Published
8 hours agoon
By
Akkare News
ಈಚೆಗೆ ಜೈಲು ತಪಾಸಣೆಯ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆ ಆಗಿತ್ತು. ಈ ಬೆಳವಣಿಗೆಯಿಂದ ದರ್ಶನ್, ಪವಿತ್ರಾ ಗೌಡ ಅವರಿಗೂ ಬಿಸಿ ಮುಟ್ಟಿದ್ದು, ಬ್ಯಾರಕ್ಗಳನ್ನು ಬದಲಾಯಿಸಲಾಗಿದೆ. ಕರ್ನಾಟಕದ ಅತಿದೊಡ್ಡ ಕಾರಾಗೃಹವಾಗಿರುವ ಪರಪ್ಪನ ಅಗ್ರಹಾರದಲ್ಲಿ ಇದೀಗ ಭದ್ರತೆ ಹೆಚ್ಚಳ ಮಾಡಲಾಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿದ್ದ ಬ್ಯಾರಕ್ಗಳನ್ನು ಬದಲಾವಣೆ ಮಾಡಲಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಮೊಬೈಲ್ ಫೋನ್ ಪತ್ತೆ ಆಗಿದ್ದು, ಇದರ ಬೆನ್ನಲ್ಲೇ ಹಲವು ಪ್ರಮುಖ ಬದಲಾವಣೆಗಳು ಆಗಿವೆ. ಇದರ ಪರಿಣಾಮ ಇದೀಗ ದರ್ಶನ್ – ಪವಿತ್ರಾ ಗೌಡ ಅವರಿದ್ದ ಬ್ಯಾರಕ್ಗಳ ಮೇಲೂ ಸಹ ಆಗಿದೆ.
ಈಚೆಗೆ ವೈರಲ್ ಆಗಿರುವ ವಿಡಿಯೋದಿಂದಾಗಿ ಜೈಲು ಆಡಳಿತಕ್ಕೆ ತೀವ್ರ ಮುಜುಗರ ಎದುರಾಗಿದೆ. ಇದರ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ನಡೆಸಿದ ದಿಢೀರ್ ತಪಾಸಣೆಯು ಜೈಲಿನಲ್ಲಿ ಭಾರೀ ಸಂಚಲವನ್ನುಂಟು ಮಾಡಿದೆ. ಈಚೆಗೆ ಏಕಾಏಕಿ ನಡೆಸಿದ ಕಾರ್ಯಾಚರಣೆಯ ಬಿಸಿಯು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಹೈಪ್ರೊಫೈಲ್ ಕೈದಿಗಳಿಗೂ ತಟ್ಟಿದೆ ಎಂದು ಹೇಳಲಾಗಿದೆ.
ಹೈಪ್ರೊಫೈಲ್ ಕೈದಿಗಳ ಬ್ಯಾರಕ್ನಲ್ಲಿ ಹೆಚ್ಚಿನ ಭದ್ರತೆ ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲುಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮುಖ್ಯವಾಗಿ ಹೈಪ್ರೊಫೈಲ್ ಕೈದಿಗಳು ಇರುವ ಬ್ಯಾರಕ್ಗಳಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ. ಪರಪ್ಪನ ಅಗ್ರಹಾರದಂತಹ ಹೈಸೆಕ್ಯುರಿಟಿ ವಲಯದಲ್ಲಿ ಕೈದಿಗಳ ಬಳಿ ಮೊಬೈಲ್ ಫೋನ್ ಪತ್ತೆ ಆಗಿರುವುದು ಸರ್ಕಾರಕ್ಕೂ ಮುಜುಗರವನ್ನುಂಟು ಮಾಡಿದೆ. ಆದರೆ ಈ ಏಕಾಏಕಿ ದಾಳಿ ಮಾಡುವಂತೆ ನಿರ್ದೇಶನ ನೀಡಿದ್ದೇ ನಾನು ಎಂದು ಈಚೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದರು.
ನಟ ದರ್ಶನ್ – ಪವಿತ್ರಾ ಗೌಡ ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮುಖ್ಯವಾಗಿ ಹೈಪ್ರೊಫೈಲ್ ಕೈದಿಗಳ ಮೇಲೆ ಜೈಲು ಅಧಿಕಾರಿಗಳು ಹದ್ದಿನ ಕಣ್ಣಿರಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಮತ್ತು ಸಹ ಆರೋಪಿ ಪವಿತ್ರಾ ಗೌಡ ಅವರ ಬ್ಯಾರಕ್ಗಳಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಅಥವಾ ಭದ್ರತೆ ಹೆಚ್ಚಳ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಇವರುವ ಸ್ಥಳದಿಂದ ಬೇರೆ ಜಾಗಕ್ಕೆ ಬದಲಾಯಿಸಲಾಗಿದೆ.
ಈ ಹಿಂದೆ ಕೇವಲ ಇಬ್ಬರು ಕೈದಿಗಳಿದ್ದ ಬ್ಯಾರಕ್ನಲ್ಲಿದ್ದ ಪವಿತ್ರಾ ಗೌಡ ಅವರು ಇದ್ದರು. ಅವರನ್ನು ಇದೀಗ 16 ಜನ ಕೈದಿಗಳಿರುವ ಸಾಮೂಹಿಕ ಬ್ಯಾರಕ್ಗೆ ಸ್ಥಳಾಂತರಿಸಲಾಗಿದ್ದರೆ, ದರ್ಶನ್ ಇರುವ ಬ್ಯಾರಕ್ ಸುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ.
ಇದರೊಂದಿಗೆ ಪ್ರಜ್ವಲ್ ರೇವಣ್ಣ ಪ್ರಕರಣದ ಮತ್ತೊಬ್ಬ ಆರೋಪಿ ಮತ್ತು ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಹೆಚ್ಚಿನ ಆದ್ಯತೆ ನೀಡಿದೆ. ಈ ಆರೋಪಿಗೆ ಬೇರೆ ಕೈದಿಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈಗಾಗಲೇ ಅವರನ್ನು ಮತ್ತೊಂದು ಬ್ಯಾರಕ್ಗೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ. 


