Connect with us

ಸ್ಥಳೀಯ

ನೋಟಿನ ಮಳೆ ಸುರಿಸುತ್ತೇವೆಂದು ಜನರಿಗೆ ಉಂಡೆನಾಮ: ಬೆಂಗಳೂರಿನಲ್ಲಿ ಕಳ್ಳ ಸ್ವಾಮಿಗಳು ಸೇರಿ ಹತ್ತು ಆರೋಪಿಗಳ ಬಂಧನ

Published

on

‘ಹಣದ ಮಳೆ’ ಆಮಿಷವೊಡ್ಡಿ ಅಮಾಯಕರನ್ನು ವಂಚಿಸುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರಿನ ಹಸೂರು ಗೇಟ್ ಪೊಲೀಸರು ಭೇದಿಸಿದ್ದಾರೆ. ನಕಲಿ ಸ್ವಾಮೀಜಿಗಳು 2000 ರೂ ನೋಟುಗಳ ಸೀರಿಯಲ್ ಸಂಖ್ಯೆಗಳನ್ನು ತಿರುಚಿ, ಡಬಲ್ ಹಣದ ಆಸೆಗೆ ಬಿದ್ದ ಗ್ರಾಹಕರಿಂದ ಅಸಲಿ ಹಣ ಪಡೆಯುತ್ತಿದ್ದರು. ಆರ್‌ಬಿಐ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕೋಟ್ಯಂತರ ರೂ ಮೌಲ್ಯದ ನಕಲಿ ನೋಟು, ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು, ನವೆಂಬರ್ 5: ಹಣದ ಮಳೆ ಸುರಿಸುತ್ತೇವೆ ಎಂದು ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಗ್ಯಾಂಗನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ ಈ ಜಾಲವನ್ನು ಪತ್ತೆಹಚ್ಚಲಾಗಿದೆ. 2000 ರೂಪಾಯಿ ಮುಖಬೆಲೆಯ 70 ಟ್ಯಾಂಪರ್ ಮಾಡಲಾದ ನೋಟುಗಳು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿರುವ ಬಗ್ಗೆ ಆರ್‌ಬಿಐ ಮಾಹಿತಿ ನೀಡಿತ್ತು. ಈ ನೋಟುಗಳು ಮೂಲತಃ ಅಸಲಿಯಾಗಿದ್ದರೂ, ಅವುಗಳ ಸೀರಿಯಲ್ ಸಂಖ್ಯೆಗಳನ್ನು ತಿರುಚಲಾಗಿದೆ ಎಂದು ಆರ್‌ಬಿಐ ಅಧಿಕಾರಿಗಳು ದೂರು ಕೊಟ್ಟಿದ್ದರು. ಹೀಗಾಗಿ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ್ದರು. ತನಿಖೆ ವೇಳೆ, ಆರೋಪಿಗಳ ಕರಾಮತ್ತು ಬಯಲಾಗಿದೆ.

ನಿರ್ದಿಷ್ಟ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ, ದುಡ್ಡಿನ ಮಳೆ ಬರಿಸುವ ನೆಪದಲ್ಲಿ ನಡೆಯುತ್ತಿದ್ದ ಬೃಹತ್ ವಂಚನೆ ಜಾಲದ ಬಗ್ಗೆಯೇ ಮಾಹಿತಿ ದೊರೆತಿದೆ.

ನಕಲಿ ಸ್ವಾಮೀಜಿಗಳದ್ದೇ ಪ್ರಮುಖ ಪಾತ್ರ!

ಬಸವರಾಜ್ ಅಲಿಯಾಸ್ ಸತ್ಯಾನಂದ ಸ್ವಾಮಿ, ಮಲ್ಲಿಕಾರ್ಜುನ, ಮೋಹನ್ ಅಲಿಯಾಸ್ ಮುನಿಸ್ವಾಮಿ ಎಂಬ ಮೂವರು ನಕಲಿ ಸ್ವಾಮೀಜಿಗಳು ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಒಂದೊಂದು ಬಾರಿ ಒಬ್ಬೊಬ್ಬರು ಸ್ವಾಮೀಜಿಗಳ ವೇಷ ಧರಿಸಿ, ಒಂದು ನಿರ್ದಿಷ್ಟ ಸೀರೀಸ್‌ನ ನೋಟುಗಳನ್ನು ತಂದುಕೊಟ್ಟರೆ ದುಡ್ಡಿನ ಮಳೆ ಬರಿಸುವುದಾಗಿ ಜನರನ್ನು ನಂಬಿಸುತ್ತಿದ್ದರು. ಉದಾಹರಣೆಗೆ, 2018ರ ಎಚ್‌ಎಸ್ (HS) ಸೀರೀಸ್‌ನ 2000 ರೂಪಾಯಿ ಮುಖಬೆಲೆಯ 100 ನೋಟುಗಳನ್ನು ಕೊಟ್ಟರೆ ದುಡ್ಡಿನ ಮಳೆಯಾಗುವುದಾಗಿ ಆಮಿಷವೊಡ್ಡುತ್ತಿದ್ದರು. ಈ ನೋಟುಗಳು ಎಲ್ಲಿ ಸಿಗುತ್ತವೆ ಎಂದು ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ನಕಲಿ ಸ್ವಾಮೀಜಿಗಳು ಜನರನ್ನು ವಂಚಿಸುತ್ತಿದ್ದುದು ಹೇಗೆ?

ಅಮಾಯಕ ಗ್ರಾಹಕರು 2 ಲಕ್ಷ ರೂಪಾಯಿ ನೀಡಿ, ಡಬಲ್ ಅಥವಾ ಟ್ರಿಪಲ್ ಹಣದ ಆಸೆಗೆ ಬಿದ್ದು, ಈ ಎಚ್‌ಎಸ್ ಸೀರೀಸ್ ನೋಟುಗಳನ್ನು ಸಂಗ್ರಹಿಸುತ್ತಿದ್ದರು. ನಂತರ ನಕಲಿ ಸ್ವಾಮೀಜಿಗಳು ಗ್ರಾಹಕರನ್ನು ನದಿ ಅಥವಾ ಕೆರೆಗಳ ಬಳಿ ಪೂಜೆಗೆಂದು ಕರೆದೊಯ್ಯುತ್ತಿದ್ದರು. ಪೂಜೆಗೆ ಒಬ್ಬರೇ ಬರಬೇಕು, ಕುಟುಂಬಸ್ಥರು ಅಥವಾ ಇತರರು ಜೊತೆ ಬರುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮ ವಿಧಿಸುತ್ತಿದ್ದರು. ಪೂಜೆಯ ಸಂದರ್ಭದಲ್ಲಿ, ‘ನೋಟುಗಳು ಸ್ವಲ್ಪ ಮುಕ್ಕಾಗಿವೆ, ನೀರಿನಲ್ಲಿ ಮುಳುಗಿ ಮೇಲೆದ್ದರೆ ಮಳೆಯಾಗುತ್ತದೆ’ ಎಂದು ಹೇಳುತ್ತಿದ್ದರು. ಗ್ರಾಹಕರು ನೀರಿನಲ್ಲಿ ಮುಳುಗಿ ಏಳುವ ಸಂದರ್ಭದಲ್ಲಿ, ನಕಲಿ ಸ್ವಾಮೀಜಿಗಳು ಆ ನೋಟುಗಳ ಸಮೇತ ಪರಾರಿಯಾಗುತ್ತಿದ್ದರು.

ನೋಟ್​ಗಳ ಸೀರಿಯಲ್ ನಂಬರನ್ನೇ ಬದಲಿಸುತ್ತಿದ್ದ ಖದೀಮರು

ಈ ವಂಚನೆ ಜಾಲದಲ್ಲಿ ಮುಬಾರಕ್ ಎಂಬಾತ ನೋಟುಗಳ ಸೀರಿಯಲ್ ನಂಬರ್​ಗಳನ್ನು ಟ್ಯಾಂಪರಿಂಗ್ ಮಾಡುತ್ತಿದ್ದ. ಮೂಲ ಅಸಲಿ ನೋಟುಗಳ ಇಸವಿ ಮತ್ತು ಸೀರೀಸ್ ಸಂಖ್ಯೆಗಳನ್ನು ಸ್ಕ್ರೀನ್ ಪ್ರಿಂಟ್ ತಂತ್ರಜ್ಞಾನ ಬಳಸಿ ಬದಲಾಯಿಸಲಾಗುತ್ತಿತ್ತು. ಹೀಗೆ ಟ್ಯಾಂಪರ್ ಮಾಡಿದ ನೋಟುಗಳನ್ನು ಅಮಾಯಕ ಗ್ರಾಹಕರು ನಕಲಿ ಸ್ವಾಮೀಜಿಗಳ ಬಳಿ ದುಡ್ಡಿನ ಮಳೆ ಆಸೆಯಿಂದ ತೆಗೆದುಕೊಂಡು ಹೋಗುತ್ತಿದ್ದರು. ವಂಚಕರು ಈ ಟ್ಯಾಂಪರ್ ಮಾಡಿದ ನೋಟುಗಳನ್ನು ಏಜೆಂಟರ ಮೂಲಕ ಚಲಾವಣೆಗೆ ತರುತ್ತಿದ್ದರು. ಈ ಏಜೆಂಟರು ಅಮಾಯಕರಿಗೆ 2 ಲಕ್ಷ ರೂಪಾಯಿ ಮೌಲ್ಯದ ಟ್ಯಾಂಪರ್ ನೋಟುಗಳನ್ನು ನೀಡಿ, ಅದಕ್ಕೆ ಬದಲಾಗಿ 20 ರಿಂದ 40 ಸಾವಿರ ರೂಪಾಯಿ ಕಡಿಮೆ ಮೊತ್ತದ ಅಸಲಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಹೀಗೆ ಅಮಾಯಕರಿಂದ ಪಡೆದ ಅಸಲಿ ಹಣವನ್ನು ಆರೋಪಿಗಳು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುತ್ತಿದ್ದರು.

ವಂಚನೆ ಬಗ್ಗೆ ಆರ್​ಬಿಐಗೆ ಗೊತ್ತಾಗಿದ್ಹೇಗೆ?

ಆಕಸ್ಮಿಕವಾಗಿ 70 ಟ್ಯಾಂಪರ್ ಮಾಡಲಾದ ನೋಟುಗಳು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ, ಆರ್‌ಬಿಐ ಗಮನಕ್ಕೆ ಬಂದಿದ್ದವು. ಈ ವಂಚನೆ ಜಾಲ ಬೆಂಗಳೂರು, ಯಾದಗಿರಿ, ಹಾವೇರಿ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನವರೆಗೂ ವಿಸ್ತರಿಸಿಕೊಂಡಿತ್ತು.

ಸದ್ಯ ಪೊಲೀಸರು ಬಂಧಿತ ಆರೋಪಿಗಳಿಂದ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ 2 ಸಾವಿರ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನೋಟುಗಳು ಟ್ಯಾಂಪರ್ ಆಗಿವೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅಲ್ಲದೆ, ನೋಟುಗಳನ್ನು ತಿರುಚಲು ಬಳಸುತ್ತಿದ್ದ ಯಂತ್ರೋಪಕರಣಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ನಂಬುವವರು ಇರುವ ವರೆಗೂ ವಂಚಿಸುವವರು ಇದ್ದೆ ಇರುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದ್ದು, ಇನ್ನಾದ್ರೂ ಜನ ಎಚ್ಚೆತ್ತುಕೊಳ್ಳಬೇಕಿದೆ

Continue Reading
Click to comment

Leave a Reply

Your email address will not be published. Required fields are marked *

Advertisement