Published
8 months agoon
By
Akkare News
ಮಂಗಳೂರು: ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರರಿಗೂ ಮೊಬೈಲ್ ಅಂದರೆ ಅಚ್ಚು ಮೆಚ್ಚು. ಒಂದು ರೀತಿ ಬಾಳ ಸಂಗಾತಿ ರೀತಿ. ಕೆಲವರಿಗೆ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯೋದಕ್ಕೆ ಸಾಧ್ಯವಿಲ್ಲ. ಒಂದರ್ಥದಲ್ಲಿ ಮೊಬೈಲ್ ಬಳಸುವುದು ಒಂದು ವ್ಯಸನದ ರೀತಿ ಪರಿವರ್ತನೆಯಾಗಿದೆ.
ಇದರಿಂದ ಕಣ್ಣಿಗೂ ಮನಸ್ಸಿಗೂ ಆರೋಗ್ಯಕ್ಕೂ ಸಮಸ್ಯೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಚ್ಚಿಬೀಳಿಸುವ ವರದಿಯೊಂದನ್ನು ಆರೋಗ್ಯ ಇಲಾಖೆ ರಿಲೀಸ್ ಮಾಡಿದ್ದು, ಒಂದಲ್ಲ ಎರಡಲ್ಲ ಬರೊಬ್ಬರಿ ನಾಲ್ಕು ಸಾವಿರ ಮಕ್ಕಳು ದೃಷ್ಟಿ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಈ ವರದಿಯಲ್ಲಿ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.


ಮೊಬೈಲ್ ನಿಂದ ಮಕ್ಕಳಿಗೆ ದೃಷ್ಟಿ ದೋಷ
ಒಂದರ್ಥದಲ್ಲಿ ಮೊಬೈಲ್ ಬಳಸೋದು ಒಂದು ವ್ಯಸನದ ರೀತಿ ಪರಿವರ್ತನೆಯಾಗಿದೆ. ಇದರಿಂದ ನಮ್ಮ ಕಣ್ಣಿಗೂ ಮನಸ್ಸಿಗೂ ಆರೋಗ್ಯಕ್ಕೂ ಒಂದು ರೀತಿ ಸಮಸ್ಯೆ ಅನ್ನೋದು ಗೊತ್ತಿದ್ರು ನಾವ್ಯಾರು ಮೊಬೈಲ್ ಬಳಸುವುದನ್ನು ಕಡಿಮೆ ಮಾಡಲ್ಲ. ಹದಿ ಹರೆಯದವರಾದ್ರು ಓಕೆ ಆದರೆ ಪುಟ್ಟ ಪುಟ್ಟ ಮಕ್ಕಳು ಈ ಮೊಬೈಲ್ ಬಳಸಿ ಅದೆಂಥ ಸಂಕಷ್ಟಕ್ಕೆ ಸಿಲುಕಿದ್ದಾರೆ ಗೊತ್ತಾ? ರಾಷ್ಟ್ರೀಯ ಅಂದತ್ವ ನಿವಾರಣ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಭಯಾನಕ ಮಾಹಿತಿ ಪತ್ತೆಯಾಗಿದೆ. ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮಕ್ಕಳು ದೃಷ್ಟಿ ದೋಷದ ಸಮಸ್ಯೆ ಇದ್ದು, ಸುಮಾರು 4398 ಮಕ್ಕಳಿಗೆ ಗಂಭೀರ ದೃಷ್ಟಿ ದೋಷದ ಸಮಸ್ಯೆ ಕಂಡುಬಂದಿರುವುದು ವರದಿಯಲ್ಲಿ ದೃಢಪಟ್ಟಿದೆ. ಈ ಪೈಕಿ 2066 ಮಕ್ಕಳಿಗೆ ಕನ್ನಡಕ ಕಡ್ಡಾಯವಾಗಿ ಧರಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


ದೃಷ್ಟಿ ಜತೆಗೆ ಮಾನಸಿಕ ಆರೋಗ್ಯ ಸಮಸ್ಯೆ
ದಕ್ಷಿಣ ಕನ್ನಡ ಜಿಲ್ಲೆಯ 1376 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳನ್ನು ಒಳಗೊಂಡ ಈ ತಪಾಸಣೆ ರಾಷ್ಟ್ರೀಯ ಅಂದತ್ವ ನಿವಾರಣಾ ಯೋಜನೆಯಡಿ ಕೈಗೊಳ್ಳಲಾಗಿತ್ತು. 1,45,951 ಮಕ್ಕಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 4,398 ಮಕ್ಕಳಿಗೆ ದೃಷ್ಟಿದೋಷ ಕಂಡುಬಂದಿದೆ. ಮೊಬೈಲ್ ಬಳಕೆಯಿಂದ ಕೇವಲ ದೃಷ್ಟಿದೋಷ ಮಾತ್ರವಲ್ಲ, ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಇದಕ್ಕಾಗಿ ಮಾನಸಿಕ ಆರೋಗ್ಯ ಕುರಿತು ಮನೋಸ್ಥೈರ್ಯ ಎಂಬ ಜಾಗೃತಿ ಅಭಿಯಾನದ ಜೊತೆಗೆ ಪ್ರತಿ ಶಾಲೆಯ ಒಬ್ಬ ಶಿಕ್ಷಕಿಗೆ ವಿಶೇಷ ತರಬೇತಿ ನೀಡಿ ಮಕ್ಕಳ ಮಾನಸಿಕ ಸಮಸ್ಯೆ ಗುರುತಿಸಲು ಯೋಗ್ಯ ಮಾಡಲಾಗಿದೆ. ಅತಿಯಾದ ಮೊಬೈಲ್ ಬಳಕೆಯು ಮಕ್ಕಳ ದೃಷ್ಟಿ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

ಒಟ್ಟಿನಲ್ಲಿ ಆನ್ಲೈನ್ ಕ್ಲಾಸ್ ಹೆಸರಲ್ಲಿ ಮಕ್ಕಳ ಕೈ ಸೇರಿದ್ದ ಮೊಬೈಲ್ ಇದೀಗ ಅವರ ಕೈಯಿಂದ ಬಿಡಿಸಲಾಗದಷ್ಟು ಬಿಗಿಯಾಗಿದೆ. ಇನ್ನಾದರು ಪೋಷಕರು ಎಚ್ಚೆತ್ತು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಬೇಕು, ಸಮಯಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸಿ, ತಜ್ಞರ ಸಲಹೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ.


