Published
2 weeks agoon
By
Akkare Newsಪುತ್ತೂರು : ಮರೀಲು ತೋಡೆಂಬ ಡಂಪಿಂಗ್ ಯಾರ್ಡ್ ಕಥೆ ಅನಾವರಣಗೊಳ್ಳುತ್ತಿದ್ದಂತೆ ನಗರದ ಇನ್ನೊಂದು ಭಾಗದ ಸ್ಥಿತಿ ಬೆಳಕಿಗೆ ಬಂದಿದೆ. ಇಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ ಈ ಸ್ಥಳವನ್ನು ನಗರದ ಕೇಂದ್ರ ಸ್ಥಾನದ ಸೊಳ್ಳೆ ಉತ್ಪಾದನೆ ಕೇಂದ್ರ ಎಂದು ನಿರ್ವಿವಾದವಾಗಿ ಘೋಷಿಸಬಹುದು.
ನಗರದ ಮುಖ್ಯ ರಸ್ತೆಯ ಸ್ವಲ್ಪ ದೂರದಲ್ಲೇ ಇರುವ ಕಲ್ಲಾರೆ ತೋಡು ಅಕ್ಷರಶಃ ತ್ಯಾಜ್ಯ ಮಡುಗಟ್ಟಿ ನಿಂತು ಸೊಳ್ಳೆ ಉತ್ಪಾದನೆ ಕೇಂದ್ರವಾಗಿ ಮಾರ್ಪಟ್ಟಿದೆ. ಸುತ್ತಮುತ್ತಲಿನ ಮನೆ, ಕಟ್ಟಡದವರು ಮೂಗು ಮುಚ್ಚಿ ಕೊಂಡು, ಸೊಳ್ಳೆ ಕಡಿತಕ್ಕೆ ಒಳಾಗುತ್ತಲೇ ಜೀವನ ಸಾಗಿಸಬೇಕಿದೆ. ಅಂದ ಹಾಗೆ ಈ ತೋಡು ಮುಖ್ಯ ರಸ್ತೆಯಿಂದ ಎರಡೇ ನಿಮಿ ಷದ ನಡಿಗೆ ಹಾದಿಯಲ್ಲೇ ಸ್ವಾಗತಿಸುತ್ತದೆ.
ಹೊಟೇಲ್, ಲಾಡ್ಜ್ ತ್ಯಾಜ್ಯ!
ಈ ತೋಡು ಪರ್ಲಡ್ಕದಿಂದ ಕಲ್ಲಾರೆ ಮೂಲಕ ಆದರ್ಶ ಆಸ್ಪತ್ರೆ ಸನಿಹದ ಇನ್ನೊಂದು ತೋಡಿಗೆ ಸಂಪರ್ಕ ಪಡೆದು ಅಲ್ಲಿಂದ ಬೆದ್ರಾಳದ ಮೂಲಕ ಸಾಗಿ ನದಿ ಸೇರುತ್ತದೆ. ಈ ತೋಡಿಗೆ ಕಲ್ಲಾರೆ ಬಳಿ ಸೇರುವ ರಾಶಿಗಟ್ಟಲೇ ಹರಿಯುವ ತ್ಯಾಜ್ಯ ಉತ್ಪಾದನೆ ಆಗುತ್ತಿರುವುದು ಹೊಟೇಲ್ ಮತ್ತು ಲಾಡ್ಜ್ ಗಳಿಂದ. ಇಲ್ಲಿಂದ ತ್ಯಾಜ್ಯ ಹರಿದು ತೋಡಿಗೆ ಹರಿಯಲೆಂದೇ ಚರಂಡಿ ನಿರ್ಮಿಸಲಾಗಿದೆ. ಇಂತಹ ಪರಿಸ್ಥಿತಿ ಇಲ್ಲಿ ಮಾತ್ರ ಅಲ್ಲ. ನಗರದ ಬಹುತೇಕ ಬಹುಮಹಡಿ ಕಟ್ಟಡ, ಹೊಟೇಲ್ ಸಹಿತ ಇನ್ನಿತ್ತರ ಕಟ್ಟಡಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಕಾಲುವೆ, ತೋಡಿಗೆ ಹರಿಸಲಾಗುತ್ತಿದೆ. ಅವುಗಳ ನರಕ ದರ್ಶನವಾಗುವುದು ಬೇಸಗೆಯಲ್ಲಿ ಯಾದರೂ, ಆ ಪರಿಸರದ ಜನರಿಗೆ ನಿತ್ಯವೂ ಅದರ ಗೋಳು ತಪ್ಪುತ್ತಿಲ್ಲ. ಇದು ನಗರ ಆಡಳಿತ, ಸ್ಥಳೀಯ ನಗರಸಭಾ ಸದಸ್ಯ ರುಗಳಿಗೆ ಗೊತ್ತಿದ್ದರೂ ಅವರು ತುಟಿಕ್ ಪಿಟಿಕ್ ಅನ್ನುತ್ತಿಲ್ಲ.
ಆದೇಶ ಪಾಲನೆಯೂ ಇಲ್ಲ, ಪರಿಶೀಲನೆಯೂ ಇಲ್ಲ!
ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಟೇಲ್, ಲಾಡ್ಜ್ಗಳು ಸಂಸ್ಕರಣ ಘಟಕಗಳನ್ನು ಅಳವಡಿಸಿ ಚಾಲನಾ ಸ್ಥಿತಿಯಲ್ಲಿ ಇಟ್ಟು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮ್ಮತಿ ಪತ್ರವನ್ನು ಪಡೆಯುವುದು ಅವಶ್ಯಕವಾಗಿರುತ್ತದೆ. ಚಾಲನ ಸಮ್ಮತಿ ಪತ್ರ ಪಡೆದು ಕಲುಷಿತ ನೀರಿಗೆ ಪ್ರಾಥಮಿಕ ಸಂಸ್ಕರಣ ಘಟಕಗಳನ್ನು ಅಳವಡಿಸದೆ ಇರುವ ಅಥವಾ ಚಾಲನಾ ಸಮ್ಮತಿ ಪತ್ರ ಪಡೆಯಬೇಕಾಗಿರುವ ಕಾರ್ಖಾನೆ/ಸಂಸ್ಥೆ/ಘಟಕಗಳ ವಿರುದ್ದವಿದ್ಯುತ್ ಸಂಪರ್ಕ ಕಡಿತ ಸೇರಿದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದರೂ ಅನುಷ್ಠಾನ ಕಾರ್ಯ ಪಾಲನೆ ಆಗಿಲ್ಲ. ಏಕೆಂದರೆ ನಗರದ ಬಹುತೇಕ ತ್ಯಾಜ್ಯ ಉತ್ಪಾದನಾ ವ್ಯವಹಾರ ನಿರತ ಕಟ್ಟಡಗಳಲ್ಲಿ ಸಂಸ್ಕರಣ ಘಟಕವೇ ಇಲ್ಲ.