Published
3 weeks agoon
By
Akkare News
ಮಂಗಳೂರಿನ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಮತ್ತು ಎಸಿಎನ್ಎ ರಾಜ್ಯ ಪ್ರಧಾನ ಕಾರ್ಯದರ್ಶಿ, ಉಜಿರೆ ನಿವಾಸಿ ತನುಷ್ ಶೆಟ್ಟಿ ನಡುವಿನ ‘ರೋಡ್ ರೇಜ್’ ವಿವಾದ ಹೊಸ ತಿರುವು ಪಡೆದಿದೆ. ಒಂದೂವರೆ ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಬಿಲ್ಡರ್ ಜಿತೇಂದ್ರ ಕೊಟ್ಟಾರಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿರುವುದು ಸಂತಸ ತಂದಿದ್ದು, ಇದು ನಿಜಕ್ಕೂ ನ್ಯಾಯಕ್ಕೆ ಸಿಕ್ಕ ಜಯ ಎಂದು ತನುಷ್ ಶೆಟ್ಟಿ ಹೇಳಿದ್ದಾರೆ.

ಮಂಗಳೂರಿನ ಪ್ರೆನ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 9, 2024 ರಂದು ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಬಜ್ಪೆ ಬಳಿ ಜಿತೇಂದ್ರ ಕೊಟ್ಟಾರಿ ಅವರು rash ಆಗಿ ಕಾರು ಚಲಾಯಿಸಿ ತಮ್ಮ ಕಾರಿಗೆ ಢಿಕ್ಕಿ ಹೊಡೆಯುವಂತೆ ಬಂದಿದ್ದರು. ಇದನ್ನು ಪ್ರಶ್ನಿಸಲು ಹೋದಾಗ, ಕೊಟ್ಟಾರಿ ಅವರು ಗನ್ ತೆಗೆದು ಬೆದರಿಕೆ ಹಾಕಿದ್ದಾರೆ ಎಂದು ತನುಷ್ ಆರೋಪಿಸಿದ್ದಾರೆ.

“ನಾವು ಹಾರ್ನ್ ಹಾಕಿ ಗಾಡಿ ನಿಲ್ಲಿಸಲು ಹೇಳಿದಾಗ ಕೊಟ್ಟಾರಿ ನಿಲ್ಲಿಸಲಿಲ್ಲ. ಕದ್ರಿ ಬಳಿ ಅವರ ಮನೆ ಹತ್ತಿರ ಹೋದಾಗ, ಅವರು ತಾವು ದೊಡ್ಡ ಬಿಲ್ಡರ್ ಎಂದು ಕೂಗಾಡಿ ಗನ್ ತೆಗೆದರು. ಅವರ ಮಗಳು ಕೂಡ ‘ಇವರನ್ನು ಶೂಟ್ ಮಾಡಿ ಸಾಯಿಸಿ’ ಎಂದು ಕಿರುಚಾಡುತ್ತಿದ್ದಳು. ನಾವು ಆತ್ಮರಕ್ಷಣೆಗಾಗಿ ಅವರ ಕೈಯಲ್ಲಿದ್ದ ಗನ್ ಮತ್ತು ಕಂಬಳದ ಬೆತ್ತವನ್ನು ಕೆಳಗೆ ಬೀಳಿಸಿದೆವು ಎಂದು ತನುಷ್ ವಿವರಿಸಿದರು.
ಈ ಪ್ರಕರಣದಲ್ಲಿ ಜಿತೇಂದ್ರ ಕೊಟ್ಟಾರಿ ಅವರು ಅತ್ಯಂತ ಕೆಳಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ತನುಷ್ ಆಕ್ರೋಶ ವ್ಯಕ್ತಪಡಿಸಿದರು. “ತಮ್ಮ ಮೇಲಿನ ಕೇಸ್ ಗಟ್ಟಿಗೊಳಿಸಲು ಕೊಟ್ಟಾರಿಯವರು ಸ್ವಂತ ಮಗಳನ್ನೇ ಬಳಸಿಕೊಂಡು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊ* ಬೆದರಿಕೆಯಂತಹ ಸುಳ್ಳು ಪ್ರಕರಣಗಳನ್ನು ದಾಖಲಿಸಿದರು. ಒಬ್ಬ ತಂದೆಯಾಗಿ ಮಗಳನ್ನು ಇಂತಹ ಕೆಲಸಕ್ಕೆ ಬಳಸುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ,” ಎಂದು ಅವರು ಕಿಡಿಕಾರಿದರು.
ಅಂದು ಪೊಲೀಸರು ನನ್ನ ಹೇಳಿಕೆಯನ್ನು ಪಡೆಯದೆ, ಕೌಂಟರ್ ಕೇಸ್ ದಾಖಲಿಸಲು ಅವಕಾಶ ನೀಡದೆ ಏಕಪಕ್ಷೀಯವಾಗಿ ನಡೆದುಕೊಂಡಿದ್ದರು.ಎಸ್ಐ ರೇಖಾ ಅವರ ಮುಂದೆಯೇ ಜಿತೇಂದ್ರ ಕೊಟ್ಟಾರಿ ಅವರು ‘ನಿನ್ನನ್ನು ಸಾಯುವ ತನಕ ಎನಿಮಿಯಾಗಿ ನೋಡಿ ಲೈಫ್ ಹಾಳು ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದರು. ಪೊಲೀಸರು ನನ್ನನ್ನು ರಾತ್ರೋರಾತ್ರಿ ಲಾಕಪ್ನಲ್ಲಿ ಕೂರಿಸಿ, ಮರುದಿನ ಜೈಲಿಗೆ ಕಳುಹಿಸಿದರು. ಜೈಲಿನಲ್ಲೂ ನನಗೆ ಜೀವಭಯವಿದ್ದ ಕಾರಣ ವಿಶೇಷ ಭದ್ರತೆ ನೀಡಲಾಗಿತ್ತು,” ಎಂದು ತನುಷ್ ನೋವು ತೋಡಿಕೊಂಡರು.
15 ದಿನಗಳ ಬಳಿಕ ಜೈಲಿನಿಂದ ಹೊರಬಂದ ನಂತರ ನಾನು ನ್ಯಾಯಾಲಯದ ಮೊರೆ ಹೋಗಿದ್ದೆ. ಘಟನೆ ನಡೆದು ಒಂದೂವರೆ ವರ್ಷದ ನಂತರ, ಈಗ ನ್ಯಾಯಾಲಯವು ಜಿತೇಂದ್ರ ಕೊಟ್ಟಾರಿ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿರುವುದು ನನಗೆ ಸಂತಸ ತಂದಿದೆ. ಈಗ ಕೋರ್ಟ್ ತೆಗೆದುಕೊಂಡ ನಿರ್ಧಾರದಿಂದ ನನಗೆ ನ್ಯಾಯ ಸಿಗುವ ಭರವನೆ ಮೂಡಿದೆ ಎಂದು ಅವರು ತಿಳಿದರು





