Published
4 months agoon
By
Akkare News
ಪುತ್ತೂರು: ಮಹಾರಾಷ್ಟ್ರದ ಪುಣೆ ಮೂಲದ SunC ಬ್ಯಾಟರಿ ಕಂಪನಿಯ ಕರ್ನಾಟಕದ ಏಕೈಕ ಡೀಲರ್ ಮನನ್ ಎಂಟರ್ ಪ್ರೈಸಸ್ ಪುತ್ತೂರಿನ ಅರುಣಾ ಕಲಾಮಂದಿರದ ಮುಂಭಾಗದಲ್ಲಿರುವ ಕಣ್ಣನ್ ಕಾಂಪ್ಲೆಕ್ಸ್ ನಲ್ಲಿ ನ.7 ರಂದು ಶುಭಾರಂಭಗೊಂಡಿತು.

ಪರಿಸರ ಸ್ನೇಹಿ ಬ್ಯಾಟರಿ ಹಾಗೂ ಬ್ಯಾಟರಿ ರಿಜನರೇಷನ್ ಯಂತ್ರಗಳ ಮಾರಾಟ ಹಾಗೂ ಸೇವೆಗಳ ಡೀಲರ್ ಮನನ್ ಎಂಟರ್ ಪ್ರೈಸಸ್ ಅನ್ನು ಮಾಲಕ ಅರ್ಜುನ್ ಮೂರ್ಜೆ ಅವರ ಪುತ್ರ ಮಾಸ್ಟರ್ ಮನನ್ ಮೂರ್ಜೆ ಉದ್ಘಾಟಿಸಿದರು.
ಸರ್ವಿಸ್ ವಿಭಾಗ ಉದ್ಘಾಟಿಸಿದ ಹಿಂದೂ ಮುಖಂಡ, ಪುತ್ತಿಲ ಪರಿವಾರ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪರಿಶ್ರಮ, ಶ್ರದ್ಧೆ ಇದ್ದರೆ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎನ್ನುವುದಕ್ಕೆ ಅರ್ಜುನ್ ಮೂರ್ಜೆ ಸಾಕ್ಷಿ. ಅನೇಕ ಕಾರ್ಯಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಇದೀಗ ಸ್ವ ಉದ್ಯಮಕ್ಕೆ ಧುಮುಕಿ ಮನನ್ ಎಂಟರ್ಪ್ರೈಸಸ್ ಎಂಬ ಬ್ಯಾಟರಿ ರಿಜನರೇಷನ್ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ. ಇಂತಹ ಇನ್ನಷ್ಟು ಶಾಖೆಗಳನ್ನು ತೆರೆಯುವಂತಾಗಲಿ. ಈ ಸಂಸ್ಥೆಯಿಂದ ಉತ್ತಮ ಸೇವೆ ಸಿಗುವಂತಾಗಲಿ ಎಂದು ಶುಭಹಾರೈಸಿದರು.

ಮಾಜಿ ಯೋಧ, ಅರ್ಜುನ್ ಮೂರ್ಜೆ ತಂದೆ, ಕನಕಮಜಲಿನ ಮೂರ್ಜೆ ತರವಾಡಿನ ಎಂ.ಪಿ.ಬಾಲಕೃಷ್ಣ ಗೌಡ ಮೂರ್ಜೆ ಮಾತನಾಡಿ, ಹತ್ತು ಮಂದಿಗೆ ಪ್ರಯೋಜನವಾಗುವಂತಹ ಸಂಸ್ಥೆಯನ್ನು ಪ್ರಾರಂಭಿಸುವುದು ಅರ್ಜುನ್ ಅವರ ಇಚ್ಛೆಯಾಗಿತ್ತು. ಈ ಕನಸು ಇದೀಗ ಈಡೇರಿದೆ ಎಂದು ಹೇಳಿ ಶುಭಹಾರೈಸಿದರು.
ಮಾಲಕ ಅರ್ಜುನ್ ಮೂರ್ಜೆ ಮಾತನಾಡಿ, ಎರಡು ವರ್ಷಗಳ ಹಿಂದೆ SunC ಬಗ್ಗೆ ತಿಳಿದುಕೊಂಡಾಗ ಕರ್ನಾಟಕದಲ್ಲಿ ಇದರ ಡೀಲರ್ ಇಲ್ಲದಿರುವ ಬಗ್ಗೆ ತಿಳಿದು ಪುಣೆಗೆ ಹೋಗಿ ಮಾಹಿತಿ ಕಲೆ ಹಾಕಿದೆವು. ಅದರಂತೆ ಪುತ್ತೂರಿನಲ್ಲಿ ಶಾಪ್ ಪ್ರಾರಂಭಿಸಿದ್ದೇವೆ. ಇಲ್ಲಿ ಬ್ಯಾಟರಿಗಳನ್ನು ಮಾರಾಟ ಮಾಡುವುದರ ಜೊತೆಗೆ ಹಳೆಯ ಬ್ಯಾಟರಿಗಳನ್ನು ರಿಜನರೇಷನ್ ಮಾಡಿಕೊಡಲಾಗುವುದು. ಇದರ ಜೊತೆಗೆ ಆರೋಗ್ಯ ಇನ್ಶುರೆನ್ಸ್, ವಾಹನ ಇನ್ಶುರೆನ್ಸ್ ಕೂಡ ಮಾಡಿಕೊಡಲಾಗುವುದು ಎಂದರು.


ಮಾಜಿ ಸೈನಿಕರ ಸಂಘದ ಪುತ್ತೂರಿನ ಅಧ್ಯಕ್ಷ ವಸಂತ ಗೌಡ ಬಪ್ಪಳಿಗೆ, ಮಾಜಿ ಸೈನಿಕರಾದ ರಾಮಚಂದ್ರ ಪುಚ್ಚೇರಿ, ನಾಗಪ್ಪ ಗೌಡ, ಪುಂಡರೀಕಾಕ್ಷ, ಸತೀಶ್ ಗೌಡ ಕರ್ಮಲ, ತುಳಸಿದಾಸ್, ಝೆರೋನ್ ಮಸ್ಕರೇನ್ಹಸ್, ಸುಂದರ ಗೌಡ ನಡುಬೈಲು, ಕಟ್ಟಡ ಮಾಲಕ ಜಯಪ್ರಕಾಶ್ ಕಣ್ಣನ್, ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ್ ಸುವರ್ಣ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು.
ಕಾರ್ಯಕ್ರಮ ನಿರೂಪಿಸಿದ ವಿಜೆ ವಿಖ್ಯಾತ್ ಸ್ವಾಗತಿಸಿ, ವಂದಿಸಿದರು. ಅರ್ಜುನ್ ಮೂರ್ಜೆ ಅವರ ತಾಯಿ ಆಶಾ ಬಾಲಕೃಷ್ಣ ಮೂರ್ಜೆ, ಅರ್ಜುನ್ ಮೂರ್ಜೆ ಪತ್ನಿ ರಚನಾ ಅರ್ಜುನ್ ಮೂರ್ಜೆ, ಅರ್ಜುನ್ ಸಹೋದರಿ ಅಪೂರ್ವ ಬಾಲಕೃಷ್ಣ ಮೂರ್ಜೆ ಅವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.




