Published
1 year agoon
By
Akkare News
ಮಂಗಳೂರು : ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಆರೋಪದಲ್ಲಿ ದಾಳಿ ನಡೆಸಿ ಪಿಠೋಪಕರಣ ಧ್ವಂಸಗೊಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.


ಹಲವು ಸಮಯದಿಂದ ಸೈಲೆಂಟ್ ಆಗಿದ್ದ ಪ್ರಸಾದ್ ಅತ್ತಾವರ ನೇತೃತ್ವದ ರಾಮ ಸೇನೆಯ ಕಾರ್ಯಕರ್ತರು ಈ ಪುಂಡಾಟಿಕೆ ನಡೆಸಿದ್ದಾರೆ. ನಗರದ ಬಿಜೈ ಬಳಿ ಕಾರ್ಯಾಚರಿಸ್ತಾ ಇದ್ದ ಕಲರ್ಸ್ ಎಂಬ ಯುನಿಸೆಕ್ಸ್ ಸೆಲೂನ್ಗೆ ಈ ದಾಳಿ ನಡೆಸಲಾಗಿದೆ. ಪಾರ್ಲರ್ ನಲ್ಲಿ ನಾಲ್ವರು ಯುವತಿಯರಿದ್ದು ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಯುವತಿಯರು ಅಳುತ್ತಾ ಕೈ ಮುಗಿದರೂ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ. ಪಾರ್ಲರ್ ದಾಳಿಯ ವೇಳೆ ಕಾಂಡೋಮ್ ಸಿಕ್ಕಿದ್ದು ಹಾಗಾಗಿ ಇಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.


ಹಲವು ವರ್ಷಗಳ ಹಿಂದೆ ಶ್ರೀರಾಮ ಸೇನೆಯ ಪಬ್ ದಾಳಿ , ಜಾಗರಣ ವೇದಿಕೆಯ ಹೋಂ ಸ್ಟೇ ದಾಳಿಯ ಮಾದರಿಯಲ್ಲೇ ಈ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ್ದು ಅಲ್ಲದೆ ಪಾರ್ಲರ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪೀಠೋಪಕರಣಗಳನ್ನು ಹಾನಿ ಮಾಡಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉಡುಪಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಗೃಹ ಸಚಿವರು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವ್ಯಾಪಾರ ಮಾಡಲು ಎಲ್ಲರಿಗೂ ಮುಕ್ತ ಅವಕಾಶ ಇದ್ದು, ಅನೈತಿಕ ಚಟುವಟಿಕೆಯ ಅನುಮಾನ ಇದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು . ಯಾರೂ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

