Published
16 hours agoon
By
Akkare News
ಪುತ್ತೂರು :ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಶ್ರೀ ಗೋಪಾಲಕೃಷ್ಣ ವೇದಿಕೆಯಲ್ಲಿ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಮಾ.6ರಂದು ನಡೆಯಿತು.
ಆಡಳಿತ ಮಂಡಳಿ ಸದಸ್ಯರಾದ ಡಾ ಶಿವಾನಂದ್ ಮಾತನಾಡಿ, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಗುರುಗಳಾದ ಪ್ರಸನ್ನ ಕೆ ಮಾತನಾಡಿ ಬೀಳ್ಕೊಡುಗೆ ದಿನ ಎಂದರೆ ನಿಮನ್ನು ನಾವು ಪ್ರೀತಿಯಿಂದ ಆಶೀರ್ವದಿಸುವ ದಿನ. ಇಂದು ನೀವು ಶುಭ ವಸ್ತ್ರರಾಗಿ, ಬಣ್ಣ ಬಣ್ಣದಿಂದ ಬಂದಿದ್ದೀರಿ ಇದು ನಿಮ್ಮ ಪೋಷಕರ ಶ್ರಮ. ಪೋಷಕರ ಕನಸನ್ನ, ಕಾಳಜಿಯನ್ನು ಹಾಳು ಮಾಡಬೇಡಿ ಎಂದು ಎಲ್ಲರಿಗೂ ಶುಭ ಹಾರೈಸಿದರು.

ಶಾಲಾ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ ಮಾತನಾಡಿ, ಪೋಷಕರ ಅಭಿಪ್ರಾಯದಂತೆ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉತ್ತಮ ವಿದ್ಯಾರ್ಥಿಯಾಗಬೇಕು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕೊಡಬೇಕು. ಜೀವನದಲ್ಲಿ ಸಾಧನೆಯ ಗುರಿ ತಲುಪಲು ಶಿಸ್ತಿನ ಚೌಕಟ್ಟು ಹಾಕಿಕೊಳ್ಳಬೇಕು. ನಮ್ಮನ್ನು ನಾವು ಹತೋಟಿಯಲ್ಲಿ ಇಟ್ಟುಕೊಂಡರೆ ಮಾತ್ರ ಸಾಧ್ಯ ಎಂದರು.

ಕೋಶಾಧಿಕಾರಿ ಹರೀಶ್ ಪುತ್ತೂರಾಯ ಮಾತನಾಡಿ, ಪ್ರತಿ ವರ್ಷ ಬೀಳ್ಕೊಡುಗೆ ನೆರವೇರುತ್ತದೆ. ಪ್ರತಿ ವರ್ಷ ಹೊರ ಪ್ರಪಂಚಕ್ಕೆ ಒಂದು ತಂಡವನ್ನು ನೀಡುತ್ತಿದ್ದೇವೆ ಎನ್ನುವುದು ಒಂದು ಖುಷಿಯ ವಿಷಯ. ನೀವು ಮುಂದಿನ ದಿನಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ಪ್ರಪಂಚ ನಾವು ಅಂದುಕೊಂಡ ಹಾಗೆ ಇಲ್ಲ ಎಂದರು.
ವಿದ್ಯಾರ್ಥಿಗಳಾದ ತನ್ಮಯಿ ಎಸ್ ಆರ್, ಸಾತ್ವಿಕ್ ಕೃಷ್ಣ, ಮಹಿಮಾ, ಸೌಂದರ್ಯ, ಅನಘ ಪ್ರಭು ಹಾಗೂ ಶಿಕ್ಷಕರಾದ ಪ್ರಶಾಂತಿ, ರಮೇಶ್ ಮಾತನಾಡಿದರು.


ವಿದ್ಯಾರ್ಥಿಗಳು ಸವಿ ನೆನಪಿಗೆ ಉಡುಗೊರೆಯನ್ನು ಶಾಲೆಗೆ ನೀಡಿದರು. ಕೃಷ್ಣನ ಮೂರ್ತಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಆಶೀರ್ವದಿಸಿ ಮಾತನಾಡಿದ ಶಾಲಾ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ಬೀಳ್ಕೊಡುಗೆ ಮಾಡುವಾಗ ಕೃಷ್ಣನ ಮೂರ್ತಿ ಯನ್ನು ಇಂದು ಪಡೆದಿದ್ದೀರಿ ಅದನ್ನು ಇಟ್ಟುಕೊಂಡು ಭಗವದ್ಗೀತೆ ಯನ್ನು ತಿಳಿಯಲು ಪ್ರಯತ್ನ ಪಡಬೇಕು. ಕೆಲವರಿಗಾದರೂ ನೆನಪು ಉಳಿವಂತೆ ಬಾಳಬೇಕು. ಕೃಷ್ಣ ನಿಮ್ಮ ಮನಸ್ಸಿನೊಳಗೆ ಇಟ್ಟುಕೊಂಡು ಅವನನ್ನು ಮನನ ಮಾಡಿದರೆ ಗೊತ್ತಿಲ್ಲದೇ ಆಶೀರ್ವದಿಸುತ್ತಾನೆ. ಪ್ರಯತ್ನ ಪಡಬೇಕು ಅಧ್ಯಾಪಕರು ಶ್ರಮ ಪಟ್ಟದ್ದು ವ್ಯರ್ಥವಾಗಲು ಬಿಡದೆ ಉತ್ತಮ ಅಂಕವನ್ನು ಗಳಿಸಿ ಸಾಧನೆಯನ್ನು ಮಾಡಿ ಎಂದರು.
ಚೈತ್ರ ಪ್ರಾರ್ಥಿಸಿದರು. ರವಿಶಂಕರ್ ವಂದಿಸಿದರು. ವಾಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕ -ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




