Published
4 weeks agoon
By
Akkare News


ಬೆಂಗಳೂರು, ಫೆಬ್ರವರಿ 7: ಕಾಂಗ್ರೆಸ್ನಲ್ಲಿ ಅಧಿಕಾರದ ಪಗಟೆಯಾಟ ನಿಂತಿಲ್ಲ. ಗದ್ದುಗೆ ಏರಲು ಒಂದು ಬಣ ರಣತಂತ್ರ ಹೆಣೆಯುತ್ತಿದ್ದರೆ, ಪಟ್ಟ ಬಿಟ್ಟುಕೊಡದಿರಲು ಮತ್ತೊಂದು ಬಣ ಪಟ್ಟು ಹಿಡಿದು ಕುಳಿತಿದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಆಡಿದ ಮಾತು ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಕಿಚ್ಚು ಹೊತ್ತಿಸಿದೆ. ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ, 5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದಿದ್ದಾರೆ. ಯತೀಂದ್ರ ಮತ್ತೆ ಈ ಮಾತು ಹೇಳುವುದಕ್ಕೂ ಕಾರಣವಿದೆ. ದಾವಣಗೆರೆಯಲ್ಲಿ ಮಾತನಾಡಿದ್ದ ಶಾಸಕ ಬಸವರಾಜ್ ಶಿವಗಂಗಾ, ಅಧಿಕಾರ ಹಂಚಿಕೆ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಬಿಡಿ ಎಂದಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಈ ಮಾತು ಹೇಳುತ್ತಿದ್ದಂತೆಯೇ ಯತೀಂದ್ರ ನೇರವಾಗಿಯೇ ಕಣಕ್ಕಿಳಿದಿದ್ದಾರೆ. ಕೆಲವರು ಬದಲಾವಣೆಗೆ ಪ್ರಯತ್ನ ಪಟ್ಟರು. ಆದರೆ ಅದು ಸಕ್ಸಸ್ ಆಗಲಿಲ್ಲ. ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಯಾವಾಗ ಯತೀಂದ್ರ ಈ ಮಾತುಗಳನ್ನಾಡಿದರೋ ಡಿಸಿಎಂ ಬಣದ ಶಾಸಕರು ಕೂಡ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಹಿಂದೆ ಇಟ್ಟಿದ್ದ ಎರಡು ಮುಹೂರ್ತ ಮಿಸ್ ಆಗಿದೆ. ಈ ಬಾರಿ ತಪ್ಪೋ ಮಾತೇ ಇಲ್ಲ ಎಂದು ಡಿಕೆ ಶಿವಕುಮಾರ್ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲೂ ಡಿಸಿಎಂ ಡಿಕೆಯದ್ದೇ ಜಪ ನಡೆದಿದೆ. ಡಿಕೆ ಶಿವಕುಮಾರ್ ಸಿಎಂ ಆಗಿ ಬಂದು ಕಾಂಗ್ರೆಸ್ ಭವನ ಉದ್ಘಾಟಿಸಲಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಇನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕೂಡ, ಡಿಕೆಶಿ ಸಿಎಂ ಆಗಲು ಇನ್ನೊಂದು ಸ್ಟೆಪ್ ಮಾತ್ರ ಬಾಕಿ ಎನ್ನುವ ಮೂಲಕ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.

ಅತ್ತ ಆಪ್ತರೆಲ್ಲರೂ ಮಾತನಾಡಿದ ಬಳಿಕ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬೆಂಬಲಿಗರ ‘ಪ್ರಾರ್ಥನೆ’ ವಿಫಲ ಆಗಲ್ಲ. ಪ್ರಯತ್ನ ವಿಫಲ ಆಗಬಹುದು, ಪ್ರಾರ್ಥನೆ ವಿಫಲ ಆಗಲ್ಲ ಎಂದಿದ್ದಾರೆ. ಹೊರಗೆ ಇಷ್ಟೆಲ್ಲಾ ಆಗುತ್ತಿದ್ದರೂ ಪುತ್ರನ ಮಾತಿಗೆ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಹಿರಿಯ ಸಚಿವರು ಸಿಎಂ-ಡಿಸಿಎಂ ಬಣದ ವಾಕ್ಸಮರಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ, ಕಾಂಗ್ರೆಸ್ ಬಣಗಳಲ್ಲಿ ಕುರ್ಚಿ ಕದನದ ಚರ್ಚೆ ನಡೆಯುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಶುಕ್ರವಾರವೂ ಬಜೆಟ್ ಸಿದ್ಧತೆಯ ಸಭೆಗಳನ್ನು ನಡೆಸಿದ್ದಾರೆ. ಆ ಮೂಲಕ ಯಾರಿಗೆ, ಎಲ್ಲಿ ಸಂದೇಶ ಮುಟ್ಟಿಸಬೇಕೋ ಅದನ್ನು ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.



