Published
3 weeks agoon
By
Akkare News
ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಗುಡ್ನ್ಯೂಸ್ ನೀಡಿದೆ. ಪ್ರೋತ್ಸಾಹಧನ ನೀಡುವ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ. ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ.

ಆಯುಕ್ತರು ಕಂದಾಯ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ.
ಈ ಆದೇಶ ಇ-ಪೌತಿ ತಂತ್ರಾಂಶದ ಮೂಲಕ ಮೃತ ಖಾತೆದಾರರ ವಾರಸುದಾರರಿಗೆ ಪಹಣಿ ದಾಖಲಿಸಲು ಕ್ರಮವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಪ್ರೋತ್ಸಾಹಧನ ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 418ರಲ್ಲಿ ಘೋಷಿಸಿರುವಂತೆ, ಪಹಣಿಗಳಿಗೆ ಆಧಾರ್ ಜೋಡಣೆ ಸಂದರ್ಭದಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡುವ ಉದ್ದೇಶದಿಂದ ಇ-ಪೌತಿ ಆಂದೋಲನವನ್ನು ಆರಂಭಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇ-ಪೌತಿ ತಂತ್ರಾಂಶವನ್ನು ಅಳವಡಿಸಿ, ಕ್ರಮವಹಿಸುವ ಕುರಿತು ನಿರ್ದೇಶನಗಳನ್ನು ನೀಡಲಾಗಿರುತ್ತದೆ.

ಇ-ಪೌತಿ ತಂತ್ರಾಂಶದ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಪೌತಿ ಖಾತೆ ಮಾಡಲು ಸಂಬಂಧಪಟ್ಟ ರೈತರ ಮನೆ ಬಾಗಿಲಿಗೆ ಸ್ವಯಂಪ್ರೇರಿತವಾಗಿ ತೆರಳಿ, ದಾಖಲೆಗಳನ್ನು ಪಡೆದು ಆಂದೋಲನದ ರೂಪದಲ್ಲಿ ಪೌತಿ ಖಾತೆ ಪ್ರಗತಿ ಸಾಧಿಸಲು ಕ್ರಮವಹಿಸಲಾಗುತ್ತಿದೆ.


ದಿನಾಂಕ 10-03-2026ರ ವರೆಗೆ ಇ-ಪೌತಿ ತಂತ್ರಾಂಶದಲ್ಲಿ ಶಿರಸ್ತೇದಾರರಿಂದ ಅನುಮೋದನೆಯಾಗಿ ಭೂಮಿ ತಂತ್ರಾಂಶಕ್ಕೆ ಪುಶ್ ಆಗುವ ಪ್ರತೀ ಸರ್ವೆ ನಂಬರ್ನ ಪೌತಿ ಖಾತೆಗೆ ಗ್ರಾಮ ಆಡಳಿತ ಅಧಿಕಾರಿಗೆ ತಲಾ ರೂ. 50 ರಂತೆ ಹಾಗೂ ಗ್ರಾಮ ಸಹಾಯಕರಿಗೆ ತಲಾ ರೂ. 30 ರಂತೆ ಪ್ರೋತ್ಸಾಹಧನ ನೀಡಲಾಗುವುದು.
ಆದ್ದರಿಂದ ಸದರಿ ಅಂಶವನ್ನು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ತಿಳಿಸಿ ಹಾಗೂ ಇ-ಪೌತಿ ತಂತ್ರಾಂಶದಲ್ಲಿ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿಕೊಂಡು ಕಾನೂನುರೀತ್ಯಾ ತ್ವರಿತವಾಗಿ ದಿನಾಂಕ 10-03-2026 ರೊಳಗಾಗಿ ವಾರಸುದಾರರಿಗೆ ಖಾತಾ ಮಾಡಲು ಕ್ರಮವಹಿಸುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ತಾಲೂಕುಗಳ ತಹಶೀಲ್ದಾರರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲು ಈ ಮೂಲಕ ತಿಳಿಸಿದೆ ಎಂದು ಆದೇಶ ಹೇಳಿದೆ.







