Published
4 months agoon
By
Akkare News
ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ನಲ್ಲಿ ಸಂಚಲನಕಾರಿ ಬೆಳವಣಿಗೆ ನಡೆದಿದೆ. ಅತ್ತ ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ನಾನೇ ಎಂಬ ಸಂದೇಶ ಕೊಟ್ಟಿದ್ದಾರೆ. ಇತ್ತ ನವೆಂಬರ್ 21ಕ್ಕೆ ಡಿ.ಕೆ.ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಈ ಸುದ್ದಿ ಈಗಾಗಲೇ ಪತ್ರಿಕೆಯೊಂದರಲ್ಲಿ ಪ್ರಕಟವೂ ಆಗಿದ್ದು, ಚರ್ಚೆಗಳಿಗೆ ಕಾರಣವಾಗಿದೆ
ಹೌದು, ಕಾಂಗ್ರೆಸ್ನಲ್ಲಿ ಈ ವರ್ಷವೇ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹಲವರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಿಎಂ ಕುರ್ಚಿಯ ಪ್ರಬಲ ಆಕಾಂಕ್ಷಿ ಎನ್ನುವುದು ಕೂಡ ಹೊಸ ವಿಚಾರವೇನಲ್ಲ. ಆದರೆ ಸಿದ್ದರಾಮಯ್ಯ ಅವರು ಹಲವು ವೇದಿಕೆಗಳಲ್ಲಿ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ. ಇದರ ನಡುವೆಯೂ ಸಿಎಂ ಬದಲಾವಣೆಯ ಚರ್ಚೆಗಳು ಬಿರುಸುಗೊಂಡಿವೆ. ಇದೀಗ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕ ಕೂಡ ಘೋಷಣೆಯಾಗಿದೆ. ಆದರೆ ಇದರ ಸತ್ಯಾಸತ್ಯತೆ ಇನ್ನೂ ತಿಳಿದುಬಂದಿಲ್ಲ.
ದಿನಪತ್ರಿಕೆಯೊಂದರಲ್ಲಿ “ನವೆಂಬರ್ 21 ಇಲ್ಲವೇ 26ಕ್ಕೆ ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣ?” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿದೆ. ರಾಜ್ಯದ 34ನೇ ಮುಖ್ಯಮಂತ್ರಿ ಪದಗ್ರಹಣಕ್ಕೆ ಮುಹೂರ್ತ ನಿಗದಿ. ನವೆಂಬರ್ 11ಕ್ಕೆ ದೆಹಲಿಗೆ ಡಿಕೆಸಿ ಭೇಟಿ ನೀಡಲಿದ್ದು, ಈಗಾಗಲೇ ವರಿಷ್ಠರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿಸಿದೆ.
ಸಿದ್ದರಾಮಯ್ಯ ಪ್ರತಿಕ್ರಿಯೆ ಏನು?
ಈ ಪತ್ರಿಕಾ ವರದಿಯ ವಿಚಾರವಾಗಿ ಮಾಧ್ಯಮದವರು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಡಿಕೆ ಶಿವಕುಮಾರ್ ಅವರು ನವೆಂಬರ್ 21ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಂತೆ ನಿಜಾನಾ ಸರ್? ಎಂದು ಪ್ರಶ್ನೆ ಕೇಳಿದ್ದಾರೆ. ಈ ವಿಚಾರ ಕೇಳಿ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರೆ. ದಿನಾಂಕ ನಿಗದಿ ಆಗಿರುವ ಬಗ್ಗೆ ನಿನಗೆ ಹೇಳಿದ್ರಾ? ನಿನಗೆ ಇದು ಹೇಗೆ ಗೊತ್ತಾಯ್ತು? ನಾನು ಎಲ್ಲ ಪತ್ರಿಕೆ ಓದುತ್ತೇನೆ? ಯಾವ ಪತ್ರಿಕೆಯಲ್ಲಿ ಈ ರೀತಿ ಬಂದಿದೆ? ನಾನು ನೋಡದ ಪತ್ರಿಕೆ ಯಾವುದು? ಎಂದಿದ್ದಾರೆ. ಬಳಿಕ ಪತ್ರಿಕೆಯ ಹೆಸರು ಹೇಳಿದ್ದಕ್ಕೆ ಏನೂ ಪ್ರತಿಕ್ರಿಯೆ ನೀಡದೆ ಸಿಎಂ ಸುಮ್ಮನೆ ತೆರಳಿದ್ದಾರೆ.
ಸದ್ಯ ಪತ್ರಿಕೆಯ ವರದಿ ಫೋಟೋ ವೈರಲ್ ಆಗಿರುವುದು ಮಾತ್ರವಲ್ಲದೆ, ಕಾಂಗ್ರೆಸ್ನಲ್ಲಿ ಕಿಡಿ ಹೊತ್ತಿಸಿದೆ. ಕೆಲವರು ಇದನ್ನು ನವೆಂಬರ್ ಕ್ರಾಂತಿ ಎಂದು ಕರೆಯುತ್ತಿದ್ದಾರೆ. ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗಿಬಂದಿದ್ದನ್ನು ಈ ವರದಿಯೊಂದಿಗೆ ತಳುಕು ಹಾಕಲಾಗುತ್ತಿದೆ. ಡಿಕೆಶಿ ಹೈಕಮಾಂಡ್ ಭೇಟಿಯಾಗಿ ಸಿಎಂ ಬೇಡಿಕೆ ಇಟ್ಟಿದ್ದಾರೆ. ಇದನ್ನು ಸಕಾರಾತ್ಮಕ ಸ್ಪಂದನೆ ಸಿಕ್ಕಿರಬಹುದು. ಹೀಗಾಗಿ ದಿನಾಂಕ ಕೂಡ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ. ಈ ಪತ್ರಿಕಾ ವರದಿಯ ಸತ್ಯಾಸತ್ಯತೆ ಕೆಲವೇ ದಿನಗಳಲ್ಲಿ ತಿಳಿಯಲಿದೆ.