Published
2 hours agoon
By
Akkare News

ಸೀಟ್ ಕವರ್ ಹರಿದು ಚಿನ್ನಕ್ಕಾಗಿ ಹುಡುಕಾಟ: ಬಂಟ್ವಾಳ ಪರಿಸರದಲ್ಲಿ ಅನಾಥವಾಗಿ ಬಿದ್ದಿದ್ದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರು ಕಾರಿನಲ್ಲಿದ್ದ ಸೀಟ್ ಕವರ್ಗಳನ್ನು ಹರಿದು ಹಾಕಿ, ಕಾರಿನ ಮೂಲೆ ಮೂಲೆಗಳನ್ನೂ ಸಂಪೂರ್ಣವಾಗಿ ಜಾಲಾಡಿರುವುದು ಗೊತ್ತಾಗಿದೆ. ಕಾರಿನ ಒಳಗೆ ಬೇರೆ ಯಾವುದಾದರೂ ಗುಪ್ತ ಜಾಗದಲ್ಲಿ ಚಿನ್ನ ಅಥವಾ ನಗದು ಇಡಲಾಗಿದೆಯೇ ಎಂದು ಹುಡುಕಲು ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಸಾಂಗ್ಲಿಯ ಚಿನ್ನದ ವ್ಯಾಪಾರಿ ವಿಕಾಸ್ (42) ಅವರು ಪತ್ನಿ ಮತ್ತು ಮಗುವಿನೊಂದಿಗೆ ಕೇರಳದ ಪಯ್ಯನೂರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆದಿತ್ತು. ಕಾರಿನಲ್ಲಿ ಹೊಂಚು ಹಾಕಿ ಬಂದಿದ್ದ 7 ಮಂದಿ ದರೋಡೆಕೋರರ ಗ್ಯಾಂಗ್, ವಿಕಾಸ್ ಅವರ ಕಾರನ್ನು ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿತ್ತು. ವ್ಯಾಪಾರಿಯನ್ನು ಸ್ಥಳದಲ್ಲೇ ಇಳಿಸಿ, ಅವರ ಪತ್ನಿ-ಮಗುವನ್ನು ಕುಳೂರು ಬಳಿ ಕಾರಿನಿಂದ ಕೆಳಗಿಳಿಸಿ, ಕಾರಿನಲ್ಲಿದ್ದ 180 ಗ್ರಾಂ ಚಿನ್ನದ ಬ್ಯಾಗ್ ಹಾಗೂ ಕಾರಿನೊಂದಿಗೆ ದರೋಡೆಕೋರರು ಪರಾರಿಯಾಗಿದ್ದರು. ಇಡೀ ದರೋಡೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.

ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನದ ಆಭರಣಗಳು, ನಗದು ಸೇರಿ ಒಟ್ಟು 20 ಲಕ್ಷ ರೂಪಾಯಿ ಸೊತ್ತನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ ಎಂದು ವಿಕಾಸ್ ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.



