Published
1 month agoon
By
Akkare Newsಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಉರುವಾಲು ಗ್ರಾಮದ ಕುಪ್ಪೆಟ್ಟಿಯಲ್ಲಿ ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ದನ, ಮೂರು ಕರುಗಳು ಸೇರಿ ನಾಲ್ಕು ಜಾನುವಾರುಗಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಾಹನ ಚಾಲಕ ಜಯಂತ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
ಸಂದೇಹ ಬಾರದಂತೆ ಸಾಗಾಟ
ಬಂಧಿತ ಜಯಂತ ಗೌಡ ಕುಪ್ಪೆಟ್ಟಿಯ ಬದ್ರುದ್ದೀನ್ ಯಾನೆ ಬದ್ರು ಎಂಬಾತನಿಗೆ ಗೋ ಸಾಗಾಟಕ್ಕೆ ಸಹಕರಿಸಿದ್ದು, ತನ್ನ ಎಳೆಯ ವಯಸ್ಸಿನ ಮಗುವನ್ನು ವಾಹನದಲ್ಲಿ ಕುಳ್ಳಿರಿಸಿ ಜಾನುವಾರುಗಳನ್ನು ತುಂಬಿದ ವಾಹನವನ್ನು ಚಲಾಯಿಸಿಕೊಂಡು ಹೋಗಿ ಬದ್ರುವಿಗೆ ತಲುಪಿಸುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಸುಳಿವು ಪಡೆದ ಬಜರಂಗ ದಳದ ಕಾರ್ಯಕರ್ತರು ರವಿವಾರ ಗೋ ಸಾಗಾಟ ನಿರತನಾಗಿದ್ದ ಜಯಂತ ಗೌಡನ ವಾಹನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಿಶೀಲನೆಗೆ ಒಳಪಡಿಸಿದಾಗ ಅದರಲ್ಲಿ ದಾಖಲೆ ರಹಿತವಾಗಿ ಸಾಗಾಟ ಮಾಡಲಾಗುತ್ತಿದ್ದ ನಾಲ್ಕು ಜಾನುವಾರುಗಳು ಪತ್ತೆಯಾದವು. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಪ್ಪಿನಂಗಡಿ ಪರಿಸರದಲ್ಲಿ ಅಕ್ರಮವಾಗಿ ಗೋ ಸಾಗಾಟದ ಪ್ರಕರಣ ಆಗಾಗ್ಗೆ ನಡೆಯುತ್ತಿದೆ ಎನ್ನಲಾಗಿದೆ.