Published
4 months agoon
By
Akkare News
ಉಪ್ಪಿನಂಗಡಿ: ನದಿ ನೀರಿನ ಶುದ್ಧತೆಗಾಗಿ ಮೀನುಗಳ ಸಂತತಿ ವೃದ್ಧಿಗಾಗಿ ಹಾಗೂ ಪ್ರಕೃತಿ ಸಮತೋಲನದ ಉದ್ದೇಶದಿಂದ 34 ನೆಕ್ಕಿಲಾಡಿ ಗ್ರಾಮದ ನಾಲ್ವರ ತಂಡವೊಂದು 10 ಸಾವಿರ ಮೀನಿನ ಮರಿಗಳನ್ನು ಕುಮಾರಧಾರ ನದಿಗೆ ಬಿಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದೆ.


34 ನೆಕ್ಕಿಲಾಡಿಯ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಸಾಮಾಜಿಕ ಹೋರಾಟಗಾರ ಶಬೀರ್ ಅಹಮ್ಮದ್, ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಗ್ರಾ.ಪಂ. ನಿವೃತ ಪಿಡಿಒ ಜೆರಾಲ್ಡ್ ಮಸ್ಕರ್ಹೇನಸ್ ಸೇರಿಕೊಂಡು ಮೀನುಗಾರಿಕಾ ಇಲಾಖೆಯಿಂದ 4,600 ರೂ. ಕೊಟ್ಟು ಕಾಮನ್ ಕಾರ್ಪ್ ಹಾಗೂ ಕಾಟ್ಲಾದ 10 ಸಾವಿರ ಮೀನಿನ ಮರಿಗಳನ್ನು ಖರೀದಿಸಿದ ಅವರು ಅದನ್ನು ನ.೪ರಂದು ಕುಮಾರಧಾರ ನದಿಯಲ್ಲಿ ಬಿಟ್ಟರು.
ಈ ಸಂದರ್ಭ ಉಪಸ್ಥಿತರಿದ್ದ 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ರವಿಚಂದ್ರ ಮಾತನಾಡಿ, ಪರಿಸರ ಮತ್ತು ನದಿಗಳ ಸ್ವಚ್ಛತೆಯ ಬಗ್ಗೆ ಜನರು ಜಾಗೃತಿಯಾಗಿರಬೇಕು. ಪರಿಸರ ಉಳಿದಾಗ ಮಾತ್ರ ಆರೋಗ್ಯಯುತ ಬದುಕು ನಮ್ಮದಾಗಲು ಸಾಧ್ಯ. ಆದ್ದರಿಂದ ಸ್ವಚ್ಛತೆಯ ವಿಷಯದಲ್ಲಿ ಗ್ರಾ.ಪಂ.ನೊಂದಿಗೆ ಜನರೂ ಸಹಕಾರ ನೀಡಬೇಕು ಎಂದರು.





