Published
2 hours agoon
By
Akkare News
ನಮ್ಮ ಪುತ್ತೂರು ಹಲವು ಧರ್ಮ, ಜಾತಿ ಹಾಗೂ ಸಮುದಾಯಗಳ ಜನರು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದಿಂದ ಬದುಕುತ್ತಿರುವ ಸೌಹಾರ್ದತೆಯ ನೆಲವಾಗಿದೆ. ಒಂದು ಘಟನೆ ಅಥವಾ ಕೆಲವರ ತಪ್ಪಿನಿಂದಾಗಿ ಇಡೀ ಸಮುದಾಯಗಳ ನಡುವೆ ದ್ವೇಷದ ವಾತಾವರಣ ನಿರ್ಮಾಣವಾಗಬಾರದು.
ತಪ್ಪು ಮಾಡಿದವರು ಯಾರೇ ಆಗಿರಲಿ, ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳಲಿ. ಆದರೆ ಯಾವುದೇ ಘಟನೆಯನ್ನು ರಾಜಕೀಯ ಅಥವಾ ಕೋಮು ಉದ್ದೇಶಕ್ಕೆ ಬಳಸಿಕೊಂಡು ಜನರ ಭಾವನೆಗಳನ್ನು ಕೆರಳಿಸುವುದು ಸಮಾಜದ ಹಿತಕ್ಕೆ ಮಾರಕವಾಗಿದೆ.
ಈ ಸಂದರ್ಭದಲ್ಲಿ ಎಲ್ಲಾ ಧರ್ಮಗಳ ಮುಖಂಡರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಅತ್ಯಂತ ಸಂಯಮದಿಂದ ನಡೆದುಕೊಳ್ಳಬೇಕು. ವದಂತಿಗಳಿಗೆ ಕಿವಿಗೊಡದೆ, ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳದೆ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಸಹಕರಿಸಬೇಕು. ದ್ವೇಷದಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ; ಪ್ರೀತಿ ಮತ್ತು ವಿಶ್ವಾಸದಿಂದ ಮಾತ್ರ ಸಮಾಜವನ್ನು ಕಟ್ಟಬಹುದು. ಸಂಘರ್ಷದಲ್ಲಿ ಯಾರಿಗೂ ಗೆಲುವಿಲ್ಲ; ಶಾಂತಿಯಲ್ಲೇ ಎಲ್ಲರ ಗೆಲುವಿದೆ.
ಆದ್ದರಿಂದ, ಈ ಘಟನೆಯನ್ನು ಮತ್ತಷ್ಟು ದೊಡ್ಡದಾಗಿಸದೆ, ಸಂಬಂಧಪಟ್ಟ ಎಲ್ಲರೂ ಪರಸ್ಪರ ಮಾತುಕತೆ ಮತ್ತು ಸೌಹಾರ್ದಯುತ ಮನೋಭಾವದಿಂದ ಸಮಸ್ಯೆಯನ್ನು ಬಗೆಹರಿಸಬೇಕು. ನಮ್ಮ ಪುತ್ತೂರಿನ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಪರಂಪರೆಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ವಿನಮ್ರವಾಗಿ ಮನವಿ ಮಾಡುತ್ತೇನೆ.
ನಮ್ಮ ಧರ್ಮಗಳು ಬೇರೆ ಇರಬಹುದು; ಆದರೆ ನಮ್ಮ ಮಾನವೀಯತೆ ಒಂದೇ. ನಮ್ಮ ನಂಬಿಕೆಗಳು ಬೇರೆ ಇರಬಹುದು; ಆದರೆ ನಮ್ಮ ಊರು ಒಂದೇ – ನಮ್ಮ ಪುತ್ತೂರು. ಇಂತಿ, ಸೈರಾ ಜುಬೈರ್, ವಕೀಲರು ಪುತ್ತೂರು



