Published
6 months agoon
By
Akkare News
ಶಿರಸಿ: ಕಳೆದ ಐದು ದಿನಗಳಿಂದ ಶಿರಸಿಯ ಬೆಣ್ಣೆಹೊಳೆ ಫಾಲ್ಸ್ನಲ್ಲಿ ನಾಪತ್ತೆಯಾಗಿದ್ದ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ರಾಹುಲ್ ಅವರ ಮೃತದೇಹ ಇಂದು ಕೊನೆಗೂ ಪತ್ತೆಯಾಗಿದೆ. ಈ ಘಟನೆಯಿಂದ ಆತಂಕದಲ್ಲಿದ್ದ ತಾಲೂಕಾ ಆಡಳಿತ ಮತ್ತು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.


ಮಳೆ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ, ತರಬೇತಿ ಪಡೆದ ಗೋಪಾಲ ಗೌಡರ ನೇತೃತ್ವದ ಮಾರಿಕಾಂಬಾ ಲೈಫ್ ಗಾರ್ಡ್ ತಂಡ, ಎನ್ಡಿಆರ್ಎಫ್, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ, ಮತ್ತು ಈಜು ತಜ್ಞ ಈಶ್ವರ ಮಲ್ಪೆ ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯ ನಂತರ ಮೃತದೇಹ ಪತ್ತೆಯಾಗಿದೆ.

ರಾಹುಲ್ ಬಿದ್ದ ಸ್ಥಳದಿಂದ ಸುಮಾರು 400 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಶವ ಪತ್ತೆ ಕಾರ್ಯದಲ್ಲಿ ಡ್ರೋನ್ ಕ್ಯಾಮರಾ ಬಳಸಲಾಗಿದ್ದು, ಇದು ಮೃತದೇಹವನ್ನು ಗುರುತಿಸಲು ನೆರವಾಯಿತು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಶಿರಸಿಯ ಅರಣ್ಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಬೆಣ್ಣೆಹೊಳೆ ಫಾಲ್ಸ್ ವೀಕ್ಷಣೆಗೆ ಹೋಗಿದ್ದಾಗ, ಮೂವರು ವಿದ್ಯಾರ್ಥಿಗಳು ಪಾರಾಗಿದ್ದರು, ಆದರೆ ರಾಹುಲ್ ನಾಪತ್ತೆಯಾಗಿದ್ದರು. ನಿರಂತರ ಐದು ದಿನಗಳ ಶೋಧ ಕಾರ್ಯದ ನಂತರ ಇಂದು ಮಧ್ಯಾಹ್ನ 12:30 ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.









