Connect with us

ಇತರ

ವಿಟ್ಲ: ಎಲೆಕ್ಟ್ರಾನಿಕ್ಸ್ ಶಾಪ್ ಗೆ ಬೆಂಕಿ ವಿಟ್ಲ ಮಂಗಳೂರು ರಸ್ತೆ ಸಂಪೂರ್ಣ ಬಂದ್

Published

on

ವಿಟ್ಲ ಪೇಟೆಯ ಮಂಗಳೂರು ರಸ್ತೆಯಲ್ಲಿ, ಗಣೇಶ್ ಡ್ರೈವಿಂಗ್ ಸ್ಕೂಲ್ ಪಕ್ಕದಲ್ಲಿರುವ ಶ್ರೀ ಇಲೆಕ್ಟ್ರೋನಿಕ್ಸ್ ಅಂಗಡಿಗೆ ಇಂದು ಅಕಸ್ಮಾತ್ ಬೆಂಕಿ ತಗುಲಿರುವ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಉಂಟಾಗಿರಬಹುದೆಂದು ಶಂಕಿಸಲಾಗಿದೆ.

ಅಂಗಡಿಯಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಅಂಗಡಿಯೊಳಗಿನಿಂದ ಭಾರೀ ಸದ್ದುಗಳು ಕೇಳಿಬರುತ್ತಿವೆ. ಸ್ಥಳೀಯರು ನೀರು ಹಾಗೂ ಮರಳು ಎಸೆದು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ, ಬೆಂಕಿಯ ಉರಿತ ಇನ್ನಷ್ಟು ತೀವ್ರವಾಗುತ್ತಿದೆ.

ಘಟನಾ ಸ್ಥಳದ ಸುತ್ತಮುತ್ತ ಹಲವು ಅಂಗಡಿ ಮುಂಗಟ್ಟುಗಳಿದ್ದು, ಬೆಂಕಿ ವಿಸ್ತಾರಗೊಳ್ಳುವ ಭಾರೀ ಅಪಾಯ ಎದುರಾಗಿದೆ. ಶ್ರೀ ಇಲೆಕ್ಟ್ರೋನಿಕ್ಸ್‌ಗೆ ತಗುಲಿದ ಬೆಂಕಿ ಪಕ್ಕದ ಟೈಲರ್ ಶಾಪ್‌ಗೂ ವ್ಯಾಪಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಸಮೀಪದಲ್ಲೇ ಫಾಸ್ಟ್ ಫುಡ್ ಅಂಗಡಿ ಹಾಗೂ ಅಮಿತ್ ಹೋಟೆಲ್ ಇರುವುದರಿಂದ, ಬೆಂಕಿ ನಂದಿಸದಿದ್ದರೆ ಇನ್ನಷ್ಟು ಅಂಗಡಿಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.

ಸ್ಥಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಪೊಲೀಸರು ಕೂಡ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸುತ್ತಿದ್ದಾರೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ವಿಟ್ಲಕ್ಕೆ ಸ್ವಂತ ಅಗ್ನಿಶಾಮಕ ಕಚೇರಿ ಇಲ್ಲದ ಕಾರಣ ಪುತ್ತೂರು ಅಥವಾ ಬಿಸಿರೋಡ್‌ನಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿಟ್ಲದಲ್ಲೇ ಅಗ್ನಿಶಾಮಕ ದಳದ ಕಚೇರಿ ತೆರೆಯಬೇಕೆಂಬ ಸಾರ್ವಜನಿಕರ ಬೇಡಿಕೆ ಮತ್ತೊಮ್ಮೆ ಕೇಳಿಬರುತ್ತಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement