Published
2 hours agoon
By
Akkare Newsಪುತ್ತೂರು ನಗರದ ಒಳಚರಂಡಿ ಯೋಜನೆಯ ಮಲತ್ಯಾಜ್ಜ ಸಂಸ್ಕರಣಾ ಘಟಕಕ್ಕೆ ಅಡ್ಡಿ ಪಡಿಸುವ ಮೂಲಕ ಜಾಗವನ್ನು ಕಬಳಿಸುವ ಪ್ರಯತ್ನ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರಿಂದ ನಡೆಯುತ್ತಿದೆ ಎಂದು ನಗರ ಸಭೆ ಮಾಜಿ ವಿಪಕ್ಷ ನಾಯಕ, ನಗರ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹೆಚ್. ಮಹಮ್ಮದ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ನಗರಕ್ಕೆ ಒಳಚರಂಡಿ ಯೋಜನೆಗೆ ಸರ್ವೆ ನಡೆದು ಅದಕ್ಕೆ ಬೇಕಾದ ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಚಿಕ್ಕ ಮೂಡ್ನ್ನೂರು ಗ್ರಾಮದ ನೆಕ್ಕರೆ ಕೊರಜ್ಜಿಮಜಲು ಎಂಬಲ್ಲಿ ಸರ್ವೆ ನಂಬರ್ 102/9ರಲ್ಲಿ 5.50 ಎಕರೆ ಜಮೀನನ್ನು ಸಹಾಯಕ ಆಯುಕ್ತರು ಕಾದಿರಿಸಿ ಆದೇಶ ಮಾಡಿರುತ್ತಾರೆ.ಕೇಂದ್ರ ಸರಕಾರದ ಸ್ವಚ್ಚ ಭಾರತ್ ಯೋಜನೆಯಲ್ಲಿ ರಾಜ್ಯ ಸರಕಾರದ ಪಾಲುದಾರಿಕೆಯಲ್ಲಿ ಒಳಚರಂಡಿ ಯೋಜನೆಗೆ ರೂ.19 ಕೋಟಿ ಅನುದಾನವೂ ಮಂಜೂರಾಗಿದೆ. ಈ ಅನುದಾನದಲ್ಲಿ ನಗರದ ಒಂದು ವಲಯಕ್ಕೆ ಸೀಮಿತವಾಗಿ ಒಳಚರಂಡಿ ಯೋಜನೆ ಅನುಷ್ಟಾನ ಮಾಡಲು ಇಲಾಖೆ ಮುಂದಾಗಿದೆ.ಆದರೆ, ಇದಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರಿಂದ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಲಿ ಆರೋಪಿಸಿದರು.
ಒಳಚರಂಡಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಕಾದಿರಿಸಲಾಗಿರುವ ನಿವೇಶನದ ಬಳಿಯೇ ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಅವರು ತನ್ನ ಪತ್ನಿ ಹೆಸರಿನಲ್ಲಿ ಖರೀದಿಸಿದ ಜಮೀನಿನಲ್ಲಿ ವಸತಿ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡಲು ಮುಂದಾಗಿದ್ದಾರೆ.ಇಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣವಾದರೆ ಬಡಾವಣೆಯ ನಿವೇಶನವನ್ನು ಯಾರೂ ಖರೀದಿಸಲು ಸಾಧ್ಯವಿಲ್ಲವೆಂದು, ಇದಕ್ಕಾಗಿ ಒಳಚರಂಡಿ ಮಲತ್ಯಾಜ್ಯ ಸಂಸ್ಕರಣಾ ಘಟಕವನ್ನೇ ರದ್ದು ಪಡಿಸುವ ಹುನ್ನಾರ ನಡೆಯುತ್ತಿದ್ದು ಇದಕ್ಕಾಗಿ ನಗರಸಭೆಯಿಂದ ದಾರಿ ದೀಪ ಅಳವಡಿಸಲಾಗಿದ್ದ ರಸ್ತೆಯನ್ನು ಮಣ್ಣು ಹಾಕಿ ಬಂದ್ ಮಾಡಿ ಕಾಂಪೌಂಡ್ ನಿರ್ಮಿಸಿದ್ದಾರೆ.ಇದಕ್ಕೆ ಮೊದಲೇ ದಿಕ್ಸೂಚಿ ಫಲಕವನ್ನು ಕಿತ್ತು ಎಸೆದಿದ್ದಾರೆ.ಇದರ ಬಗ್ಗೆ ಸಾರ್ವಜನಿಕರು ಲಿಖಿತ ದೂರು ನೀಡಿದ್ದರೂ ನಗರ ಸಭೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ ಎಂದು ಆಲಿ ಆರೋಪಿಸಿದರಲ್ಲದೆ, ನಾನೇ ಪೌರಾಯುಕ್ತರಿಗೆ ಮೌಖಿಕವಾಗಿ ನೀಡಿದ ದೂರಿನಂತೆ ನಗರ ಸಭೆಯ ಕಂದಾಯ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಹೋದ ಸಮಯದಲ್ಲಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೊಬೈಲ್ ಕಿತ್ತು ಅದರಲ್ಲಿರುವ ರಸ್ತೆಯ ಫೋಟೋಗಳನ್ನು ಡಿಲೀಟ್ ಮಾಡಿ ಅದಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಈ ಘಟನೆಗೆ ಸಂಬಂಧಿಸಿ ನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ ಎಂದು ಆಲಿ ತಿಳಿಸಿದರು.
ನಗರ ಸಭಾ ಸದಸ್ಯ ರಿಯಾಝ್ ಪರ್ಲಡ್ಕ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಅಲಿಕುಂಞಿ ಕೊರಿಂಗಿಲ,ನಗರ ಕಾಂಗ್ರೆಸ್ ಕಾರ್ಯದರ್ಶಿ ಸೈಮನ್,ಕಾರ್ಯಕರ್ತ ರಾಮಣ್ಣ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.