Published
3 hours agoon
By
Akkare Newsಇಲ್ಲಿನ ಮಹಾಲಿಂಗೇಶ್ವರ ದೇವಳದ ಜಾತ್ರಾ ಗದ್ದೆಯಲ್ಲಿ ಮಗುವಿನ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಬಂಟ್ವಾಳ ತಾಲ್ಲೂಕಿನ ಪುಣಚ ಗ್ರಾಮದ ಮೂಡಾಯಿಬೆಟ್ಟು ಚಂದ್ರಶೇಖರ ನಾಯ್ಕ ಅವರು ಈ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಪತ್ನಿ, ಪುತ್ರಿ ಜತೆ ದೇವರ ದರ್ಶನ ಪಡೆದು ದೇವರ ಗದ್ದೆಯಲ್ಲಿನ ಸಂತೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿ ಪತ್ನಿಯ ಹೆಗಲ ಮೇಲಿದ್ದ ಮಗುವಿನ ಸುಮಾರು 8 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಈ ವೇಳೆ ಹಿಂಬಾಲಿಸಿದಾಗ ಆತ ಕೊಲೆ ಮಾಡುವುದಾಗಿ ಬೆದರಿಸುತ್ತಾ ಜನರ ಮಧ್ಯದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಚಿನ್ನದ ಮೌಲ್ಯ ಸುಮಾರು ₹ 40 ಸಾವಿರ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.