Published
2 months agoon
By
Akkare News


ರಾಷ್ಟ್ರೀಯ ನಿರ್ದೇಶಕಿ ದೀಪಾಲಿ ಫಡ್ನಿಸ್ ಆಯೋಜಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯು ದೇಶದ ಅತ್ಯಂತ ಪ್ರಸಿದ್ಧ ಮತ್ತು ದೀರ್ಘಕಾಲೀನ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದೆoದು ಗುರುತಿಸಿಕೊಂಡಿದೆ. ಡಿಸೆಂಬರ್ 18 ರಿಂದ 21 ರವರೆಗೆ ನಡೆದ ನಾಲ್ಕು ದಿನಗಳ ಈ ಕಠಿಣ ಸ್ಪರ್ಧೆಯಲ್ಲಿ ಭಾರತದಾದ್ಯಂತ ನಲವತ್ತು ಫೈನಲಿಸ್ಟ್ಗಳು ಭಾಗವಹಿಸಿದ್ದು, ಪ್ರತಿಭಾ ಸುತ್ತುಗಳು, ಸ್ಪೂರ್ತಿದಾಯಕ ಜೀವನ ಕಥೆಗಳು, ವೈಯಕ್ತಿಕ ಸಂದರ್ಶನಗಳು ಹಾಗೂ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಉಡುಪುಗಳ ವಿವಿಧ ವಿಭಾಗಗಳಲ್ಲಿ ಡಾ. ರಶ್ಮಾ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಮಹೋನ್ನತ ಸಾಧನೆಗೂ ಮೊದಲು ಮುಂಬೈ ಮುಲುಂಡ್ ನಿವಾಸಿ ಹಾಗೂ ಮೂಲತಃ ಪುತ್ತೂರಿನವರಾದ ಡಾ. ರಶ್ಮಾ ಅವರು ಮಿಸೆಸ್ ಇಂಡಿಯಾ ಕರ್ನಾಟಕ 2024 ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಆ ಸ್ಪರ್ಧೆಯಲ್ಲಿ ಅವರು ಪ್ರತಿಭಾ ಸುತ್ತು, ರ್ಯಾಂಪ್ ವಾಕ್ ಮತ್ತು ಟಾಸ್ಕ್ ವಿಭಾಗಗಳಲ್ಲಿ ಪ್ರಥಮ ಬಹುಮಾನ ಗೆದ್ದು ಗಮನ ಸೆಳೆದಿದ್ದರು. ಅಲ್ಲದೆ ಮಂಗಳೂರಿನಲ್ಲಿ ನಡೆದ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಹಾಗೂ ಮುಂಬೈ ಬಂಟ್ಸ್ ಸಂಘದ ಆಕಾಂಕ್ಷಾ ಮಿಸೆಸ್ ಬಂಟ್ಸ್ 2023 ಸ್ಪರ್ಧೆಗಳಲ್ಲೂ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾಗುವ ಮೂಲಕ ಸೌಂದರ್ಯ ಮತ್ತು ಪ್ರತಿಭೆಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು.

ವೃತ್ತಿಯಲ್ಲಿ ವೈದ್ಯೆಯಾಗಿರುವ ಇವರು ಶೈಕ್ಷಣಿಕವಾಗಿಯೂ ಅಪ್ರತಿಮ ಸಾಧನೆ ಮಾಡಿದವರು. ಪುತ್ತೂರು ತಾಲ್ಲೂಕಿನ ಮುಂಡೂರು ಗ್ರಾಮದ ಪೊನೋನಿಯಾದಲ್ಲಿ ಬೆಳೆದು, ಪಾಪೆಮಜಲು ಸರ್ಕಾರಿ ಶಾಲೆ ಮತ್ತು ಪುತ್ತೂರು ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಇವರು, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಿಂದ ಪ್ರಕೃತಿ ಚಿಕಿತ್ಸೆಯಲ್ಲಿ ಪದವಿ ಪಡೆದಿದ್ದಾರೆ. ಪದವಿಯಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದ ಇವರು ತಮ್ಮ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ವೈದ್ಯಕೀಯ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಇವರು, ಮುಲುಂಡ್ ಹಿಲ್ಸ್ ಇನ್ನರ್ ವೀಲ್ ಕ್ಲಬ್ನ ಸಮಿತಿ ಕಾರ್ಯದರ್ಶಿಯಾಗಿ ಮಹಿಳೆಯರ ಆರೋಗ್ಯದ ಕುರಿತು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಕಲೆ ಮತ್ತು ಕ್ರೀಡಾ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಡಾ. ರಶ್ಮಾ ಅವರು ರಾಜ್ಯ ಮಟ್ಟದ ಥ್ರೋಬಾಲ್ ಆಟಗಾರ್ತಿಯಾಗಿದ್ದಾರೆ. ರಂಗಭೂಮಿ ಕಲಾವಿದೆಯೂ ಆಗಿರುವ ಇವರು, ಕಲಾ ಸ್ಪಂದನ ಮುಂಬೈ ತಂಡದ “ಸ್ವಾಮಿ ಕೊರಗಜ್ಜ” ನಾಟಕದ ಅಭಿನಯಕ್ಕಾಗಿ 2024ರ ಡಾ. ಶಿವರಾಮ ಕಾರಂತ್ ಥಿಯೇಟರ್ ಫೆಸ್ಟಿವಲ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಾರ್ಯಗುತ್ತು ರಘುನಾಥ್ ಶೆಟ್ಟಿ ಮತ್ತು ಅಮ್ಟೂರ್ ಬಾಲಿಕೆ ಕಸ್ತೂರಿ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಇವರಿಗೆ ಪತಿ ಮೋಹಿತ್ ಶೆಟ್ಟಿ ಮತ್ತು ಏಳು ವರ್ಷದ ಪುತ್ರಿ ನೇಸರ ಅವರ ಸಂಪೂರ್ಣ ಬೆಂಬಲವಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿ ಇಂದು ರಾಷ್ಟ್ರಮಟ್ಟದ ವೇದಿಕೆಯಲ್ಲಿ ಕನ್ನಡಿಗರ ಕೀರ್ತಿ ಹೆಚ್ಚಿಸಿರುವ ಇವರ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.







