Published
22 hours agoon
By
Akkare News
ಈ ಹಿಂದೆ ಡಿಎಂಕೆ ಅಭ್ಯರ್ಥಿ ಸುಮಾರು 75 ವರ್ಷದ ಹಿರಿಯ ರಾಜಕಾರಣಿಯಾಗಿರುವ ವಿ.ಎಸ್. ಬಾಬು ಅವರಿಗೆ ರಾಜಕೀಯದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅನುಭವವಿದೆ. ಇವರು ಈ ಹಿಂದೆ ಪುರಸವಾಲ್ಕಂ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ವಿಶೇಷವೆಂದರೆ, ವಿ.ಎಸ್. ಬಾಬು ಅವರು 2006ರಲ್ಲಿ ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿ 90,000 ಮತಗಳ ಬೃಹತ್ ಅಂತರದಿಂದ ಗೆದ್ದು ಶಾಸಕರಾಗಿದ್ದರು. ದೀರ್ಘಕಾಲ ಡಿಎಂಕೆ ಜೊತೆಗಿದ್ದ ಇವರು, 2026ರ ಫೆಬ್ರವರಿ 7ರಂದು ವಿಜಯ್ ಅವರ ಟಿವಿಕೆ ಪಕ್ಷವನ್ನು ಸೇರಿಕೊಂಡಿದ್ದರು.
ಈ ಗೆಲುವು ತಮಿಳುನಾಡು ರಾಜಕಾರಣದಲ್ಲಿ ದಶಕಗಳಿಂದ ಬೇರೂರಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಅಧಿಪತ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ವಿಜಯ್ ಅವರ ಪಕ್ಷವು 110ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಧಿಕಾರದ ಗದ್ದುಗೆಯ ಹತ್ತಿರ ತಲುಪಿದೆ. ಸ್ವತಃ ಮುಖ್ಯಮಂತ್ರಿಯನ್ನೇ ಅವರ ಕ್ಷೇತ್ರದಲ್ಲಿ ಸೋಲಿಸುವ ಮೂಲಕ ವಿ.ಎಸ್. ಬಾಬು ಅವರು ದ್ರಾವಿಡ ರಾಜಕಾರಣದ ಹೊಸ ಪರ್ವಕ್ಕೆ ನಾಂದಿ ಹಾಡಿದ್ದಾರೆ. ದಶಕಗಳಿಂದ ತಮಿಳುನಾಡನ್ನು ಆಳುತ್ತಿರುವ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗೆ ದಳಪತಿ ವಿಜಯ್ ಅವರ ಪಕ್ಷವು ಭಾರಿ ಹೊಡೆತ ನೀಡಿದೆ. ಅದರಲ್ಲೂ ಸ್ವತಃ ಮುಖ್ಯಮಂತ್ರಿಯನ್ನೇ ಅವರ ಕ್ಷೇತ್ರದಲ್ಲಿ ಸೋಲಿಸುವ ಮೂಲಕ ವಿ.ಎಸ್. ಬಾಬು ಅವರು ಗಮನ ಸೆಳೆದಿದ್ದಾರೆ.
‘ಭಿನ್ನಮತದಿಂದ ಹೊರಕ್ಕೆ ಬಾಬು ಅವರು 2011ರವರೆಗೆ ಉತ್ತರ ಚೆನ್ನೈ ಭಾಗದಲ್ಲಿ ಡಿಎಂಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದರು. 2011ರ ವಿಧಾನಸಭಾ ಚುನಾವಣೆಯಲ್ಲಿ ಎಂ.ಕೆ.ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದಾಗ, ಅದರ ಸಂಪೂರ್ಣ ಜವಾಬ್ದಾರಿಯನ್ನು ಬಾಬು ಅವರೇ ಹೊತ್ತಿದ್ದರು. ಆ ಚುನಾವಣೆಯಲ್ಲಿ ಸ್ಟಾಲಿನ್ ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಚುನಾವಣೆಯ ನಂತರ ಡಿಎಂಕೆ ನಾಯಕತ್ವದೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ, ಬಾಬು ಅವರ ಸ್ಥಾನಕ್ಕೆ ಪಿ.ಕೆ. ಶೇಖರ್ ಬಾಬು ಅವರನ್ನು ನೇಮಿಸಲಾಯಿತು. ಇದರಿಂದ ಅಸಮಾಧಾನಗೊಂಡ ವಿ.ಎಸ್. ಬಾಬು ಅವರು ಡಿಎಂಕೆ ತೊರೆದು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸೇರಿದ್ದರು.
ಎಐಎಡಿಎಂಕೆಯಲ್ಲಿದ್ದ ಬಾಬು ಅವರು, ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿದ ನಂತರ ಅವರ ಸಿದ್ಧಾಂತದಿಂದ ಪ್ರೇರಿತರಾಗಿ ‘ತಮಿಳಗ ವೆಟ್ರಿ ಕಳಗಂ’ ಸೇರಿದರು. ರಾಜಕೀಯ ಅನುಭವದ ಕೊರತೆಯಿದ್ದ ವಿಜಯ್ ಅವರ ಪಕ್ಷಕ್ಕೆ ಬಾಬು ಅವರಂತಹ ಹಿರಿಯ ನಾಯಕರ ಸೇರ್ಪಡೆ ದೊಡ್ಡ ಬಲ ನೀಡಿತು. 2026ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ಅವರು ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ವಿ.ಎಸ್. ಬಾಬು ಅವರು ಸುಮಾರು ₹3.7 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. 


