Published
2 years agoon
By
Akkare News
ಕೇರಳ, ಕರ್ನಾಟಕಕ್ಕೆ ಮತ್ತೆ ಮಗ್ಗುಲ ಮುಳ್ಳಾಗುವ ಲಕ್ಷಣ ದಟ್ಟವಾಗಿದೆ. ರಾಜ್ಯದಲ್ಲೂ ಕೊರೊನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚಿದೆ. ಈಗಾಗಲೇ ಶತಕ ಬಾರಿಸಿರುವ ಕೊರೊನಾ ಮತ್ತೆ ತನ್ನ ಖಾತೆಯಲ್ಲಿ ಸಂಖ್ಯೆಗಳನ್ನು ಹೆಚ್ಚಿಸಿಕೊಂಡಿದೆ. ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಹಲವು ಸೂಚನೆ ಕೊಟ್ಟಿದೆ. ಕೋವಿಡ್ ಜೆಎನ್.1 ಉಪತಳಿ. ಕೇರಳದಲ್ಲೇ ಈ ಹೊಸ ಅವತಾರದಲ್ಲಿ ಕೊರೊನಾ ಮಾರಿ ಪತ್ತೆಯಾದ ಬೆನ್ನಲ್ಲೇ ದೇಶಾದ್ಯಂತ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಕೇರಳದಲ್ಲೇ 90 ಶೇಕಡಕ್ಕೂ ಅಧಿಕ ಕೇಸ್ಗಳು ಪತ್ತೆಯಾಗ್ತಿದ್ದಂತೆ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಶತಕ ದಾಟಿರುವ ಕೊರೊನಾ ತನ್ನ ಜಾಲವನ್ನು ವಿಸ್ತರಿಸುತ್ತಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 78 ಕೊರೂನಾ ಕೇಸ್ ದಾಖಲು
ಕಳೆದ 24 ಗಂಟೆಗಳಲ್ಲಿ ಕೊರೊನಾ ಕೇಸ್ ಮತ್ತಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಡಿಸೆಂಬರ್ 22ರಂದು ಒಟ್ಟು 78 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 24 ಗಂಟೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಬೆಂಗಳೂರಲ್ಲಿ ಬರೋಬ್ಬರಿ 68 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ 1, ಚಿಕ್ಕಮಗಳೂರು 4, ದ.ಕನ್ನಡ 2 ಮೈಸೂರು-1, ರಾಮನಗರ -2 ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ 175 ಕೊರೊನಾ ಸಕ್ರಿಯ ಪ್ರಕರಣಗಳಿದ್ದು ಬೆಂಗಳೂರಲ್ಲಿ ಬರೋಬ್ಬರಿ 156 ಆ್ಯಕ್ಟಿವ್ ಕೇಸ್ ಇದೆ. ಹೋಮ್ ಐಸೋಲೇಶನ್ನಲ್ಲಿ ಇರುವವರು 162 ಮಂದಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 13 ಮಂದಿ, ಐಸಿಯು-06, ಐಸೋಲೇಷನ್ ಜನರಲ್ ವಾರ್ಡ್ -07 ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸ್ವಯಂ ಪ್ರೇರಿತವಾಗಿ ಟೆಸ್ಟಿಂಗ್ ಸೆಂಟರ್ಗಳತ್ತ ಜನ ದೌಡು
ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಟೆನ್ನನ್ ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ. ಯಾಕಂದ್ರೆ ರಾಜ್ಯದಲ್ಲಿ ದಾಖಲಾಗಿರೋ ಒಟ್ಟಾರೆ ಕೇಸ್ಗಳಲ್ಲಿ ಶೇಕಡಾ 90 ರಷ್ಟು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. 93 ಪಾಸಿಟಿವ್ ಕೇಸ್ಗಳನ್ನು ಜಿನೋಮಿಕ್ ಸೀಕ್ವೆನ್ಸ್ಗೆ ಆರೋಗ್ಯ ಇಲಾಖೆ ಕಳಿಸಲಾಗಿದೆ. ಕೇಸ್ ಹೆಚ್ಚಳ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಟೆಸ್ಟ್ಗೆ ಚುರುಕು ನೀಡಲಾಗಿದೆ. ಸ್ವಯಂ ಪ್ರೇರಿತವಾಗಿ ಟೆಸ್ಟಿಂಗ್ ಸೆಂಟರ್ಗಳತ್ತ ಜನ ದೌಡಾಯಿಸುತ್ತಿದ್ದಾರೆ. ನಗರದ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 25 ಟೆಸ್ಟ್ಗಳನ್ನು ಕಡ್ಡಾಯವಾಗಿ ನಡೆಸಲಾಗ್ತಿದೆ.
ಬೆಂಗಳೂರಿನಲ್ಲಿ ಹೆಚ್ಚಿನ ಕೇಸ್ ಪತ್ತೆ ಬೆನ್ನಲ್ಲೇ ಬಿಬಿಎಂಪಿ
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಬಿಬಿಎಂಪಿ ಫುಲ್ ಅಲರ್ಟ್ ಆಗಿದೆ. ಸೋಂಕಿತರ ಪೈಕಿ CT ವಾಲ್ಯೂ ಲೆವಲ್ 25 ಅಥವಾ ಅದಕ್ಕಿಂತ ಕಡಿಮೆ ಇರುವವರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಇದಕ್ಕಿಂತ ಕಡಿಮೆ ಸೋಂಕಿತರ ಸ್ಯಾಂಪಲ್ಸ್ನ ಜಿನೋಮಿಕ್ ಸೀಕ್ವೆನ್ಸ್ಗೆ ಬಿಬಿಎಂಪಿ ಕಳುಹಿಸಿದೆ. ಇದ್ರ ಹೊರತಾಗಿಯೂ ಬಿಬಿಎಂಪಿ ಕೊರೋನಾ ಎದುರಿಸಲು ಭರದ ಸಿದ್ಧತೆ ನಡೆಸ್ತಾ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ದಿನ 1,500 ಟೆಸ್ಟ್ ಮಾಡಲಾಗ್ತಿದೆ. 3 ಸಾವಿರ ಕೋವಿಡ್ ಟೆಸ್ಟಿಂಗ್ ಕಿಟ್ಗಳನ್ನು ತೆಗೆದಿರಿಸಲಾಗಿದೆ. ಮಾತ್ರವಲ್ಲದೆ ಕೋವಿಡ್ ತಡೆಗಟ್ಟುವ ಎಲ್ಲಾ ಮಾರ್ಗಗಳನ್ನ ಕೈಗೊಳ್ಳುತ್ತಿದೆ.
ಕೊರೊನಾದಿಂದ ಸಾವನ್ನಪ್ಪಿದವರಿಗೆ ಚಿತಾಗಾರಕ್ಕೆ ಸಿದ್ಧತೆ
ಇನ್ನು ಕೊರೊನಾದಿಂದ ಸಾವನ್ನಪ್ಪಿದವರಿಗೆ ಚಿತಾಗಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿತಾಗಾರ ಇಲ್ಲದೆ ಅಂತ್ಯಸಂಸ್ಕಾರಕ್ಕೆ ಅಲೆದಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಬಾರಿಯಂತೆ ಸಮಸ್ಯೆಯಾಗದಿರಲು ಬಿಬಿಎಂಪಿ ನಿರ್ಧರಿಸಿದೆ. ಗೌರವಯುತವಾಗಿ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನ ಬನಶಂಕರಿ, ಮೇಡಿ ಅಗ್ರಹಾರ, ಹೆಬ್ಬಾಳ, ಸುಮ್ಮನಹಳ್ಳಿ ಚಿತಾಗಾರವನ್ನು ಕೋವಿಡ್ಗೆ ಮೀಸಲಿಸಡಲಾಗಿದೆ. ಒಟ್ಟಾರೆ ಕೇರಳದಲ್ಲಿ ಕೊರೊನಾ ಮಹಾಮಾರಿ ಹೊಸ ಅವತಾರ ಎತ್ತಿದ ಬೆನ್ನಲ್ಲೇ ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಕೊರೊನಾ ಮಾರಿಯ ಆವಾಸಸ್ಥಾನವಾಗ್ತಿದ್ದು ಬಿಬಿಎಂಪಿ ವೈರಸ್ ಹೊಡೆದೋಡಿಸಲು ಸಕಲ ಸಿದ್ಧತೆ ಮಾಡಿಕೊಳ್ತಿದೆ. ಇದರ ಜೊತೆಗೆ ಜನರು ಕೂಡ ಕೊರೊನಾ ನಿಯಮಗಳನ್ನು ಪಾಲಿಸಬೇಕಿದೆ.