Published
1 year agoon
By
Akkare News
ಇಸ್ರೇಲ್ ಸೇನೆ ಹಿಜ್ಬುಲ್ಲಾ ವಿರುದ್ಧ ಮಾಡಿದ್ದ ದಾಳಿಗೆ ವಿಶ್ವಸಂಸ್ಥೆಯ ಶಾಂತಿಪಾಲಕ ಸೇನೆ ಒಳಗಾಗಿದೆ. ಲೆಬನಾನ್ ಗಡಿಯ ಈ ವಿಶ್ವಸಂಸ್ಥೆಯ ಶಾಂತಿಪಾಲಕ ಸೇನೆಯಲ್ಲಿ 600 ಭಾರತೀಯ ಸೈನಿಕರಿದ್ದು ಈ ದಾಳಿಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಈ ಸೇನೆಯಲ್ಲಿರುವ ಭಾರತೀಯ ಸೈನಿಕರು ಇಸ್ರೇಲ್-ಲೆಬನಾನ್ ಗಡಿಯಲ್ಲಿ 120-ಕಿಮೀ ನೀಲಿ ರೇಖೆಯ ಉದ್ದಕ್ಕೂ ನೆಲೆಸಿದ್ದಾರೆ.
ಶುಕ್ರವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, “ನೀಲಿ ರೇಖೆಯ ಉದ್ದಕ್ಕೂ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ನಾವು ಕಳವಳಗೊಂಡಿದ್ದೇವೆ. ನಾವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ವಿಶ್ವಸಂಸ್ಥೆಯ ಆವರಣದ ಪಾವಿತ್ರತೆಯನ್ನು ಎಲ್ಲರೂ ಗೌರವಿಸಬೇಕು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲಕರ ಸುರಕ್ಷತೆ ಮತ್ತು ಅವರ ಆದೇಶದ ಪವಿತ್ರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಿದೆ.
ಲೆಬನಾನ್ನಲ್ಲಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆ (UNIFIL)ನ ನಖೌರಾ ಪ್ರಧಾನ ಕಛೇರಿ ಮತ್ತು ಹತ್ತಿರದ ಸ್ಥಾನಗಳನ್ನು ಇಸ್ರೇಲಿ ಪಡೆಗಳು ಪದೇ ಪದೇ ದಾಳಿಯ ಮಾಡುತ್ತಿದೆ ವಿಶ್ವಸಂಸ್ಥೆ ಹೇಳಿದ ಒಂದು ದಿನದ ನಂತರ ಭಾರತ ಸರ್ಕಾರ ಈ ಹೇಳಿಕೆ ನೀಡಿದೆ.
“ಇಂದು ಬೆಳಿಗ್ಗೆ, ಇಸ್ರೇಲ್ ಸೇನೆ ಮೆರ್ಕಾವಾ ಟ್ಯಾಂಕ್ ನಖೌರಾದಲ್ಲಿನ ಯುನಿಫಿಲ್ನ ಪ್ರಧಾನ ಕಛೇರಿಯಲ್ಲಿನ ವೀಕ್ಷಣಾ ಗೋಪುರದ ಕಡೆಗೆ ತನ್ನ ಆಯುಧವನ್ನು ಹಾರಿಸಿದ್ದು, ಇಬ್ಬರು ಶಾಂತಿಪಾಲಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೆ ಗಂಭೀರ ಗಾಯಗಳಾಗಿಲ್ಲ. ಆದರೆ ಅವರು ಆಸ್ಪತ್ರೆಯಲ್ಲಿಯೇ ಇದ್ದಾರೆ” ಎಂದು ವಿಶ್ವಸಂಸ್ಥೆ ಹೇಳಿಕೆ ತಿಳಿಸಿದೆ.
ಇಸ್ರೇಲ್-ಲೆಬನಾನ್ ಗಡಿಯಲ್ಲಿನ ಪರಿಸ್ಥಿತಿಯು ಹಿಜ್ಬುಲ್ಲಾದ ಮಾಜಿ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಹತ್ಯೆಯ ನಂತರ ತೀವ್ರವಾಗಿ ಉಲ್ಬಣಗೊಂಡಿದೆ. ಇಸ್ರೇಲ್ ಈ ಪ್ರದೇಶದಲ್ಲಿ ಭೂ-ಆಧಾರಿತ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ವರದಿಯಾಗಿದ್ದು, ಅಲ್ಲಿರುವ ಪಡೆಗಳಿಗೆ ಹೆಚ್ಚಿನ ಅಪಾಯವಿದೆ ಎಂದು ವರದಿಯಾಗಿದೆ. ಆದರೆ UNIFIL ಪೋಸ್ಟ್ಗಳ ಸಮೀಪವಿರುವ ಪ್ರದೇಶಗಳಲ್ಲಿ ಹೆಜ್ಬುಲ್ಲಾ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ.