Published
2 hours agoon
By
Akkare News
ಪುತ್ತೂರು: ಪುತ್ತೂರಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಮೆಡಿಕಲ್ ಕಾಲೇಜು ನಿರ್ಮಾಣವಾಗುವಲ್ಲಿ ಸರಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸೇಡಿಯಾಪಿನಲ್ಲಿ ಕಾಯ್ದಿರಿಸಲಾಗಿರುವ ೪೦ ಎಕ್ರೆ ಜಾಗದಲ್ಲಿ ೩೦೦ ಬೆಡ್ನ ಮೆಡಿಕಲ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನವನ್ನು ಒದಗಿಸುವುದರ ಜೊತೆಗೆ ಕಟ್ಟಡದ ರೂಪುರೇಶೆಗಳ ಬಗ್ಗೆಯೂ ಸರಕಾರದದ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅಂತಿಮ ಮುದ್ರೆ ಬಿದ್ದಿದೆ.


೨೦೨೫-೨೬ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-೧೩೮ ರಲ್ಲಿ ’ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಲಾಗಿದೆ. ಇದಕ್ಕಾಗಿ ಈಗಿರುವ ೧೦೦ ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮವಹಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ.
ಆಯವ್ಯಯ ಘೋಷಣೆಯಂತೆ ಪುತ್ತೂರಿನ ೧೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ೩೦೦ ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೇಗೇರಿಸುವ ಸಂಬಂಧ ಮುಖ್ಯ ಇಂಜಿನಿಯರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜನಿಯರಿಂಗ್ ಘಟಕ, ಬೆಂಗಳೂರು ಇವರು ಸಲ್ಲಿಸಿದ್ದ ಅಂದಾಜು ಪಟ್ಟಿಯ ಪ್ರಸ್ತಾವನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಯ ಅಭಿಪ್ರಾಯದೊಂದಿಗೆ ಪರಿಶೀಲಿಸಿದ ನಂತರ, ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಯೋಜನೆ ಪ್ರಸ್ತುತ ಸ್ಥಳದಲ್ಲಿ ಕಾರ್ಯಸಾಧ್ಯವಾಗುವುದಿಲ್ಲ, ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸ್ಥಳ, ನಿರ್ಮಾಣ ಮತ್ತು ಕಾರ್ಯಸಾಧ್ಯತೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಪೂತ್ತೂರಿನಲ್ಲಿ, ೩೦೦ ಹಾಸಿಗೆಗಳ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖಾಂತರ ಹೊಸ ಸ್ಥಳದಲ್ಲಿ ನಿರ್ಮಿಸಲು, ಆರ್ಥಿಕ ಇಲಾಖೆಯು ಸೂಚನೆಯಂತೆ, ಸರ್ಕಾರದ ಆದೇಶ ಸಂಖ್ಯೆ: ೧೦೪ ಸಿಜಿಎಂ ೨೦೨೫, ದಿನಾಂಕ:೦೪.೧೨.೨೦೨೫ರಲ್ಲಿ ಸದರಿ ಆಡುವಯ ಘೋಷಣೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿರುತ್ತದೆ.

ಮೇಲೆ ಓದಲಾದ ಏಕ ಕಡತದ ಪ್ರಸ್ತಾವನೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ಗ್ರಾಮದ ಸೇಡಿಯಾವು ಇಲ್ಲಿ, ೩೦೦ ಹಾಸಿಗೆಗಳ ಬೋಧನಾ ಆಸ್ಪತ್ರೆಯನ್ನು ನಿರ್ಮಿಸುವ ಸಂಬಂಧ ಮುಖ್ಯ ಇಂಜಿನಿಯರ್ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಘಟಕ, ಬೆಂಗಳೂರು ಇವರು ಕಾಮಗಾರಿಯ ರೂ.೧೮೦.೦೦ ಕೋಟಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಿದ್ದು ಆಡಳಿತಾತ್ಮಕ ಅನುಮೋದನೆ ಕೋರಿರುತ್ತಾರೆ.

ಮುಖ್ಯ ಇಂಜಿನಿಯರ್, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಘಟಕ, ಬೆಂಗಳೂರು ಇವರ ಪ್ರಸ್ತಾವನೆಯಲ್ಲಿ ಕಂದಾಯ ಇಲಾಖೆಯಿಂದ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸೇಡಿಯಾವು ಬಳಿ ೪೦.೦೦ ಎಕರೆ ಜಾಗವನ್ನು ಗುರುತಿಸಿ, ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು/ ಆಸ್ಪತ್ರೆ ಸ್ಥಾಪಿಸುವ ಉದ್ದೇಶಕ್ಕೆ ಮೀಸಲಿರಿಸಿದ ಜಾಗದಲ್ಲಿ ಸದರಿ ಯೋಜನೆಯನ್ನು ಪ್ರಸ್ತಾಪಿಸಲಾಗಿರುತ್ತದೆ. ಹೊಸ ಹಾಸ್ಪಿಟಲ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಯೂ ಮುಗಿದಿರುತ್ತದೆ. ಈ ಮೂಲಕ ಪುತ್ತೂರಿನ ಜನತೆಯ ಬಹುಕಾಲದ ಬೇಡಿಕೆಯೊಂದು ಅಶೋಕ್ ರೈ ಅವರು ಶಾಸಕರಾದ ಎರಡೇ ವರ್ಷದಲ್ಲಿ ಈಡೇರಿದಂತಾಗಿದೆ.
ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಚಾಲನೆ ದೊರಕಿದೆ. ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮೊದಲು ಮೆಡಿಕಲ್ ಹಾಸ್ಪಿಟಲ್ ನಿರ್ಮಾಣವಾಗಬೇಕಿದೆ. ಈಗಾಗಲೇ ನಿಯೋಜಿತ ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ೩೦೦ ಬೆಡ್ನ ಹಾಸ್ಪಿಟಲ್ ನಿರ್ಮಾಣವಾಗಲಿದೆ. ಇದಕ್ಕಾಗಿ ೧೮೦ ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಅಂತಮವಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿಗೆ ಶಿಲಾನ್ಯಾಸವೂ ನಡೆಯಲಿದೆ. ಹಾಸ್ಪಿಟಲ್ ನಿರ್ಮಾಣವಾದ ಬಳಿಕ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸಿದೇನೆ ಎಂಬ ತೃಪ್ತಿ ಇದೆ. ಜನರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳ ಜೊತೆಗೆ ಜನರ ಬೇಡಿಕೆಗಳು ಒಂದೊಂದಾಗಿ ಈಡೇರಲಿದೆ-ಅಶೋಕ್ ರೈ ಶಾಸಕರು ಪುತ್ತೂರು




