Published
3 days agoon
By
Akkare Newsಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ದಿನಾಂಕ 02/6/2025 ರಂದು 2025-26 ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಹಾಗೂ ಶಾಲಾ ಪ್ರಾರಂಭೋತ್ಸವವು ಜರುಗಿತು.
ಪ್ರಾರಂಭದಲ್ಲಿ ಶ್ರೀ ನಾರಾಯಣ ಐತಾಳ್ ಇವರ ನೇತೃತ್ವದಲ್ಲಿ ಶ್ರೀ ಮಹಾ ಗಣಪತಿ ಹೋಮ ಮತ್ತು ದುರ್ಗಾಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, ಸಂಚಾಲಕರಾದ ಶ್ರೀ ಭಾಸ್ಕರ ಆಚಾರ್ ಹಿಂದಾರು,ಕಾರ್ಯದರ್ಶಿ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ, ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕರು ಮಾತನಾಡುತ್ತಾ ಜಗತ್ತಿಗೆ ಒಡೆಯನಾದ ಶ್ರೀ ಕೃಷ್ಣ ಪರಮಾತ್ಮನ ಗುರು ಸಾಂದೀಪನಿ ಹೆಸರಿನಲ್ಲಿ ಶಾಲಾಧ್ಯಕ್ಷರು ಶಾಲೆಯನ್ನು ಆರಂಭಿಸಿದ್ದು ವಿದ್ಯಾರ್ಥಿಗಳಿಗೆ ವಿದ್ಯೆ ಎಂದರೆ ಕೇವಲ ಕಲಿಯುವುದು ಮಾತ್ರವಲ್ಲ ಒಳ್ಳೆತನವನ್ನು ಅಳವಡಿಸಿಕೊಂಡು, ಸಂಸ್ಕಾರಯುತವಾಗಿ,ತಂದೆ ತಾಯಿಗೆ ಗೌರವ ಕೊಟ್ಟು, ಶಾಲೆಗೆ ಚ್ಯುತಿ ಬಾರದ ಹಾಗೆ ಬಾಳಿ ಎಂದರು ಹಾಗೂ ನೂತನ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಅವರಿಗೆ ಅಭಿನಂದಿಸುತ್ತಾ ಎಲ್ಲರನ್ನು ಆದರದಿಂದ ಸ್ವಾಗತಿಸಿದರು.
ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳೊಂದಿಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ದೀಕ್ಷೆ ನೀಡಿದರು. ನಂತರ ಆರತಿ ಬೆಳಗಿ ತಿಲಕವಿಡುವ ಮೂಲಕ ಹೊಸ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯಪಾಲರಿಂದ ಗೌರವಿಸಲ್ಪಟ್ಟ ಸ್ಕೌಟ್ ಗೈಡ್ ವಿಭಾಗದ ರಾಜ್ಯಪುರಸ್ಕಾರ ಮತ್ತು golden arrow ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಸಂಸ್ಥೆಯ ಅಧ್ಯಕ್ಷರು ವಿತರಿಸಿದರು.
ನಂತರ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ಉಡುಗೊರೆಯನ್ನು ನೀಡಿ ಆಶೀರ್ವಾದಿಸಿ ಮಾತನಾಡಿದ ಶಾಲಾ ಅಧ್ಯಕ್ಷರು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬಾಳಿ, ಪ್ರತಿ ದಿನವನ್ನು ಸುದಿನವನ್ನಾಗಿ ಮಾಡಿ ಆಯಾಯ ತರಗತಿಯಲ್ಲಿ ಒಳ್ಳೆಯ ವಿದ್ಯೆಯನ್ನು ಪಡೆದು, ಹೊಸ ಶೈಕ್ಷಣಿಕ ವರ್ಷ ಎಲ್ಲರಿಗೂ ಶುಭವನ್ನು ತರಲಿ ಉತ್ತಮ ಅಂಕಗಳನ್ನು ಪಡೆದು ಸುಸಂಸ್ಕೃತ ಮಕ್ಕಳಾಗಿ ಬಾಳಿ ಎಂದು ಆಶೀರ್ವದಿಸಿದರು.
ಶ್ರೀಮತಿ ಪ್ರಮೀಳಾ ರವರು ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳಾದ ಕು ಆರಾಧ್ಯ ಮತ್ತು ಕು ವಿಶಾಖಾ ಪ್ರಾರ್ಥಿಸಿದರು.ಶ್ರೀ ಮತಿ ವಾಣಿ ರವರು ಧನ್ಯವಾದಗೈದರು.ನಂತರ ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.