Published
1 day agoon
By
Akkare News

ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ, ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಗೆ ಯಾವುದೇ ಅಡಚಣೆ ಅಥವಾ ಅವಮಾನವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ಸರ್ಕಾರ ಉದ್ದೇಶಿಸಿದೆ. ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ- 2026’ ಅನ್ನು ಸೋಮವಾರದ ರಾಜ್ಯಸಭೆಯ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
3 ವರ್ಷ ಜೈಲು ಶಿಕ್ಷೆ, ದಂಡ ರಾಷ್ಟ್ರಗೀತೆ ‘ಜನ ಗಣ ಮನ..’ಕ್ಕೆ ಸಿಗುವ ಕಾನೂನು ಮತ್ತು ನ್ಯಾಯಾಂಗ ರಕ್ಷಣೆಯನ್ನು ರಾಷ್ಟ್ರೀಯ ಗೀತೆಗೆ ಸಿಗುವಂತೆ ಮಾಡಲು ಕೇಂದ್ರವು ಮಸೂದೆಗೆ ತಿದ್ದುಪಡಿ ತರಲು ಸಜ್ಜಾಗಿದೆ. ಇದರ ಪ್ರಕಾರ, ಯಾರಾದರೂ ‘ವಂದೇ ಮಾತರಂ’ ಗೀತೆ ಹಾಡುವಾಗ ತಡೆದರೆ, ಅದಕ್ಕೆ ಅಪಮಾನ ಮಾಡಿದರೆ ಅಂಥವರಿಗೆ ದಂಡ ಅಥವಾ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಇಲ್ಲವೇ ಈ ಎರಡನ್ನು ವಿಧಿಸಲಾಗುತ್ತದೆ. ಅಪಮಾನ, ಅಡಚಣೆ ಕೃತ್ಯಗಳನ್ನು ಈ ಮಸೂದೆಯಡಿ ನಿಷೇಧಿಸಲಾಗುತ್ತದೆ.
ಹೊಸ ಮಸೂದೆ ಮಂಡನೆ ಬಳಿಕ ಅನುಮೋದನೆ ದೊರೆಯುತ್ತಿದ್ದಂತೆ ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆ- 1971’ಗೆ ತಿದ್ದುಪಡಿ ಮಾಡಲಾಗುತ್ತದೆ. ಇದರಡಿ ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆ ಸೇರಿದಂತೆ ದೇಶದ ರಾಷ್ಟ್ರೀಯ ಚಿಹ್ನೆಗಳನ್ನು ಅಪವಿತ್ರಗೊಳಿಸುವುದು ಅಥವಾ ಅಗೌರವಗೊಳಿಸುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸಲಾಗುತ್ತದೆ. ಈ ಪಟ್ಟಿಯಲ್ಲಿ ಈಗ ‘ವಂದೇ ಮಾರತಂ’ ಗೀತೆ ಸೇರಲಿದ್ದು, ಅದಕ್ಕೂ ಶಾಸನಬದ್ಧ ರಕ್ಷಣೆಯನ್ನು ನೀಡುವ ಪಯತ್ನ ಕೇಂದ್ರದ್ದಾಗಿದೆ.
‘ವಂದೇ ಮಾತರಂ’ ಗೀತೆ : ರಾಜ್ಯಗಳಿಗೆ ಪತ್ರ ಇತ್ತೀಚೆಗೆ ‘ವನೇ ಮಾತರಂ’ ನ 150 ನೇ ವಾರ್ಷಿಕೋತ್ಸವದ ವರ್ಷವಿಡೀ ಆಚರಣೆ ಮಾಡಲು ಸರ್ಕಾರ ಘೋಷಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಕಳೆದ ಅಧಿವೇಶನದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಚರ್ಚೆಗಳ ಪರ-ವಿರೋಧ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿಂದೆ ಕೇಂದ್ರ ಗೃಹ ಸಚಿವಾಲಯವು ಅಧಿಕೃತ ಕಾರ್ಯಕ್ರಮಗಳಲ್ಲಿ ‘ಜನ ಗಣ ಮನ’ ಹಾಡಲಾಗುತ್ತದೆ. ಅದೇ ಎಲ್ಲ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ಪ್ರಸಾರ ಮಾಡಲು ಅಥವಾ ಹಾಡುವುದನ್ನು ಕಡ್ಡಾಯಗೊಳಿಸುವಂತೆ ನಿರ್ದೇಶಿಸಿ ಎಲ್ಲ ರಾಜ್ಯ ಸಕಾ್ರಗಳಿಗೆ ಪತ್ರ ಬರೆದಿತ್ತು.




