Published
10 months agoon
By
Akkare News
ಪುತ್ತೂರು:ಸಾರಿಗೆ ಇಲಾಖೆಯ ಆಯುಕ್ತ ಯೋಗೀಶ್ ಎ.ಎಂ.ರವರು ಸೆ.26ರಂದು ಪುತ್ತೂರಿಗೆ ಭೇಟಿ ನೀಡಿ ಮುಂಡೂರಿನಲ್ಲಿ ನಿರ್ಮಾಣವಾಗಲಿರುವ ಆರ್ಟಿಒ ಟ್ರ್ಯಾಕ್ನ ಜಾಗದ ಪರಿಶೀಲನೆ, ಮರಗಳ ಕಡಿತದ ತೊಡಕುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.


ಆರ್ಟಿಓ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತ ಯೋಗೀಶ್ ಎ.ಎಂರವರು, ದ.ಕ ಜಿಲ್ಲೆಯ ಆರ್ಟಿಒ ಕಛೇರಿ ಭೇಟಿ ಮಾಡಿದ್ದು, ಬಂಟ್ವಾಳ ಹಾಗೂ ಪುತ್ತೂರು ಕಛೇರಿಗೆ ಬಂದಿದ್ದೇವೆ. ಮುಂಡೂರಿನಲ್ಲಿ ಆರ್ಟಿಒ ಟ್ರ್ಯಾಕ್ ನಿರ್ಮಾಣವಾಗುವ ಜಾಗದ ಪರಿಶೀಲನೆ, ಮರಗಳ ಕಡಿತದ ತೊಡಕುಗಳ ಮಾಹಿತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಪುತ್ತೂರಿಗೆ ಭೇಟಿ ನೀಡಿದ್ದೇವೆ. ಉಡುಪಿಯಲ್ಲಿ ನಿರ್ಮಾಣವಾದ ನೂತನ ಟ್ರ್ಯಾಕ್ನಲ್ಲಿ ಸೆನ್ಸಾರ್ ಸಮಸ್ಯೆ ಹಾಗೂ ಸಾಫ್ಟ್ವೇರ್ ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.ಗ್ರಾಮೀಣ ಭಾಗದ ಖಾಸಗಿ ಬಸ್ ಸಮಯದ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ಶೇ.12ರಷ್ಟು ಸಿಬ್ಬಂದಿ ಇದ್ದು, ಈಗಿನ ವ್ಯವಸ್ಥೆಗೆ ಇಷ್ಟು ಸಿಬ್ಬಂದಿ ಸಾಕಾಗುತ್ತದೆ. ಇದರಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ತಾಂತ್ರಿಕ ವಿಚಾರಗಳಿಗೆ ಹೊರಗುತ್ತಿಗೆಯ ಸಿಬ್ಬಂದಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.



ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ.ಮಲ್ಲಿಕಾರ್ಜುನ, ಜಂಟಿ ಸಾರಿಗೆ ಆಯುಕ್ತ ಭೀಮನ ಗೌಡ ಪಾಟೀಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ವಿಶ್ವನಾಥ ಅಜಿಲ ಮತ್ತಿತರರು ಉಪಸ್ಥಿತರಿದ್ದರು.


