Published
2 months agoon
By
Akkare News
ಬೆಂಗಳೂರು, ಜನವರಿ 19: ಕರ್ನಾಟಕ ಗೃಹ ಕಾರ್ಮಿಕರ ವಿಧೇಯಕ, 2026ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಐತಿಹಾಸಿಕ ಋತುಚಕ್ರ ರಜೆಯನ್ನು ಜಾರಿ ಮಾಡಿದ ಬೆನ್ನಲ್ಲೆ ಮತ್ತೊಂದು ಮಹತ್ವದ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಗೃಹ ಕಾರ್ಮಿಕರು ಹೆಚ್ಚಿನವರು ಮಹಿಳೆಯರೇ ಆಗಿದ್ದು, ಅವರ ಕಲ್ಯಾಣ ಮತ್ತು ಭದ್ರತೆಯ ದೃಷ್ಟಿಯಿಂದ ಈ ವಿಧೇಯಕ ಮಹತ್ವದ ಪಾತ್ರ ವಹಿಸಲಿದೆ. ಋತುಚಕ್ರ ರಜೆಯನ್ನು ಜಾರಿ ಮಾಡಿದ್ದ ಸಚಿವ ಸಂತೋಷ್ ಲಾಡ್ ಅವರು, ಗೃಹ ಕಾರ್ಮಿಕರ ಕಲ್ಯಾಣ ವಿಧೇಯಕಕ್ಕೆ ಅನುಮೋದನೆ ದೊರಕಿಸಿಕೊಡುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ.

ಉದ್ದೇಶಿತ ಮಸೂದೆಯು ರಾಜ್ಯದಲ್ಲಿ ಅಧಿಸೂಚಿತವಾಗಿರುವ ಎಲ್ಲಾ ನಗರ ಪಾಲಿಕೆಗಳಿಗೆ ಅನ್ವಯ ಆಗಲಿದೆ. ಮಸೂದೆಯ ಕರಡನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಮಸೂದೆಯ ಬಗ್ಗೆ ಮನೆಕೆಲಸದವರ ಸಂಘಟನೆಗಳ ಒಕ್ಕೂಟದೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಮಸೂದೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಒಂದು ವೇಳೆ ಮಸೂದೆ ಜಾರಿಯಾದರೆ ಇಡೀ ದೇಶದಲ್ಲೇ ಕರ್ನಾಟಕ ಮಾದರಿ ಆಗಲಿದೆ. ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಅಸಂಘಟಿತ ವರ್ಗದ ಕಾರ್ಮಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸೌಲಭ್ಯಗಳನ್ನು ಜಾರಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇದೀಗ ಮನೆಕೆಲಸದವರಿಗೂ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಈ ವಿಧೇಯಕ ಸಹಾಯ ಆದಂತಾಗಲಿದೆ.

ಕರ್ನಾಟಕ ಗೃಹ ಕಾರ್ಮಿಕರ ವಿಧೇಯಕ, 2026ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮಸೂದೆಯು, ರಾಜ್ಯದ ಗೃಹ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು, ಸಾಮಾಜಿಕ ಭದ್ರತೆ ವಿಸ್ತರಿಸಲು ಉದ್ದೇಶಿಸಿದೆ. ಕಾರ್ಮಿಕರಿಗೆ ಕನಿಷ್ಠ ವೇತನ, ವಾರಕ್ಕೆ 48 ಗಂಟೆಗಳ ಕೆಲಸ ಮಿತಿ, ಓವರ್ಟೈಮ್ ವೇತನ, ಸಾಪ್ತಾಹಿಕ ರಜೆ ಮತ್ತು ಹೆರಿಗೆ, ಪಿತೃತ್ವ ರಜೆ, ಕಾರ್ಮಿಕರಿಗೆ ಅಪಘಾತ ಪರಿಹಾರ, ವೈದ್ಯಕೀಯ ವೆಚ್ಚಗಳು, ಮಕ್ಕಳ ಶಿಕ್ಷಣ ನೆರವು, ಪಿಂಚಣಿ ಸೇರಿದಂತೆ ಹಲವು ಸಾಮಾಜಿಕ ಭದ್ರತೆ ಒದಗಿಸಲು ಈ ಮಸೂದೆಯನ್ನು ಮಂಡಿಸಲು ಸರ್ಕಾರ ಮುಂದಾಗಿದೆ.






