Published
8 months agoon
By
Akkare News
ಪುತ್ತೂರು: ಕೆಲ ದಿನಗಳಿಂದ ಚರ್ಚೆಯಲ್ಲಿರುವ ಯುವತಿಯನ್ನು ಗರ್ಭವತಿಯನ್ನಾಗಿಸಿ ಯುವಕ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರವೇ ಪ್ರಕರಣ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ.



ಕಳೆದ ಕೆಲವು ದಿನಗಳ ಹಿಂದೆ ನನಗೆ ಯುವಕನ ತಂದೆ ಕರೆ ಮಾಡಿ ಅವರ ಮಗನ ವಿಷಯವನ್ನು ನನ್ನ ಬಳಿ ಹೇಳಿದ್ದರು. ಈ ರೀತಿ ಘಟನೆ ನಡೆದಿದೆ ಎಂದಿದ್ದರು. ನಾವು ಠಾಣೆಯಲ್ಲಿದ್ದೇವೆ. ಯುವತಿ ತಾಯಿಯೂ ನಮ್ಮ ಜೊತೆಯೇ ಇದ್ದಾರೆ. ಘಟನೆ ನಡೆದು ಹೋಗಿದೆ ನನ್ನ ಮಗ ಆಕೆಯನ್ನು ಮದುವೆಯಾಗುವುದಾಗಿ ಒಪ್ಪಿದ್ದಾನೆ. ಈಗ ಅವನಿಗೆ 21 ವರ್ಷ ಪೂರ್ತಿಯಾಗದ ಕಾರಣ ಎರಡು ತಿಂಗಳು ಬಿಟ್ಟು ಆಕೆಯನ್ನು ಮದುವೆಯಾಗುತ್ತಾನೆ ಎಂದು ಹೇಳಿದ್ದರು.



ಆ ಬಳಿಕ ಯುವತಿಯ ತಾಯಿ ಕರೆ ಮಾಡಿ ಇದೇ ವಿಚಾರವನ್ನು ಹೇಳಿ ಯುವಕ ನನ್ನ ಮಗಳನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. 21 ವರ್ಷ ಪ್ರಾಯ ಪೂರ್ತಿಯಾಗಿಲ್ಲ ಆದ ಕೂಡಲೇ ಮದುವೆಯಾಗುತ್ತಾರೆ ಎಂದು ನನ್ನಲ್ಲಿ ಹೇಳಿದ್ದರು. ಆಗ ನಾನು ಅವರಲ್ಲಿ ” ಮದುವೆಯಾಗುವುದಾಗಿ ಒಪ್ಪಿಕೊಂಡಲ್ಲಿ ಕೇಸು ಯಾಕೆ? ನಿಮ್ಮೊಳಗೆ ರಾಜಿ ಮಾತುಕತೆ ನಡೆಸಿದ್ದೀರಲ್ಲ ಮದುವೆಯಾಗುವುದಾದರೆ ಸಮಸ್ಯೆ ಇತ್ಯರ್ಥವಾಯಿತಲ್ಲ” ಎಂದು ಹೇಳಿದಾಗ ಮಹಿಳೆ “ಹೌದು” ಎಂದು ಹೇಳಿದ್ದರು.


ಆ ನಂತರ ಕೆಲವು ವಾರಗಳ ಬಳಿಕ ಇತ್ತೀಚೆಗೆ ಮಹಿಳೆ ಕರೆ ಮಾಡಿ “ಅವನು ಮದುವೆಯಾಗುದಿಲ್ವಂತೆ ಏನು ಮಾಡುವುದು” ಎಂದು ಹೇಳಿದ್ದರು. ಮದುವೆಯಾಗದೇ ಇದ್ದಲ್ಲಿ ಕಾನೂನು ಪ್ರಕಾರ ಪ್ರಕ್ರಿಯೆ ನಡೆಯಲಿ ಎಂದು ಹೇಳಿದ್ದೆ ವಿನಾ ನಾನು ಬೇರೇನು ಹೇಳಿಲ್ಲ. ನಾನು ಯಾರಿಗೂ ಯಾವುದೇ ಅನ್ಯಾಯ ಮಾಡಿಲ್ಲ, ಅನ್ಯಾಯ ಮಾಡಿ ನಾನು ಗಳಿಸುವಂತದ್ದೇನಿಲ್ಲ. ಈಗ ಪ್ರಕರಣ ದಾಖಲಾಗಿದೆ. ಮುಂದೆ ಕಾನೂನು ಪ್ರಕಾರವೇ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.
