Published
3 months agoon
By
Akkare News
ಪುತ್ತೂರು: ಈ ಬಾರಿಯ ಹೊಸ ಕೊಯ್ಲಿನ ಅಡಕೆ ಇನ್ನೂ ಮಾರುಕಟ್ಟೆಗೆ ಸಮರ್ಪಕವಾಗಿ ಕಾಲಿಟ್ಟಿಲ್ಲ. ಆದರೆ ಕೆಜಿ ಅಡಕೆ ಧಾರಣೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಿದೆ. ಕೆಲ ದಿನಗಳ ಹಿಂದೆ 400 ರೂ.ಗಳ ಗಡಿಯಲ್ಲಿ ಬಂದು ನಿಂತಿದ್ದ ಮಂಗಳೂರು ಚಾಲಿ ಹೊಸ ಅಡಕೆ ಧಾರಣೆಯನ್ನು ಗುರುವಾರ ಕ್ಯಾಂಪ್ಕೊ 410 ರೂ.ಗೆ ನಿಗದಿ ಮಾಡಿದೆ.ಹೊರ ಮಾರುಕಟ್ಟೆಯಲ್ಲಿ ಕೆಜಿ ಅಡಕೆಯನ್ನು 415 ರೂ. ಖರೀದಿಸಲೂ ವ್ಯಾಪಾರಸ್ಥರು ಸಿದ್ಧರಾಗಿದ್ದಾರೆ.

ಸಾಮಾನ್ಯವಾಗಿ ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ಅಡಕೆ ಕೊಯ್ಲು ಆರಂಭಗೊಳ್ಳುತ್ತದೆ. ಈ ಋುತುಮಾನದ ಉದ್ದಕ್ಕೂ 3 ರಿಂದ 4 ಬಾರಿ ಕೊಯ್ಲು ಮಾಡಲಾಗುತ್ತದೆ. ಮೊದಲ ಕೊಯ್ಲು ಆರಂಭಕ್ಕೆ ಮೊದಲೇ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ನಿಗದಿಯಾಗುತ್ತದೆ. ಆದರೆ ಈ ಬಾರಿ ಧಾರಣೆ ನಿಗದಿಯಾಗಿ ತಿಂಗಳುಗಳು ಉರುಳಿದರೂ ಬೆಳೆಗಾರರಿಗೆ ಮಾತ್ರ ಇದರ ಪ್ರಯೋಜನ ಸಿಕ್ಕಿಲ್ಲ.

ವಿಪರೀತ ಕೊಳೆರೋಗದ ಕಾರಣದಿಂದ ಭಾರಿ ಪ್ರಮಾಣದ ಅಡಕೆ ಮರದಿಂದಲೇ ಬಿದ್ದಿದ್ದು, ಹಣ್ಣಡಕೆ ಕೊಯ್ಲು ಪೂರ್ಣ ಪ್ರಮಾಣದಲ್ಲಿ ಇನ್ನೂ ಆರಂಭಗೊಂಡಿಲ್ಲ. ಇನ್ನೊಂದೆಡೆ ಅಕಾಲಿಕವಾಗಿ ಮಳೆಯೂ ಸುರಿಯುತ್ತಿದ್ದು, ಕೊಯ್ಲಿಗೆ ಅಡ್ಡಿಯಾಗಿದೆ. ಅಷ್ಟೇ ಅಲ್ಲ ಮರದಲ್ಲಿ ಹಣ್ಣಡಕೆ ಪ್ರಮಾಣವೂ ಕಡಿಮೆ ಇದೆ ಎನ್ನುತ್ತಿದ್ದಾರೆ ಬೆಳೆಗಾರರು.
ಪೂರೈಕೆ ಕಡಿಮೆಯಿದ್ದು, ಬೇಡಿಕೆ ಹೆಚ್ಚಿದ್ದಾಗ ಸಹಜವಾಗಿ ಬೆಳೆಗಳ ಬೆಲೆ ಏರುತ್ತದೆ. ಅಡಕೆ ಮಾರುಕಟ್ಟೆಯಲ್ಲೂ ಇದೇ ತತ್ವ ಜಾರಿಯಾಗುತ್ತಿದೆ. ಪ್ರಸ್ತುತ ಕೆಜಿಗೆ 410 ರೂ.ಗೆ ಖರೀದಿ ಮಾಡುವ ಹೊಸ ಅಡಕೆಯನ್ನು ದೊಡ್ಡ ಮಟ್ಟದ ದಾಸ್ತಾನುಗಾರರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ನಂತರ ಧಾರಣೆ ಇನ್ನಷ್ಟು ಏರಿದ ಮೇಲೆ ಉತ್ತರ ಭಾರತಕ್ಕೆ ರವಾನಿಸುವ ತಂತ್ರಗಾರಿಕೆ ಮಾಡಿ ದೊಡ್ಡ ಮಟ್ಟದಲ್ಲಿ ಲಾಭ ಮಾಡಿಕೊಳ್ಳುತ್ತಾರೆ.

ಹೀಗಾಗಿ ಆದಷ್ಟು ಪ್ರಮಾಣದಲ್ಲಿ ಅಡಕೆ ಮಾರುಕಟ್ಟೆಗೆ ಹರಿದು ಬರಲಿ ಎಂಬ ಕಾರಣಕ್ಕೆ ದರ ಏರಿಕೆ ತಂತ್ರ ಉಪಯೋಗಿಸಲಾಗುತ್ತದೆ. ಈ ನಡೆಯನ್ನು ಇತ್ತೀಚಿನ ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಂಡಿರುವ ಅಡಕೆ ಬೆಳೆಗಾರರು ಕೂಡ ಈಗ ಜಾಣ ನಡೆ ಅನುಸರಿಸುತ್ತಿದ್ದು, ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಅಡಕೆಯನ್ನು ಮಾತ್ರ ಮಾರುಕಟ್ಟೆಗೆ ಹರಿಯ ಬಿಡುತ್ತಿದ್ದಾರೆ. ಈ ಮೂಲಕ ಇನ್ನಷ್ಟು ದರ ಹೆಚ್ಚಿಸಬೇಕಾದ ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಅಡಕೆ ಬೆಳೆಗಾರರಿಗೆ ಬಂಪರ್ ದರ ಕಾದಿರುವುದಂತೂ ಸುಳ್ಳಲ್ಲ..








