನತಾ ಕಾಲೊನಿ ಮಜ್ಜಾರಡ್ಕ ಗೋಳ್ತಿಲ ಪ್ರದೇಶಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಕ್ರಮದ ಭರವಸೆ
ಎಂಡೆಸಾಗು ಮಜ್ಜಾರಡ್ಕ ಪರಿಸರದಲ್ಲಿ ನೊಣಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಆರೋಗ್ಯ ಇಲಾಖೆಗೆ ದೂರು ಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೋಳಿ ಫಾರ್ಮ್‌ ಅಥವಾ ಇನ್ಯಾವುದೋ ಮೂಲಗಳಿಂದ ನೊಣ ಉತ್ಪತ್ತಿಯಾಗುತ್ತಿರಬಹುದು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಹೇಳಿದರು. ‌ಕೆಲವು ದಿನಗಳಿಂದ ನಿರಂತರವಾಗಿ ನೊಣಗಳ ಹಾವಳಿ ಹಾಗೂ ಒಂದು ದುರ್ವಾಸನೆಯಿಂದ ನೆಮ್ಮದಿಯೇ ಹಾಳಾಗಿದೆ. ನೊಣಗಳು ರಾಶಿ ರಾಶಿಯಾಗಿ ಬಂದು ಪಾತ್ರೆ ತಿನಿಸುಗಳ ಮೇಲೆ ಕುಳಿತುಕೊಳ್ಳುತ್ತಿವೆ. ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹ ಎಂದು ಎಂಡೆಸಾಗುವಿನ ಕೃಷ್ಣಪ್ಪ ಅಜಿಲ ಹೇಳಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement