Published
2 weeks agoon
By
Akkare News
ಮಂಗಳೂರು ಬೆಂಗಳೂರು ರೈಲ್ವೆ ಹಳಿ ವಿದ್ಯುದೀಕರಣಗೊಂಡ ಬೆನ್ನಲ್ಲೇ ಮಂಗಳೂರು ಬೆಂಗಳೂರು ವಂದೇ ಭಾರತ್ ರೈಲಿನ ಕನಸು ಕಾಣುತ್ತಿದ್ದ ಮಂಗಳೂರಿಗರಿಗೆ ರೈಲ್ವೆ ಇಲಾಖೆ ಶಾಕ್ ನೀಡಿದೆ. ಎರಡು ರೈಲು ನಿಲ್ದಾಣಗಳಿದ್ದರೂ ಮಂಗಳೂರು ಬೆಂಗಳೂರು ವಂದೇಭಾರತ್ ರೈಲಿಗೆ ಯಾವುದೇ ಸ್ಟಾಪ್ ನೀಡಿಲ್ಲ.

ಬೆಂಗಳೂರು ಬಿಟ್ಟರೆ ರಾಜ್ಯಕ್ಕೆ ಅತೀ ಹೆಚ್ಚುಆದಾಯ ತಂದುಕೊಡುವ ಜಿಲ್ಲೆ ದಕ್ಷಿಣಕನ್ನಡ, ಮಂಗಳೂರು ಬೆಂಗಳೂರು ನಡುವೆ ರೈಲಿಗಾಗಿ ಹಲವು ಹೋರಾಟಗಳ ಬಳಿಕ ಮಂಗಳೂರು ಬೆಂಗಳೂರು ನಡುವೆ ಪ್ರಯಾಣಿಕ ರೈಲು ಪ್ರಾರಂಭವಾಗಿತ್ತು, ಇದೀಗ ಮಂಗಳೂರು ಬೆಂಗಳೂರು ನಡುವೆ ರೈಲ್ವೆ ಹಳಿ ವಿದ್ಯುಧೀಕರಣಗೊಂಡಿದೆ. ಇದರ ಬೆನ್ನಲ್ಲೆ ಕರಾವಳಿಯ ಜನ ವಂದೇಭಾರತ್ ರೈಲಿಗೆ ಆಸೆಪಟ್ಟಿದ್ದರು. ಅದರಂತೆ ರೈಲ್ವೆ ಇಲಾಖೆಯೂ ಮಂಗಳೂರು ಬೆಂಗಳೂರು ನಡುವೆ ರೈಲು ಓಡಿಸುವುದಾಗಿ ಹೇಳಿತ್ತು. ಆದರೆ ಇದೀಗ ಬಹುನಿರೀಕ್ಷಿತ ವಂದೇ ಭಾರತ್ ರೈಲು ನಗರದಲ ಎರಡೂ ರೈಲ್ವೆ ನಿಲ್ದಾಣಗಳನ್ನು ಬಿಟ್ಟು ನೇರವಾಗಿ ಪಡೀಲ್ ಮೂಲಕ ಗೋವಾದ ಮಡಗಾಂವ್ನತ್ತ ಸಾಗಲಿದೆ.

ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಂಗಳೂರು ಜಂಕ್ಷನ್ ಇಲ್ಲವೇ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬಾರದೆ ನೇರವಾಗಿ ಪಡೀಲ್ ಮೂಲಕ ಸಾಗಲಿದ್ದು, ಇದೀಗ ರೈಲ್ವೆ ತಯಾರಿಸಿದ ತಾತ್ಕಾಲಿಕ ವೇಳಾಪಟ್ಟಿಯಲ್ಲೂ ಈ ಅಂಶವನ್ನು ದೃಢಪಡಿಸಲಾಗಿದೆ.
ಬೆಂಗಳೂರು ಯಶವಂತಪುರ- ಮಡಗಾಂವ್ ವಂದೇ ಭಾರತ್ ರೈಲಿಗಾಗಿ ತಾತ್ಕಾಲಿಕ ವೇಳಾಪಟ್ಟಿ ರಚಿಸುವಂತೆ ರೈಲ್ವೆ ಮಂಡಳಿಯು ನೈಋುತ್ಯ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲ್ವೆಗೆ ಸೂಚನೆ ನೀಡಿತ್ತು. ಅದರಂತೆ ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಡಲು ಪ್ರಸ್ತಾಪಿಸಿರುವ ರೈಲು ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ. ಬೆಳಗ್ಗೆ 5.30ಕ್ಕೆ ಮಡಗಾಂವ್ನಿಂದ ಹೊರಡುವ ರೈಲು ಸಂಜೆ 6.40ಕ್ಕೆ ಯಶವಂತಪುರ ತಲುಪಲಿದೆ.

ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡಲು ಪ್ರಸ್ತಾಪಿಸಿರುವ ರೈಲು ಹಾಸನದಿಂದ 9.10ಕ್ಕೆ, ಸಕಲೇಶಪುರದಿಂದ 9.55ಕ್ಕೆ, ಸುಬ್ರಹ್ಮಣ್ಯ ರೋಡ್ನಿಂದ 12.30ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಪಡೀಲ್ ಮೂಲಕ ಸಾಗಲಿದೆ. 2.40ಕ್ಕೆ ತೋಕೂರು ದಾಟಲಿದ್ದು, ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ.
ಮಡಗಾಂವ್ನಿಂದ ಬೆಳಗ್ಗೆ 5.30ಕ್ಕೆ ಹೊರಡುವ ರೈಲು ತೋಕೂರು ಮೂಲಕ 10.05ಕ್ಕೆ ದಾಟಿ, ಪಡೀಲ್ ಮೂಲಕ 11 ಗಂಟೆಗೆ ಸಾಗಲಿದೆ. ಸುಬ್ರಹ್ಮಣ್ಯ ರೋಡ್ನಿಂದ 12.30ಕ್ಕೆ, ಸಕಲೇಶಪುರದಿಂದ 14.50ಕ್ಕೆ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪಲಿದೆ ಎಂದು ಪ್ರಸ್ತಾಪಿಸಲಾಗಿದೆ.

ವಂದೇ ಭಾರತ್ ರೈಲು ಬಂದಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ 4 ರಿಂದ 5 ಗಂಟೆಯಲ್ಲಿ ಪ್ರಯಾಣಿಸಬಹುದು ಎಂಬ ನಿರೀಕ್ಷೆ ಗರಿಗೆದರಿತ್ತು. ಈ ಮಾರ್ಗದಲ್ಲಿರುವ ಸಿಂಗಲ್ ಲೈನ್ ಹಳಿ ಮತ್ತು ಘಾಟಿ ವಿಭಾಗದ ಕಾರಣದಿಂದಾಗಿ ಇದು ಸಾಧ್ಯವಿಲ್ಲ ಎಂಬುದನ್ನು ರೈಲ್ವೆ ಯಾತ್ರಿ ಸಮಿತಿಯವರು ಎಚ್ಚರಿಸುತ್ತಾ ಬಂದಿದ್ದರು. ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಇದು ಖಚಿತಗೊಂಡಿದೆ. ಯಶವಂತಪುರದಿಂದ ಪಡೀಲ್ ತಲುಪಲು ಈ ರೈಲು 7.55 ಗಂಟೆ ತೆಗೆದುಕೊಳ್ಳಲಿದೆ. ಎರಡು ರೈಲ್ವೆ ನಿಲ್ದಾಣಗಳಿದ್ದರೂ ಕೂಡ ಮಂಗಳೂರಿನಲ್ಲಿ ವಂದೇಭಾರತ್ ರೈಲು ನಿಲುಗಡೆ ಇಲ್ಲ. ಇದು ರೈಲು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.






