Published
7 months agoon
By
Akkare News
ಧರ್ಮಸ್ಥಳ ಹಾಗೂ ಉಜಿರೆ ವ್ಯಾಪ್ತಿಯಲ್ಲಿ ಎಸ್ಐಟಿ ನಡೆಸುತ್ತಿರುವ ತನಿಖೆ ಬಗ್ಗೆ ವರದಿ ಮಾಡಲು ತೆರಳಿದ್ದ ವಿವಿಧ ಡಿಜಿಟಲ್ ಮಾಧ್ಯಮ ಮತ್ತು ಸ್ಯಾಟಲೈಟ್ ಮಾಧ್ಯಮಗಳ ವರದಿಗಾರ ಮತ್ತು ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಈ ಗುಂಪು ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಆಗ್ರಹಿಸಿದೆ.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಆಕ್ಷೇಪ , ಅಭಿಪ್ರಾಯ ಸಲ್ಲಿಸಲು ಅಥವಾ ಪ್ರತಿಭಟನೆಗೆ ಕಾನೂನು ವ್ಯಾಪ್ತಿಯಲ್ಲಿ ಸಾಕಷ್ಟು ಅವಕಾಶಗಳು ಇರುವಾಗ, ಮಾಧ್ಯಮ ಪ್ರತಿನಿಧಿಗಳ ಮೇಲೆ ನೇರ ದೈಹಿಕ ಹಲ್ಲೆ ನಡೆಸುವುದು ಮಾಧ್ಯಮದ ಧ್ವನಿ ಹತ್ತಿಕ್ಕುವ ಪ್ರಜಾತಂತ್ರ ವಿರೋಧಿ ನಿಲುವು ಆಗಿರುತ್ತದೆ. ಈ ರೀತಿಯ ನಿಲುವನ್ನು ಜರ್ನಲಿಸ್ಟ್ ಯೂನಿಯನ್ ತೀವ್ರವಾಗಿ ಖಂಡಿಸುತ್ತದೆ.
ಹಲ್ಲೆಗೊಳಗಾಗಿರುವ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಆಗ್ರಹಿಸಿದೆ.

ಎಸ್ಐಟಿ ತನಿಖೆಯು ಸರ್ಕಾರದ ಆದೇಶ ಹಾಗೂ ಕಾನೂನು ಪರಿವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಪಾರದರ್ಶಕವಾಗಿ ವರದಿಗಾರಿಕೆ ಮಾಡುವುದರ ವಿರುದ್ಧ ತಡೆವೊಡ್ಡುವುದು ಕಾನೂನು ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿರುತ್ತದೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.



ಖಂಡನಾ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಜ್ಯೋತಿಪ್ರಕಾಶ್ ಪುಣಚ, ಪುತ್ತೂರು ತಾಲೂಕು ಸ್ಥಾಪಕಾಧ್ಯಕ್ಷರಾದ ಸಂತೋಷ್ ಕುಮಾರ್ ಶಾಂತಿನಗರ, ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊರಾಸ್, ಚಿನ್ಮಯಕೃಷ್ಣ, ಜಯಪ್ರಕಾಶ್ ಬದಿನಾರ್, ಜಗದೀಶ್ ಕಜೆ ಉಪಸ್ಥಿತರಿದ್ದರು.







