Published
5 months agoon
By
Akkare News
ಇತ್ತೀಚೆಗೆ ಸುಮಾರು 11 ಮಕ್ಕಳು ಕೆಮ್ಮಿನ ಸಿರಪ್ ಸೇವನೆ ಮಾಡಿ ಸಾವಿಗೀಡಾದ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಈ ನಿಟ್ಟಿನಲ್ಲಿ ಸರ್ಕಾರವು ಕೂಡ ಕಠಿಣ ಕ್ರಮ ಕೈಗೊಂಡಿದ್ದು, ಕೆಲವು ಸಿರಪ್ಗಳನ್ನು ಬ್ಯಾನ್ ಮಾಡಿದೆ. ಅಲ್ಲದೆ, ಸದ್ಯ ವಿವಾದದಲ್ಲಿರುವ ಸಿರಪ್ ಅನ್ನು ಮಕ್ಕಳಿಗೆ ಬರೆದುಕೊಟ್ಟ ವೈದ್ಯನನ್ನು ಸಹ ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ಸಿರಪ್ ವಿಚಾರದಲ್ಲಿ ಇಷ್ಟೆಲ್ಲ ಬೆಳೆವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ವೈದ್ಯರು ಪ್ರಮುಖ ಎಚ್ಚರಿಕೆ ಸಂದೇಶವನ್ನು ಪಾಲಕರಿಗೆ ರವಾನಿಸಿದ್ದಾರೆ.


ಬಹುತೇಕ ಪಾಲಕರು ಮಾಡುವ ಮಿಸ್ಟೇಕ್ ಏನೆಂದರೆ, ತಮ್ಮ ಮಗುವಿಗೆ ಏನಾದರೂ ಜ್ವರ ಅಥವಾ ಕೆಮ್ಮು ಬಂದರೆ ಸಾಕು ವೈದ್ಯರ ಬಳಿ ಹೋದರೆ ಎಲ್ಲಿ ದುಡ್ಡು ಖರ್ಚಾಗುತ್ತದೆ ಅಂತ ನೇರವಾಗಿ ಮೆಡಿಕಲ್ಗೆ ಓಡಿ ಹೋಗಿ ಯಾವುದಾದರೊಂದು ಸಿರಪ್ ತೆಗೆದುಕೊಂಡು ಬಂದು ಮಕ್ಕಳಿಗೆ ಕುಡಿಸುತ್ತಾರೆ. ಆದರೆ, ಈ ಒಂದು ಅಭ್ಯಾಸ ತುಂಬಾ ಅಪಾಯಕಾರಿ ಎಂಬ ಸಂದೇಶವನ್ನು ವೈದ್ಯರು ರವಾನಿಸಿದ್ದಾರೆ.
ಹೌದು, ಇತ್ತೀಚಿಗೆ ಎಲ್ಲಾ ಕಡೆ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಿ ಸ್ವಯಂ ಔಷಧೋಪಚಾರ ಮಾಡುವ ವಿಧಾನ ಹೆಚ್ಚಾಗುತ್ತಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ತೂಕ, ಆರೋಗ್ಯ ಮತ್ತು ಔಷಧ ಪ್ರಮಾಣವನ್ನು ತಿಳಿಯದೆ ಪೋಷಕರು ಹಳೆಯ ಪ್ರಿಸ್ಕ್ರಿಪ್ಷನ್ ಅಥವಾ ತಾವೇ ಸ್ವತಃ ಮೆಡಿಕಲ್ ಹೋಗಿ ಔಷಧವನ್ನು ತಂದು ಮಕ್ಕಳಿಗೆ ನೀಡುತ್ತಾರೆ. ಈ ರೀತಿ ಮಾಡುವುದರಿಂದ ಮಕ್ಕಳ ಆಂತರಿಕ ಅಂಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಈಗಾಗಲೇ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೋಲ್ಡ್ರಿಪ್ ಸಿರಪ್ ಸೇವಿಸಿದ ನಂತರ ಮಕ್ಕಳು ಮೃತಪಟ್ಟ ಘಟನೆಗಳ ಹಿನ್ನೆಲ್ಲೆಯಲ್ಲಿ ಈ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ. ಹೀಗಾಗಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (IAP) ಸಂಘಟನೆಯು ಕೇರಳ ಶಾಖೆಯ ಪೋಷಕರು ಮತ್ತು ಆರೋಗ್ಯ ಸಿಬ್ಬಂದಿಗಳು ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದೆ. ಕೇರಳ ಮಾತ್ರವಲ್ಲದೆ ಅನೇಕ ರಾಜ್ಯಗಳು ಕೆಮ್ಮಿನ ಸಿರಪ್ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿವೆ.
12 ವರ್ಷದೊಳಗಿನ ಮಕ್ಕಳಲ್ಲಿ ಜ್ವರ, ಶೀತ ಮತ್ತು ಕೆಮ್ಮು ಮುಂತಾದವುಗಳು ಸಾಮಾನ್ಯ ಕಾಯಿಲೆಗಳಾಗಿದೆ. ಆದರೆ, ಪಾಲಕರು ವೈದ್ಯರನ್ನು ಸಂಪರ್ಕಿಸದೆ ಹಳೆಯ ಪ್ರಸ್ಕ್ರಿಪ್ಷನ್ ಆಧರಿಸಿ ಅಥವಾ ತಾವೇ ಸ್ವತಃ ಮೆಡಿಕಲ್ಗೆ ಹೋಗಿ ಔಷಧಿ ಖರೀದಿಸಿ ತಂದು ಮಕ್ಕಳಿಗೆ ಅದನ್ನು ಕೊಡುತ್ತಾರೆ. ಇನ್ನು ಸಿರಪ್ ನೀಡುವ ಪ್ರಮಾಣವನ್ನು ಸಹ ಗಮನಿಸುವುದಿಲ್ಲ. ಮಕ್ಕಳಿಗೂ ಓವರ್ ಡೋಸ್ ಸಿರಪ್ ನೀಡುವ ತಪ್ಪುಗಳು ಸಹ ನಡೆಯುತ್ತಿವೆ.

ಉದಾಹರಣೆಗೆ 20 ಕಿಲೋಗ್ರಾಮ್ ತೂಕದ ಮಗುವಿಗೆ 12 ಮಿ.ಲೀ. ಕೆಮ್ಮಿನ ಸಿರಪ್ ನೀಡಲು ಹೇಳಿದರೆ 12 ಕಿಲೋಗ್ರಾಮ್ ತೂಕದ ಮಗುವಿಗೆ 6 ಮೀ.ಲೀ. ಕ್ಕಿಂತ ಕಡಿಮೆ ಪ್ರಮಾಣದ ಕಫ್ ಸಿರಪ್ ನೀಡಬೇಕು. ಒಂದು ವೇಳೆ ಹೆಚ್ಚುವರಿ ಪ್ರಮಾಣ ನೀಡಿದರೆ ಮಗುವಿನಲ್ಲಿ ದೌರ್ಬಲ್ಯ, ವಾಂತಿ ಹೀಗೆ ಹಲವಾರು ಪರಿಣಾಮಗಳು ಕಾಣಿಸಿಕೊಳ್ಳಬಹುದು. ಕೆಲವು ಔಷಧಿಗಳು ಮರುಬಳಕೆಯಿಂದ ಅಸಕ್ತತೆ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬಹುತೇಕ ಕೆಮ್ಮು ಸ್ವತಃ ಸರಿಯಾಗುತ್ತದೆ. ಅಂದರೆ, ಒಂದೆರೆಡು ದಿನಗಳ ಬಳಿಕ ಕೆಮ್ಮು ಅದಾಗಿಯೇ ವಾಸಿಯಾಗುತ್ತದೆ. ಇದಕ್ಕೆ ಯಾವುದೇ ಔಷಧಿಗಳ ಅಗತ್ಯವಿಲ್ಲ. ಈ ವಯಸ್ಸಿನ ಮಕ್ಕಳಿಗೆ ನಿಯಮಿತವಾಗಿ ಕೆಮ್ಮಿನ ಸಿರಪ್ ನೀಡುವುದು ಸುರಕ್ಷಿತವಲ್ಲ ಎಂದು ತಜ್ಞ ವೈದ್ಯರು ಉಪಯುಕ್ತ ಸಲಹೆಯನ್ನು ನೀಡಿದ್ದಾರೆ.
ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೆ ಮಕ್ಕಳಿಗೆ ಔಷಧ ನೀಡಬೇಡಿ. ಒಂದು ವೇಳೆ ನೀಡಿದರೆ ಗಂಭೀರ ಅನಾಹುತಗಳು ಸಂಭವಿಸುವುದು ಖಚಿತ ಆದ್ದರಿಂದ, ಯಾವುದೇ ಹಳೆಯ ಪ್ರಿಸ್ಕ್ರಿಪ್ಷನ್ ಅಥವಾ ತಾವಾಗೇ ಮಡಿಕಲ್ಗೆ ಹೋಗಿ ಔಷಧಿ ಖರೀದಿಸದೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರ ಸಲಹೆ ಪಡೆಯುವುದು ತುಂಬಾ ಉತ್ತಮ ಎನ್ನುವುದು ವೈದ್ಯರ ಸಲಹೆಯಾಗಿದೆ.

