Published
16 hours agoon
By
Akkare News

ಆರೋಗ್ಯ ಇಲಾಖೆಯ ಸ್ಪಷ್ಟನೆ ನ್ಯಾಕೋ ಸಂಸ್ಥೆ ತನ್ನ ವರದಿಯಲ್ಲಿ ರಾಜ್ಯದಲ್ಲಿ ಒಟ್ಟಾರೆ 56 ಸಾವಿರ ಹೆಚ್ಐವಿ ಪ್ರಕರಣಗಳಿವೆ ಹಾಗೂ ಸಾವಿರಾರು ಯುವಜನರು ಸೋಂಕಿತರಾಗಿದ್ದಾರೆ ಎಂದು ಉಲ್ಲೇಖಿಸಿತ್ತು. ಆದರೆ, ಈ ಅಂಕಿ-ಅಂಶಗಳು ಕೇವಲ ಜನಸಂಖ್ಯೆಯ ಆಧಾರದ ಮೇಲೆ ಮಾಡಿದ ಅಂದಾಜು ಲೆಕ್ಕಾಚಾರವೇ ಹೊರತು ನಿಜವಾದ ವೈದ್ಯಕೀಯ ಪರೀಕ್ಷಾ ವರದಿಗಳಲ್ಲ ಎಂದು ಖಾದರ್ ತಿಳಿಸಿದ್ದಾರೆ. ಗೊಂದಲಮಯವಾಗಿರುವ ಈ ವರದಿಯ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ನ್ಯಾಕೋ ಸಂಸ್ಥೆಗೆ ಅಧಿಕೃತ ಪತ್ರ ಬರೆಯಲು ರಾಜ್ಯ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಹೆಚ್ಐವಿ ಸೋಂಕು ನಿಯಂತ್ರಣದಲ್ಲಿದೆ ಸುದ್ದಿಗೋಷ್ಠಿಯಲ್ಲಿ ವಾಸ್ತವಿಕ ಅಂಕಿ-ಅಂಶಗಳನ್ನು ಮುಂದಿಟ್ಟ ಖಾದರ್, “2004ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 39,028 ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ 18ರಿಂದ 35 ವರ್ಷ ವಯೋಮಾನದ ಸೋಂಕಿತರು ನಿಯಮಿತವಾಗಿ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಹೆಚ್ಐವಿ ಸೋಂಕಿತರ ಪ್ರಮಾಣ ಸಂಪೂರ್ಣ ನಿಯಂತ್ರಣದಲ್ಲಿದೆ ಮತ್ತು ಆತಂಕಪಡುವ ಅಗತ್ಯವಿಲ್ಲ,” ಎಂದು ಖಾದರ್ ಹೇಳಿದ್ದಾರೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯಾದ್ಯಂತ 5,53,453 ಜನರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ ಕೇವಲ 3,091 ಜನರಲ್ಲಿ ಮಾತ್ರ ಹೆಚ್ಐವಿ ಸೋಂಕು ದೃಢಪಟ್ಟಿದೆ. ಅದೇ ರೀತಿ, 2,81,742 ಗರ್ಭಿಣಿಯರನ್ನು ಹೆಚ್ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕಿನ ಹರಡುವಿಕೆ ಗಣನೀಯವಾಗಿ ಇಳಿಕೆ ಕಂಡಿದೆ ಎಂಬ ಅಂಶವನ್ನ ಅವರು ಬಹಿರಂಗಪಡಿಸಿದ್ರು.
ಕಾಲೇಜುಗಳಲ್ಲಿ ಹೆಚ್ಐವಿ ಪರೀಕ್ಷೆ ಕಡ್ಡಾಯವಲ್ಲ “ರಾಜ್ಯದ ಯಾವುದೇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ ಹೆಚ್ಐವಿ ಪರೀಕ್ಷೆಗೆ ಆದ್ಯತೆ ನೀಡಲಾಗುತ್ತಿದೆ; ಮೊದಲನೆಯದು ಗರ್ಭಿಣಿಯರ ಹೆರಿಗೆಯ ಸಂದರ್ಭದಲ್ಲಿ ಮತ್ತು ಎರಡನೆಯದು ರಕ್ತದಾನ ಅಥವಾ ರಕ್ತ ವರ್ಗಾವಣೆಯ ಸಮಯದಲ್ಲಿ. ಇದನ್ನು ಹೊರತುಪಡಿಸಿ ಯಾರ ಮೇಲೂ ಪರೀಕ್ಷೆಯನ್ನು ಕಡ್ಡಾಯ ಮಾಡುವ ಪ್ರಶ್ನೆಯೇ ಇಲ್ಲ,” ಎಂದು ಸಚಿವರು ತಿಳಿಸಿದ್ದಾರೆ.
ಏಡ್ಸ್ ಮುಕ್ತ ಸಮಾಜದ ನಿರ್ಮಾಣಕ್ಕೆ ಕೆಎಸ್ಎಪಿಎಸ್ ಸಂಕಲ್ಪ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (KSAPS) ರಾಜ್ಯಾದ್ಯಂತ ಯುವಜನತೆ ಮತ್ತು ಸಾರ್ವಜನಿಕರಲ್ಲಿ ಹೆಚ್ಐವಿಯ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನ ನಿರಂತರವಾಗಿ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಹೆಚ್ಐವಿ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಜಾಗರೂಕರಾಗಿರುವುದು ಮತ್ತು ಸರಿಯಾದ ಮಾಹಿತಿ ಪಡೆಯುವುದು ಮುಖ್ಯವಾಗಿದೆ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. 



