Published
8 months agoon
By
Akkare News
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು “ಮಂಗಳೂರು ಜಿಲ್ಲೆ’ಯಾಗಿ ಮರು ನಾಮಕರಣ ಮಾಡ ಬೇಕೆಂಬ ಬಗ್ಗೆ ಮಂಗಳವಾರ ನಡೆದ ವಿವಿಧ ಪಕ್ಷಗಳ ಮುಖಂಡರು ಹಾಗೂ ನಾನಾ ಕ್ಷೇತ್ರಗಳ ಸಾಧಕರ ಮಹತ್ವದ ಸಭೆಯಲ್ಲಿ ನಿರ್ಣಯ ಸ್ವೀಕರಿಸಿದ್ದು, ದಿಶಾ ಸಭೆಯಲ್ಲೂ ಪ್ರಸ್ತಾವವಾಗಿದೆ. ಹೀಗಾಗಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಗೃಹ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲೂ ಪ್ರಸ್ತಾವವಾಗುವ ಸಾಧ್ಯತೆ ಇದೆ.


ದಿನಗಳೆದಂತೆ ಮರು ನಾಮಕರಣದ ಕೂಗು ಬಲ ವಾಗ ತೊಡಗಿದೆ. ಹಲವು ಪ್ರಮುಖರು ಪಕ್ಷಬೇಧ ಮರೆತು ಇದಕ್ಕೆ ದನಿಗೂಡಿಸಿದ್ದಾರೆ. ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಶಾಸಕರು, ಸಂಸದರ ಸಮ್ಮತಿಯ ಜಂಟಿ ಪ್ರಸ್ತಾವವನ್ನು ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಲು ನಿರ್ಣಯಿಸಲಾಗಿದೆ.
ಮಂಗಳವಾರ ನಡೆದ ರಾಜಕೀಯ ಪಕ್ಷಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರ ಸಭೆಯಲ್ಲಿ ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿ ಸಲು ಸಭೆಯಲ್ಲಿ ನಿರ್ಧರಿಸ ಲಾಯಿತು. ರಾಜ್ಯದ ಇತರ ಕೆಲವು ಜಿಲ್ಲೆಗಳ ಹೆಸರನ್ನು ಬದಲಾಯಿಸಿರುವುದು, ಹೊರ ಪ್ರದೇಶಗಳಲ್ಲಿ ಈ ಭಾಗ ವನ್ನು “ಮಂಗಳೂರು’ ಎಂದೇ ಗುರುತಿಸುವ ಅಂಶ ಗಳು ಈ ಆಗ್ರಹಕ್ಕೆ ಒತ್ತಾಸೆಯಾಗಿ ಕೇಳಿಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ
ದಕ್ಷಿಣ ಕನ್ನಡ ಜಿಲ್ಲೆಗೆ “ಮಂಗಳೂರು’ ಎಂಬ ಹೆಸರಿಡಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವಾಗಿ ನಡೆಯುತ್ತಿದೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದ ದಲ್ಲಿ ಸೇರಿಸಬೇಕು, ರಾಜ್ಯದ ಅಧಿಕೃತ ಭಾಷೆ ಯನ್ನಾಗಿಸಬೇಕು ಎಂಬ ವಿಷಯದಲ್ಲಿ ನಡೆದಂತೆ “ಮಂಗಳೂರು’ ಪುನರ್ನಾಮಕರಣದ ಕೂಗು ಕೂಡ ಟ್ವಿಟರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ
“ದಕ್ಷಿಣ ಕನ್ನಡ’ ಹೆಸರು ಮಂಗಳೂರು ಜಿಲ್ಲೆಯಾಗಿ ಬದಲಿಸಲು ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾಯಿಸಿ “ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಬೇಕು ಎಂಬ ಒತ್ತಾಯ ಬಲವಾಗಿದೆ. ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿಯು ನಿರ್ಧರಿಸಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಹಿತ ವಿವಿಧ ಪಕ್ಷದ ಮುಖಂಡರು ಹಾಗೂ ಸಮಾಜದ ವಿವಿಧ ಕ್ಷೇತ್ರದ ಪ್ರಮುಖರ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಸ್ತಾವನೆಯ ಬೇಡಿಕೆ ಮುಂದಿರಿಸಿದರು.



ಜಾನಪದ ವಿದ್ವಾಂಸ ದಯಾನಂದ ಕತ್ತಲ್ಸಾರ್ ಮಾತನಾಡಿ, ವಿಜಯ ನಗರ ಅರಸರ ಕಾಲದಿಂದಲೂ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಗೆ ಇದ್ದ ಐತಿಹಾಸಿಕ ಹೆಸರು ಮಂಗಳೂರು ರಾಜ್ಯವಾಗಿತ್ತು. ಅದೇ ಹೆಸರನ್ನು ಇಡೀ ಜಿಲ್ಲೆಗೆ ಇಡಬೇಕೆಂದು ಪಕ್ಷಾತೀತವಾಗಿ ರಾಜಕಾರಣಿಗಳು, ಚಿಂತಕರು, ತುಳುವರು ಹಾಗೂ ಧಾರ್ಮಿಕ ಮುಖಂಡರ ಬೇಡಿಕೆಯಾಗಿದೆ. ಮಂಗಳೂರು ಬ್ರಾÂಂಡ್ನಿಂದ ಮುಂದೆ ಉದ್ದಿಮೆಗಳು, ಐಟಿ ಕಂಪನಿಗಳು ಮತ್ತು ಇತರ ಯೋಜನೆಗೆ ಸಹಕಾರಿಯಾಗಲಿದೆ. ಮಂಗಳೂರು ತಾಲೂಕು ಈಗಾಗಲೇ ಇರುವುದರಿಂದ ಈ ಹೆಸರನ್ನು ಜಿಲ್ಲೆಗೆ ಇಡುವುದರಿಂದ ಕಾನೂನಾತ್ಮಕ ತೊಡಕು ಬಾರದು. ಜಿಲ್ಲೆಯ ಸಂಸದರು, ಶಾಸಕರು, ಎಂಎಲ್ಸಿಗಳು ಮಂಗಳೂರು ಹೆಸರಿನ ಕುರಿತು ಒಲವು ತೋರಿಸಿದ್ದಾರೆ ಎಂದರು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ, ದಕ್ಷಿಣ ಕನ್ನಡ ಎಂಬುವುದು ನಿರ್ದಿಷ್ಟವಾದ ಅರ್ಥವನ್ನು ನೀಡದು. ಪೋರ್ಚ್ಗೀಸರು ಮತ್ತು ಬ್ರಿಟಿಷರು ನೀಡಿದ ಬಳುವಳಿ ಹೆಸರು ಕೆನರಾ. ಮುಂದೆ ಕೆನರಾ ವಿಭಜನೆಗೊಂಡು ನಾರ್ತ್ ಕೆನರಾ, ಸೌತ್ ಕೆನರಾವಾಯಿತು. ಈ ಹೆಸರು ಯಾವುದೇದಿಕ್ಕು ಸೂಚಿಸದು. ರಾಜ್ಯದ ಕೆಲವು ಭಾಗದ ಹೆಸರು ಬದಲಾಗಿದೆ. ಇದೇ ರೀತಿ ಇಲ್ಲಿಯೂ ಬದಲಾವಣೆ ಆಗಬೇಕಿದೆ ಎಂದರು.
ಬಿಜೆಪಿ ಮುಖಂಡ ಕಿರಣ್ ಕುಮಾರ್ ಕೋಡಿಕಲ್, ಮಾಜಿ ಶಾಸಕ ಬಿ.ಎ.ಮೊಯಿದ್ದೀನ್ ಬಾವಾ, ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಜಿ.ಪಂ ನಿಕಟಪೂರ್ವ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಾಮಾಜಿಕ ಹೋರಾಟಗಾರ ದಿಲ್ರಾಜ್ ಆಳ್ವ, ಮಾತನಾಡಿ, “ತಾಲೂಕು ಕೇಂದ್ರದ ಹೆಸರನ್ನು ಜಿಲ್ಲೆಗೆ ಇಟ್ಟ ಸಾಕಷ್ಟು ಉದಾಹರಣೆಗಳಿವೆ. ಜಿಲ್ಲೆಯ ಹೊರಗೆ, ದೇಶ-ವಿದೇಶದಲ್ಲಿ ಇಲ್ಲಿನವರನ್ನು ಮಂಗಳೂರಿನವರು ಎಂದು ಗುರುತಿಸಲಾಗುತ್ತಿದೆ. ವಿಮಾನ ನಿಲ್ದಾಣ, ಎನ್ಎಂಪಿಟಿ, ಎಂಆರ್ಪಿಎಲ್ ಸಹಿತ ವಿವಿಧ ವಿಷಯದಲ್ಲಿ ಮಂಗಳೂರು ಹೆಸರು ಪ್ರಧಾನವಾಗಿದೆ ಎಂದರು.
ವಿಹಿಂಪ ಮುಖಂಡ ಪ್ರದೀಪ್ ಸರಿಪಲ್ಲ, ಪ್ರಮುಖರಾದ ಯೋಗೀಶ್ ಶೆಟ್ಟಿ ಜಪ್ಪು, ಪ್ರೇಮನಾಥ್, ರೋಶನ್ ರೊನಾಲ್ಡ್, ಶೈಲೇಶ್, ಉದಯ ಪೂಂಜ, ಮಹೀ ಮೂಲ್ಕಿ, ಭರತ್ ಬಲ್ಲಾಳ್ಬಾಗ್, ರಾಜೇಶ್ ಆಳ್ವ ಮುಂತಾದವರು ಉಪಸ್ಥಿತರಿದ್ದರು.