Published
8 hours agoon
By
Akkare News
94ಸಿ ಹಕ್ಕುಪತ್ರಕ್ಕಾಗಿ ಪುಣಚ ಗ್ರಾಮದ ಮೂವರು ಫಲಾನುಭವಿಗಳ ಪರವಾಗಿ ಪ್ರತಿಭಟನೆ ನಡೆಸಿದ್ದು ತನ್ನ ನೇತೃತ್ವದಲ್ಲಿ. ಈ ಹೋರಾಟದ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಅವರು ಹಣ ತೆಗೆದುಕೊಂಡಿದ್ದಾನೆಂದು ಹೇಳಿದ್ದಾರೆ. ತಾನು ಫಲಾನುಭವಿಗಳಿಂದ ಹಣ ತೆಗೆದುಕೊಂಡಿಲ್ಲ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಸ್ಪಷ್ಟನೆ ನೀಡಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಣಚ ಗ್ರಾಮದ ಮೂವರು ಫಲಾನುಭವಿಗಳ ಪರವಾಗಿ ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದೆವು. ಇದಕ್ಕೆ ಬಿಜೆಪಿಯ ಪ್ರಮುಖರು ಆಗಮಿಸಿ ಬೆಂಬಲ ನೀಡಿದ್ದರು. ಹೋರಾಟ ಯಶಸ್ವಿಯಾಗಿದೆ. ಇತ್ತೀಚೆಗೆ ಮೂವರು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಆ ಸಂದರ್ಭ ಮೂವರು ಫಲಾನುಭವಿಗಳನ್ನು ಕರೆಸಿ, ಗಿರಿಧರ್ ನಾಯ್ಕ್ ಅವರು ಹಣ ತೆಗೆದುಕೊಂಡಿದ್ದಾರೆಯೇ ಎಂದು ಶಾಸಕರು ಪ್ರಶ್ನಿಸಿದ್ದಾರೆ. ತನ್ನ ಬಗ್ಗೆ ಊಹಾಪೋಹ ಸೃಷ್ಟಿಸಬಾರದು ಎಂದರು.
ಸಂತ್ರಸ್ತರ ಪರವಾಗಿ ಈ ಹಿಂದೆಯೂ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದೇನೆ. ಅವರ ಬಳಿ ತಾನು ಭ್ರಷ್ಟಾಚಾರ ನಡೆಸಿಲ್ಲ. ಅದೇ ರೀತಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿಗೆ ಒಳಪಟ್ಟ ಪುಣಚ ಗ್ರಾಮಸ್ಥರ 94 ಸಿ ಅರ್ಜಿ ಬೇಡಿಕೆಗಾಗಿ ನಡೆಸಿದ ಹೋರಾಟದ ಸಂದರ್ಭವೂ ತಾನು ಸಂತ್ರಸ್ತರಿಗೆ ನ್ಯಾಯ ಕೊಡಿಸಲಿಕ್ಕಾಗಿ ಹೋರಾಟ ನಡೆಸಿದ್ದೇನೆಯೇ ಹೊರತು ಹಣಕ್ಕಾಗಿ ಅಲ್ಲ. ಈ ಮನೆಯವರನ್ನು ನನ್ನ ಕಾರಿನಲ್ಲಿಯೇ ಕರೆದೊಯ್ದಿದ್ದೇನೆ. ನನ್ನ ನೇತೃತ್ವದಲ್ಲಿಯೇ ಪ್ರತಿಭಟನೆ ನಡೆಸಿದ್ದೇನೆ. ಮಾತ್ರವಲ್ಲ ಅವರಲ್ಲಿ ಓರ್ವರಿಗೆ ಬಿಪಿ ಲೋ ಆಗಾಗ ನಾನೇ ಚಿಕಿತ್ಸೆ ನೀಡಿಸಿದ್ದೇನೆ. ಹೀಗಿದ್ದೂ ತನ್ನ ಬಗ್ಗೆ ಅಪಪ್ರಚಾರ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸದಸ್ಯ ಚಂದ್ರಶೇಖರ್ ಪುಣಚ, 94ಸಿ ಹಕ್ಕುಪತ್ರ ಪಡೆದುಕೊಂಡ ಪುಣಚದ ಪ್ರೇಮಾ, ಜಯಲಕ್ಷ್ಮೀ, ಬೇಬಿ ಕುಮಾರಿ ಉಪಸ್ಥಿತರಿದ್ದರು.



