Published
1 day agoon
By
Akkare News
ಭಾನುವಾರ ಎಕ್ಸ್ ಖಾತೆಯಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆಯವರು ಜುಲೈ 18ರ ದಿನಾಂಕ ಇರುವ ಪತ್ರವನ್ನು ಹಂಚಿಕೊಂಡಿದ್ದಾರೆ. ಪತ್ರದಲ್ಲಿ ‘ಮಾನ್ಯ ಪ್ರಧಾನ ಮಂತ್ರಿಗಳೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಲ್ಲಿ ಸಾವಿರಾರು ಕೋಟಿಗಳ ಕಳ್ಳತನ ನಡೆದಿರುವುದು ಗೊತ್ತೇ ಇದೆ. ಶ್ರೀರಾಮನ ಹೆಸರಿನಲ್ಲಿ ನಂಬಿಕೆ, ಭಕ್ತಿ ಮತ್ತು ವಿಶ್ವಾಸದಿಂದ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದಾನ ಮಾಡಿದ ಲಕ್ಷಾಂತರ ಭಕ್ತರಿಗೆ ಈ ಹಣ ಕಳ್ಳತನದಿಂದ ದ್ರೋಹ ಬಗೆಯಲಾಗಿದೆ’ ಎಂದು ಕಾಂಗ್ರೆಸ್ ಉಭಯ ನಾಯಕರು ಜಂಟಿಯಾಗಿ ಪತ್ರದಲ್ಲಿ ವಿವರಿಸಿದ್ದಾರೆ.
ಭಾರತದ ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಸಂಸತ್ತಿನಲ್ಲಿ ಟ್ರಸ್ಟ್ ರಚನೆ ಮಾಡುವುದಾಗಿ ನೀವು ಘೋಷಣೆ ಮಾಡಿರುವಿರಿ. ವಿಚಿತ್ರವೆಂದರೆ ಈ ಟ್ರಸ್ಟ್ನ ಸದಸ್ಯರನ್ನು ಕೇಂದ್ರ ಬಿಜೆಪಿ ಸರ್ಕಾರ ಮಾತ್ರ ನೇಮಿಸಿದೆ. ಟ್ರಸ್ಟ್ನ ಸದಸ್ಯರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS), ವಿಶ್ವ ಹಿಂದೂ ಪರಿಷತ್ (VHP) ಅದರ ಅಂಗಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಮಾಹಿತಿ ಗುಟ್ಟಾಗಿ ಉಳಿದಿಲ್ಲ. ಅದರ ಮಾಜಿ ಪ್ರಧಾನ ಕಾರ್ಯದರ್ಶಿಯೂ ನಿಮ್ಮ ಆಪ್ತರೇ ಆಗಿದ್ದಾರೆ’ ಎಂದು ಹಳುವ ಮೂಲಕ ಟ್ರಸ್ಟ್ನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಯೋಧ್ಯ ರಾಮಮಂದಿರ ಹೆಸರಿನಲ್ಲಿ ಇಂತಹ ದೊಡ್ಡ ಅಪರಾಧದ ನಡೆದಿದ್ದು, ಈಗಲೂ ನಿಮ್ಮ ಮೌನ ಸ್ವೀಕಾರಾರ್ಹವಲ್ಲ. ಇದರ ಹೊಣೆಗಾರಿಕೆ ಯಾರದ್ದು, ಅವ್ಯವಹಾರದ ದೇಣಿಗೆ ಹಣದ ಮರುಪಾವತಿಯನ್ನು ಖಚಿತಪಡಿಸಿಕೊಳ್ಳುವುದು ಪ್ರಧಾನಿಯಾದ ನಿಮ್ಮ ಕರ್ತವ್ಯವೆಂದು’ ಹೇಳಿದ್ದಾರೆ.
ಸ್ವತಂತ್ರ ಮತ್ತು ಸಮಗ್ರ ತನಿಖೆಗೆ ಒತ್ತಾಯ ದೇಶದ ಕೋಟ್ಯಾಂತರ ಭಕ್ತರಿಂದ ಸಂಗ್ರಹಿಸಲಾದ ನಗದು, ಚಿನ್ನ, ಬೆಳ್ಳಿ ಸೇರಿದಂತೆ ಎಲ್ಲಾ ಕಾಣಿಕೆಗಳ ನಿರ್ವಹಣೆ ಸೇರಿದಂತೆ ಟ್ರಸ್ಟ್ನ ಹಣಕಾಸು ವ್ಯವಹಾರಗಳ ಬಗ್ಗೆ ಸ್ವತಂತ್ರ ಮತ್ತು ಸಮಗ್ರ ತನಿಖೆಗೆ ತಕ್ಷಣ ಆದೇಶಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಪ್ರತಿಯೊಬ್ಬ ಭಕ್ತರು ದುಡಿದು ನೀಡಿದ ಅವರ ಕಾಣಿಕೆ ಹಣವನ್ನು ಹೇಗೆ ಬಳಸಲಾಗಿದೆ ಎಂದು ತಿಳಿಯುವಂತೆ ಸಂಶೋಧನೆಗಳು ಮತ್ತು ಟ್ರಸ್ಟ್ನ ಖಾತೆಗಳನ್ನು ಸಾರ್ವಜನಿಕಗೊಳಿಸಬೇಕು. ಜವಾಬ್ದಾರಿಯುತವಾಗಿ ಕಂಡುಬಂದ ಎಲ್ಲರನ್ನು ಸ್ಥಾನ ಅಥವಾ ಪ್ರಭಾವವನ್ನು ಲೆಕ್ಕಿಸದೇ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಟ್ರಸ್ಟ್ನ ವಿಶ್ವಾಸಾರ್ಹತೆ, ಪಾರದರ್ಶಕ ಕಾರ್ಯ ನಿರ್ವಹಣೆ ಕುರಿತು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.




