Published
2 years agoon
By
Akkare News
ಪುತ್ತೂರು: ಉತ್ತಮ ವ್ಯಕ್ತಿಯಾಗಿ ಸಮಾಜದ ಎಲ್ಲರ ಜೊತೆ ಬೆರೆಯುವ ಮೂಲಕ ಉತ್ತಮ ಜೀವನ ಸಾಗಿಸಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂಬುದಕ್ಕೆ ಕಾಂಗ್ರೆಸ್ ಕಾರ್ಯಕರ್ತ ಪ್ರಕಾಶ್ ಪುರುಷರಕಟ್ಟೆ ಸ್ಪಷ್ಟ ನಿದರ್ಶನವಾಗಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಇತ್ತೀಚೆಗೆ ನಿಧನರಾದ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಪುರುಷರಕಟ್ಟೆ ಅವರಿಗೆ ರೈ ಚಾರಿಟೇಬಲ್ ಟ್ರಸ್ಟ್, ಆರೋಗ್ಯ ರಕ್ಷಾ ಸಮಿತಿ ಸರಕಾರಿ ಆಸ್ಪತ್ರೆ ಪುತ್ತೂರು, ಹಾಗೂ ಎ ಜೆ ಆಸ್ಪತ್ರೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪ್ರಕಾಶ್ ಸ್ಮರಣಾರ್ಥ ನಡೆದ ಹೃದಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿದರು.
ಸರ್ವ ಧರ್ಮದ ಬಂಧುಗಳಜೊತೆ ಉತ್ತಮ ಒಡನಾಟವಿದ್ದ ಪ್ರಕಾಶ್ ಸಮಾಜಕ್ಕೆ ಮಾದರಿಯಾಗಿ ಬದುಕಿದವರು. ತನ್ನ ಬದುಕಿನುದ್ದಕ್ಕೂ ಇನ್ನೊಬ್ಬರ ಕಷ್ಟಕ್ಕೆ ನೆರವಾದವರು ಅವರ ಅಹಲುವಿಕೆ ಪಕ್ಷಕ್ಕೆ, ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.
ನಾವು ಹೇಗೆ ಬದುಕಿದ್ದೆವು ಎಂಬುವುದು ನಮ್ಮ ಮರಣದ ನಂತರ ಗೊತ್ತಾಗ್ತದೆ. ಪ್ರಕಾಶ್ ಅವರ ಅಂತಿಮ ಕಾರ್ಯಕ್ರಮದಲ್ಲಿ ಸರ್ವ ಧರ್ಮದವರೂ ಭಾಗವಹಿಸಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ ಇದು ಅವರು ಮಾಡಿದ ಸೇವೆಗೆ ನಿದರ್ಶನ ಎಂದು ಹೇಳಿದರು. ಅಗಲಿದ ಪ್ರಕಾಶ್ ಕುಟುಂಬದ ಜೊತೆ ಪಕ್ಷ ಎಂದೆಂದೂ ಇರುತ್ತದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ ಜಾತ್ಯಾತೀತತೆಯ ಶಕ್ತಿಯಾಗಿ ಬೆಳೆದಿದ್ದರು. ಮಾನವೀಯ ಮೈಲುಗಲ್ಲನ್ನು ಮೈಗೂಡಿಸಿಕೊಂಡವರಾಗಿದ್ದರು. ಎಲ್ಲ ಸಮುದಾಯದ ಜನರ ಕಷ್ಟಕ್ಕೆ ನೆರವಾದವರು. ರಕ್ತದಾನದ ಮೂಲಕ ಅದೆಷ್ಟೋ ಜೀವ ಉಳಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎಂಬುವುದು ಮುಖ್ಯವಲ್ಲ ಹೇಗೆ ಬದುಕಿದ್ದ ಎಂಬುವುದು ಮುಖ್ಯವಾಗುತ್ತದೆ. ಸಾರ್ಥಕತೆಯ ಜೀವನವನ್ನು ಕಂಡವರು ಪ್ರಕಾಶ್ ಅವರಾಗಿದ್ದರು. ನಾವು ಸತ್ತಾಗಲೂ ಜಾತಿ, ಧರ್ಮ ಮರೆತು ಜನ ನಮ್ಮ ನ್ನು ಕಾಣಲು ಬರುವಂತ ಜೀವನ ನಮ್ಮದಾದಾಗ ನಮ್ಮ ಜೀವನ ಸಾರ್ಥಕವಾಗ್ತದೆ ಎಂದು ಹೇಳಿದರು.