Published
4 weeks agoon
By
Akkare News
ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ‘ಮಾಸ್’ ಸಂಸ್ಥೆಯ 13ನೇ ಅಡಿಕೆ ಖರೀದಿ ಕೇಂದ್ರ ಫೆ.16ರಂದು ಬೆಳಿಗ್ಗೆ 10 ಗಂಟೆಗೆ ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ಹೊಸಮಠದ ‘ಸಮೃದ್ಧಿ ಸಹಕಾರ ಸೌಧ’ದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಾಸ್ ಸಂಸ್ಥೆ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ ತಿಳಿಸಿದ್ದಾರೆ.


ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಅಡಿಕೆ ಕೃಷಿಕರ ಹಿತರಕ್ಷಣೆಗಾಗಿ ಉಭಯ ಜಿಲ್ಲೆಯ ಸಹಕಾರಿಗಳು ಮತ್ತು ಅಡಿಕೆ ಬೆಳೆಗಾರರು ಸೇರಿ 2001ರಲ್ಲಿ ಸ್ಥಾಪನೆ ಮಾಡಿರುವ ಮಾಸ್ ಸಂಸ್ಥೆಯು ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯ ಸ್ಥಿರತೆಗಾಗಿ ಮತ್ತು ಕೃಷಿಕರ ಹಿತರಕ್ಷಣೆಗಾಗಿ ಶ್ರಮಿಸುತ್ತಿದೆ. ಪ್ರಸ್ತುತ 5,815 ಮಂದಿ ಸದಸ್ಯರನ್ನು ಹೊಂದಿದ್ದು, ₹ 2.16 ಕೋಟಿ ಪಾಲು ಬಂಡವಾಳವಿದೆ ಎಂದು ಮಾಹಿತಿ ನೀಡಿದ್ದಾರೆ.
ವ್ಯವಹಾರ ವೃದ್ಧಿಯ ಸಂಕಲ್ಪ: 2024ರ ಮಾರ್ಚ್ 13ರಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಸೀತಾರಾಮ ರೈ ಸವಣೂರು ಅವರು ಪುತ್ತೂರಿನ ಕಾವು, ಸುಳ್ಯ ತಾಲ್ಲೂಕಿನ ನಿಂತಿಕಲ್ ಮತ್ತು ಉಬರಡ್ಕ-ಮಿತ್ತೂರು ಎಂಬಲ್ಲಿ ಅಡಿಕೆ ಖರೀದಿ ಶಾಖೆಗಳನ್ನು ಪ್ರಾರಂಭಿಸಿದ್ದಾರೆ. 12 ಶಾಖೆಗಳ ಮೂಲಕ ವ್ಯವಹಾರ ನಡೆಯುತ್ತಿದೆ.







